ಬೆಂಗಳೂರು ರಾಜಧಾನಿ ಬೆಂಗಳೂರಿನಲ್ಲೊಂದು ಕರುಣಾಜನಕ ಘಟನೆ ನಡೆದಿದೆ. ಹದಿಹರೆಯದ ಇಬ್ಬರು ಪ್ರೀತಿ ಮಾಡಿ, ಆ ಪ್ರೀತಿ ದೈಹಿಕ ಸಂಪರ್ಕಕ್ಕೆ ತಿರುಗಿ ಇದೀಗ ಇಬ್ಬರಿಗೊಂದು ಮಗುವಾಗಿದೆ. ಆದ್ರೆ, ಬಾಳಿ ಬದುಕಬೇಕಾಗಿದ್ದ ಶಿಶು ತಿಪ್ಪೆಯಲ್ಲಿ ಬಿದ್ದಿದೆ.
ಹದಿಹರೆಯದ ವಯಸ್ಸಿನಲ್ಲಿ ಅಪ್ರಾಪ್ತ ಇಬ್ಬರು ಪ್ರೀತಿಯಲ್ಲಿ ಬಿದ್ದು ಪುಟ್ಟ ಕಂದಮ್ಮನನ್ನೇ ಬಲಿಕೊಟ್ಟಿದ್ದಾರೆ. ಅಚ್ಚರಿ ಏನೆಂದರೆ ಸ್ನೇಹಿತರೇ ಸೇರಿಕೊಂಡು ಡೆಲಿವರಿ ಮಾಡಿರುವ ಬಗ್ಗೆ ಗೊತ್ತಾಗಿದೆ. ಬೆಂಗಳೂರಿನ ಯಲಹಂಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.
ಅಂದು 2ನೇ ತಾರೀಖು ಮಂಗಳವಾರ ರಾತ್ರಿ ಎಂಟು ಗಂಟೆ ಸಮಯ. ಯಲಹಂಕದ ಗಾಂಧಿನಗರ ಏರಿಯಾದಲ್ಲಿ ಸೈಕಲ್ ನಲ್ಲಿ ಬಂದಿದ್ದ ವ್ಯಕ್ತಿ ಕಸದ ರಾಶಿಯಲ್ಲಿ ಕವರ್ ಬಿಸಾಕಿ ಹೋಗಿದ್ದ. ಮನೆ ಹತ್ತಿರದಲ್ಲೇ ವಾಸವಿರುವ ವೃದ್ಧನ ಕೈಯಲ್ಲಿ ಈ ಕಸ ಬಿಸಾಡಿ ಎಂದು ಯುವತಿ ಶಿಶುವಿದ್ದ ಕವರ್ ಅನ್ನು ಕೊಟ್ಟಿದ್ದಾಳೆ. ಆಗ ವೃದ್ಧ ಅದರ ಅರಿವಿಲ್ಲದೇ ಆ ಕವರ್ ಅನ್ನು ಎತ್ತಿ ಕಸದ ಬುಟ್ಟಿಗೆ ಹಾಕಿ ಹೋಗಿದ್ದಾರೆ. ಬಳಿಕ ಪೌರಕಾರ್ಮಿಕರು ಬೆಳಗ್ಗೆ ಕಸ ಸ್ವಚ್ಛ ಮಾಡುವಾಗ ಶಿಶುವಿನ ಶವ ಕಂಡು ಶಾಕ್ ಆಗಿದ್ದಾರೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆ ಕೂಡಲೇ ಪೊಲೀಸರಿಂದ ತನಿಖೆ ಶುರು ಮಾಡಿ ಸುತ್ತಮುತ್ತಲ ಸಿಸಿಟಿವಿ ಸರ್ಚ್ ಮಾಡಿಸಿದ್ದಾರೆ. ಆಗ ಪೊಲೀಸರಿಗೆ CCTVಯಲ್ಲಿ ಸೈಕಲ್ನಲ್ಲಿ ವೃದ್ಧನ ಗುರುತು ಪತ್ತೆಯಾಗಿದೆ. ಆಗ ಕವರ್ನಲ್ಲಿದ್ದ ಶಿಶುವಿನ ಶವ ಎಸೆದ ವೃದ್ಧನನ್ನು ಪೊಲೀಸರು ಬೆನ್ನಟ್ಟಿ ಹಿಡಿದು ವಿಚಾರಣೆ ನಡೆಸಿದಾಗ.ಅಪ್ರಾಪ್ತರ ಲವ್ ಸ್ಟೋರಿ, ಶಿಶು ಸಾವಿನ ಸತ್ಯ ಬೆಳಕಿಗೆ ಬಂದಿದೆ.
ಕೊನೆಗೆ ಆತನನ್ನ ಕರೆತಂದು ವಿಚಾರಣೆ ಮಾಡಿದಾಗ ತಾನು ಎಸೆದ ಕವರ್ ನಲ್ಲಿ ಹಸುಗೂಸು ಇದೆ ಅನ್ನೋದೇ ಗೊತ್ತಿಲ್ಲ ಆ ಕವರ್ ಓರ್ವ ಯುವತಿ ಕಸವಿದ್ದು ಎಸೆಯಿರಿ ಎಂದು ಕೊಟ್ಟಿದ್ದಾಗಿ ಆತ ಬಾಯ್ಬಿಟ್ಟಿದ್ದಾನೆ. ಕೊನೆಗೆ ಮೃತಪಟ್ಟಿದ್ದ ಹಸುಗೂಸು ಎಂದಾಗ ವೃದ್ದನೇ ಪಶ್ಚಾತ್ತಾಪ ಪಟ್ಟಿದ್ದ. ಪೊಲೀಸರು ವೃದ್ಧನ ಮಾಹಿತಿ ಪಡೆದು ನೇರವಾಗಿ ಯುವತಿ ಮನೆಗೆ ಹೋಗಿದ್ದಾರೆ. ವಿಚಾರಣೆ ವೇಳೆ ಆಗ ಯುವತಿ ಹುಡುಗನ ಜೊತೆಗಿನ ಲವ್ ಸ್ಟೋರಿ ಬಿಚ್ಚಿಟ್ಟಿದ್ದಾಳೆ. ಹೀಗೆ ಸ್ನೇಹಿತರೇ ಸೇರಿಕೊಂಡು ಮಾಡಿರುವ ಡೆಲಿವರಿ ಯಡವಟ್ಟಿನಿಂದ ನವಜಾತ ಶಿಶು ಉಸಿರುಗಟ್ಟಿ ಸಾವನ್ನಪ್ಪಿದೆ. ಇದು ಯಾರಿಗೂ ಗೊತ್ತಾಗಬಾರದು ಎಂದು ಮಗುವಿನ ಶವವನ್ನ ಕವರ್ನಲ್ಲಿಟ್ಟು ಕಸ ಎಂದು ವೃದ್ಧನ ಕೊಟ್ಟಿರುವುದಾಗಿ ಪೊಲೀಸರ ಮುಂದೆ ಯುವತಿ ಬಾಯ್ಬಿಟ್ಟಿದ್ದಾಳೆ. ಸದ್ಯ ಕೇಸ್ ದಾಖಲಿಸಿಕೊಂಡಿರುವ ಯಲಹಂಕ ಪೊಲೀಸರು ಯುವಕನ ಅರೆಸ್ಟ್ ಮಾಡಿ ಜೈಲಿಗಟ್ಟಿದ್ದಾರೆ.