ಶಿಕ್ಷಣ ಕ್ಷೇತ್ರದಂತೆ ಉದ್ಯೋಗ ಮತ್ತು ಉದ್ಯಮಶೀಲತೆಯಲ್ಲೂ ಉಡುಪಿ ರಾಜ್ಯಕ್ಕೆ ಮಾದರಿಯಾಗಲಿ: ಕಾಂತಾ ನಾಯಕ

0
135

ಉಡುಪಿ: ಶೈಕ್ಷಣಿಕವಾಗಿ ರಾಜ್ಯದಲ್ಲೇ ಮುಂಚೂಣಿಯಲ್ಲಿರುವ ಉಡುಪಿ ಜಿಲ್ಲೆಯ ವಿದ್ಯಾರ್ಥಿಗಳು ಕೌಶಲ್ಯಾಧಾರಿತ ಉದ್ಯೋಗ ಪ್ರಾಪ್ತಿ ಮತ್ತು ಉದ್ಯಮಶೀಲತೆಯಲ್ಲೂ ಗಮನಾರ್ಹ ಸಾಧನೆ ಮಾಡಿ ರಾಜ್ಯಕ್ಕೇ ಮಾದರಿಯಾಗಬೇಕು. ಜಿಲ್ಲೆಯಿಂದ ಹೆಚ್ಚಿನ ವಿದ್ಯಾರ್ಥಿಗಳು ದೇಶ ಹಾಗೂ ವಿದೇಶಗಳ ಪ್ರತಿಷ್ಠಿತ ಕಂಪನಿಗಳಲ್ಲಿ ಉದ್ಯೋಗ ದೊರಕಿಸಿಕೊಳ್ಳುವ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯ ಪ್ರವೃತ್ತರಾಗಬೇಕು ಎಂದು ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ ಅಧ್ಯಕ್ಷೆ ಶಿವ ಕಾಂತಮ್ಮ (ಕಾಂತಾ )ನಾಯಕ ಹೇಳಿದರು.

ಅವರು ಮಣಿಪಾಲದ ರಜತಾದ್ರಿಯ ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ನಡೆದ ಕೌಶಲ್ಯಾಭಿವೃದ್ಧಿ ನಿಗಮದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಶಾಲಾ ಹಂತಗಳಲ್ಲೇ ಮಕ್ಕಳಲ್ಲಿ ವಿಶೇಷವಾಗಿ ಹೆಣ್ಣು ಮಕ್ಕಳಲ್ಲಿ ಕೌಶಲ್ಯಾಧಾರಿತ ಹಾಗೂ ಉದ್ಯಮಶೀಲತೆಯನ್ನು ಬೆಳೆಸುವಂತಹ ತರಬೇತಿ ನೀಡುವಲ್ಲಿ ಜಿಲ್ಲೆಯ ಎಲ್ಲ ವಿದ್ಯಾ ಸಂಸ್ಥೆಗಳು ಮತ್ತು ಐಟಿಐಗಳು ಮುತುವರ್ಜಿ ವಹಿಸಬೇಕು. ಯುವನಿಧಿ ಯೋಜನೆಯಡಿ ೩೯೬೨ ಅಭ್ಯರ್ಥಿಗಳು ನೋಂದಣಿಯಾಗಿದ್ದು ಇವರಲ್ಲಿ ೩೦೮೮ ಅಭ್ಯರ್ಥಿಗಳು ಫಲಾನುಭವಿಗಳಾಗಿದ್ದು ಈ ಸಂಖ್ಯೆಯನ್ನು ಹೆಚ್ಚಿಸಬೇಕು ಹಾಗೂ ಯುವನಿಧಿ ಪ್ಲಸ್ ಕಾರ್ಯಕ್ರಮದಡಿ ೬೫ ಯುವನಿಧಿ ಫಲಾನುಭವಿಗಳಿಗೆ ತರಬೇತಿ ನೀಡಲಾಗಿದ್ದು ಜಿಲ್ಲೆಯಲ್ಲಿರುವ ವಿದ್ಯಾರ್ಥಿಗಳ ಸಂಖ್ಯೆಗೆ ಹೋಲಿಸಿದಲ್ಲಿ ಈ ಸಂಖ್ಯೆ ಬಹಳ ಕಡಿಮೆ ಇದ್ದು ಇದನ್ನು ಹೆಚ್ಚಿಸುವಂತೆ ಕೆಜಿಟಿಟಿಐ, ಜೆಟಿಟಿಸಿ ಮತ್ತು ಸಿಡ್ಹಾಕ್ ಸಂಸ್ಥೆಗಳಿಗೆ ಸೂಚನೆ ನೀಡಿದರು.

ಮುಖ್ಯ ಮಂತ್ರಿಗಳ ಕೌಶಲ್ಯ ಕರ್ನಾಟಕ ಯೋಜನೆಯಡಿಯಲ್ಲಿ ಯುವಜನರ ಕೌಶಲ್ಯಾಭಿವೃದ್ದಿಯನ್ನು ಸುಧಾರಿಸುವ ಉದ್ದೇಶದಿಂದ ಜಾರಿಗೆ ತರುವುದರೊಂದಿಗೆ ಉದ್ಯೋಗ ಅರ್ಹತೆಯನ್ನು ಹೆಚ್ಚಿಸುವುದು, ಉತ್ತಮ ವೃತ್ತಿ ಅವಕಾಶಗಳನ್ನು ಸೃಷ್ಠಿಸಲು ಅಗತ್ಯ ಕೌಶಲ್ಯಗಳನ್ನು ತರಬೇತಿ ನೀಡುವುದಾಗಿದೆ ಇದರ ಜೊತೆಯಲ್ಲಿ ನನ್ನ ವೃತ್ತಿ ನನ್ನ ಆಯ್ಕೆ ಯೋಜನೆಯಡಿ ಪುಸ್ತಕಗಳನ್ನು ಶಾಲೆ ಹಾಗೂ ಸ್ಥಳೀಯ ಸಂಸ್ಥೆಗಳಿಗೆ ನೀಡುವುದರೊಂದಿಗೆ ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿ ಉದ್ಯೋಗ ಹಾಗೂ ಮತ್ತಿತರ ಕ್ಷೇತ್ರಗಳನ್ನು ಆರಿಸಿಕೊಳ್ಳಲು ಮಾರ್ಗದರ್ಶನ ನೀಡಲಾಗುತ್ತಿದೆ ಎಂದರು.

೨೦೨೫ ರ ವಿಶ್ವಕೌಶಲ್ಯ ಸ್ಪರ್ಧೆಯು ಚೀನಾದ ಶಾಂಘೈನಲ್ಲಿ ನಡೆಯಲಿದ್ದು ಜಿಲ್ಲೆಯಿಂದ ಹೆಚ್ಚಿನ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸುವಂತೆ ಈ ಬಗ್ಗೆ ಅರಿವು ಮೂಡಿಸುವ ಕಾರ್ಯಗಳನ್ನು ಶಾಲಾ ಕಾಲೇಜುಗಳಲ್ಲಿ ಹಮ್ಮಿಕೊಳ್ಳಬೇಕು. ಕಳೆದ ಬಾರಿ ಫ್ರಾನ್ಸ್ ನ ಲಿಯೋನ್ ನಲ್ಲಿ ನಡೆದ ಡ್ರೋನ್ ಫಿಲ್ಮಿಂಗ್ ಸ್ಪರ್ಧೆಯಲ್ಲಿ ಉಡುಪಿ ಜಿಲ್ಲೆಯ ರೋಹನ್ ಕೋಟ್ಯಾನ್ ಚಿನ್ನದ ಪದಕ ಪಡೆದಿದ್ದು ಈ ಬಾರಿ ೩೧೩ ಮಂದಿ ನೋಂದಣಿಯಾಗಿದ್ದು ಮುಂದಿನ ದಿನಗಳಲ್ಲಿ ಅತೀ ಹೆಚ್ಚು ವಿದ್ಯಾರ್ಥಿಗಳು ಹೆಸರು ನೋಂದಾಯಿಸುವAತೆ ಕಾರ್ಯಕ್ರಮಕ್ಕೆ ಪ್ರಚಾರ ನೀಡಬೇಕು. ದೇಶದಲ್ಲೇ ಕರ್ನಾಟಕವು ಎರಡನೇ ಸ್ಥಾನದಲ್ಲಿದ್ದು ಪ್ರಥಮ ಸ್ಥಾನದಲ್ಲಿರುವ ಓಡಿಸಾ ರಾಜ್ಯವನ್ನು ಹಿಂದಿಕ್ಕಬೇಕು. ರಾಜ್ಯ ಸರಕಾರ ನಡೆಸುವ ಕರ್ನಾಟಕ ಸ್ಕಿಲ್ಸ್ ನಲ್ಲಿ ಮೆಡಲ್ ಆಫ್ ಎಕ್ಸಲೆಂಸ್ ಪ್ರಶಸ್ತಿ ವಿಜೇತರಿಗೆ ರಾಜ್ಯ ಸರಕಾರದ ವತಿಯಿಂದ ೫ ಲಕ್ಷ ನಗದು ಬಹುಮಾನ ಹಾಗೂ ಇಂಡಿಯಾ ಸ್ಕಿಲ್ಸ್ ನಲ್ಲಿ ಪ್ರಥಮ ಸ್ಥಾನ ಪಡೆದ ವಿಜೇತರಿಗೆ ೧ ಲಕ್ಷ ನಗದು ಬಹುಮಾನ ನೀಡಲಾಗುತ್ತದೆ. ಈ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಬೇಕೆಂದರು.

ನಲ್ ಜಲ್ ಮಿತ್ರ ಯೋಜನೆಯ ಮೂಲಕ ೧೫೫ ಗ್ರಾಮ ಪಂಚಾಯತಿಗಳಲ್ಲಿ ೮೬ ಪಂಚಾಯತ್ ಗಳು ೧೪೪ ಅಭ್ಯರ್ಥಿಗಳಿಗೆ ತರಬೇತಿ ನೀಡಿದ್ದು ೧೩೫ ಅಭ್ಯರ್ಥಿಗಳಿಗೆ ಟೂಲ್ ಕಿಟ್ ವಿತರಿಸಲಾಗಿದೆ. ಗ್ರಾಮೀಣ ಪ್ರದೇಶದ ಜನರು ಅದರಲ್ಲೂ ೩೫ ವಯಸ್ಸಿನ ಕೆಳಗಿನ ಮಹಿಳೆಯರು ಅಸಾಧಾರಣ ಕೌಶಲ್ಯದ ಭಾಗವಾಗಿ ಪ್ಲಬಿಂಗ್ ನಂತಹ ಉದ್ಯೋಗಗಳಲ್ಲಿ ಪರಿಣತಿಯನ್ನು ಪಡೆಯುವ ಉದ್ದೇಶದಿಂದ ಯೋಜನೆಯನ್ನು ಆರಂಭಿಸಲಾಗಿದ್ದು ಯೋಜನೆಯು ಸಮರ್ಪಕವಾಗಿ ಅನುಷ್ಠಾನವಾಗುವಂತೆ ಪಂಚಾಯತ್ ಪಿಡಿಓಗಳು ಕಾರ್ಯನಿರ್ವಹಿಸಬೇಕು ಎಂದರು.

ಜಿಲ್ಲೆಯಲ್ಲಿ ನಡೆಯುವ ಕೌಶಲ್ಯ ರೋಜ್‌ಗಾರ್ ಉದ್ಯೋಗ ಮೇಳಗಳಲ್ಲಿ ಇದುವರೆಗೆ ಎಷ್ಟು ಜನರಿಗೆ ಉದ್ಯೋಗ ದೊರೆತಿದೆ ಎನ್ನುವ ಸ್ಪಷ್ಟ ಮಾಹಿತಿಯನ್ನು ಮುಂದಿನ ಸಭೆಯಲ್ಲಿ ಒದಗಿಸಬೇಕು. ಪದವಿ ಮುಗಿಸಿದ ವಿದ್ಯಾರ್ಥಿಗಳಿಗೆ ಹೊರದೇಶಗಳಲ್ಲಿ ಉನ್ನತ ವಿದ್ಯಾರ್ಜನೆ ಮತ್ತು ಉದ್ಯೋಗ ದೊರಕಿಸಿಕೊಡಲು ಅಂತರಾಷ್ಟಿçÃಯ ವಲಸೆ ಕೇಂದ್ರಗಳನ್ನು ತೆರೆಯಲಾಗಿದ್ದು ಜಿಲ್ಲೆಯಿಂದ ಹೆಚ್ಚಿನ ವಿದ್ಯಾರ್ಥಿಗಳು ವಿದೇಶಗಳಲ್ಲಿ ಉದ್ಯೋಗ ಮಾಡುವಂತಾಗಬೇಕು. ವಿದೇಶದಲ್ಲಿ ಕಲಿಯಿರಿ ಕಾರ್ಯಕ್ರಮದಡಿ ಕಲಿಯುವ ವಿದ್ಯಾರ್ಥಿಗಳಿಗೆ ಕಲಿಕಾ ಶುಲ್ಕದಲ್ಲಿ ೫೦% ರಿಯಾಯತಿ, ವೀಸಾ ಮತ್ತು ಟಿಕೆಟ್ ವ್ಯವಸ್ಥೆಯನ್ನು ರಾಜ್ಯ ಸರಕಾರದ ವತಿಯಿಂದಲೇ ಕೈಗೊಳ್ಳಲಾಗುವುದು ಎಂದರು.

ಜಿಲ್ಲೆಯಲ್ಲಿ ನಶಿಸಿ ಹೋಗುತ್ತಿರುವ ಪ್ರಾದೇಶಿಕ ಪಾರಂಪರಿಕ ಕಲೆಗಳಿದ್ದಲ್ಲಿ ಅವುಗಳಿಗೆ ಪುನಶ್ಚೇತನ ತುಂಬಲು ಅಂತಹ ಕಲೆಗಳನ್ನು ಗುರುತಿಸಿ ಸ್ಥಳೀಯವಾಗಿ ತರಬೇತಿ ನೀಡಬೇಕು. ತಂತ್ರಜ್ಞಾನ ಆಧಾರಿತ ಕೋರ್ಸ್ ಗಳಾದ ಎಐ ತಂತ್ರಜ್ಞಾನ, ಮಶೀನ್ ಲರ್ನಿಂಗ್, ಸೆಮಿಕಂಡಕ್ಟರ್ ಚಿಪ್, ಮರುಬಳಕೆ ಇಂಧನಾಧಾರಿತ ಕ್ಷೇತ್ರಗಳಿಗೆ ಒತ್ತು ನೀಡಿ ತರಬೇತಿಗಳನ್ನು ರೂಪಿಸಬೇಕು. ಸಿಎನ್‌ಸಿ ಮಶೀನಿಂಗ್ ನಂತಹ ತಾಂತ್ರಿಕ ಕೋರ್ಸ್ ಮಾಡಿದ ಅಭ್ಯರ್ಥಿಗಳಿಗೆ ಬಹು ಬೇಡಿಕೆ ಇದ್ದು ವಿದ್ಯಾರ್ಥಿಗಳು ಈ ಕ್ಷೇತ್ರಗಳಲ್ಲಿ ತರಬೇತಿ ಹೊಂದುವAತೆ ಅವರ ಮನವೊಲಿಸಬೆಕು ಎಂದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ, ಹೆಚ್ಚುವರಿ ಜಿಲ್ಲಾಧಿಕಾರಿ ಅಬೀದ ಗದ್ಯಾಳ, ಉದ್ಯೋಗ ವಿನಿಮಯ ಅಧಿಕಾರಿಗಳು, ಐಟಿಐ ಸಂಸ್ಥೆಗಳ ಪ್ರಾಂಶುಪಾಲರು, ಡಿಡಿಪಿಐ, ಡಿಡಿಪಿಯು, ಸಿಡ್ಹಾಕ್ ಅಧಿಕಾರಿಗಳು ಇನ್ನಿತರರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here