ವರದಿ-ಮಂದಾರ ರಾಜೇಶ್ ಭಟ್
ಮೂಡುಬಿದಿರೆ : ಪ್ರಜಾಪ್ರಭುತ್ವ ದಿನದ ಅಂಗವಾಗಿ ಹರ್ಷ ಕ್ರಿಯೇಷನ್ಸ್ ಪ್ರಸ್ತುತಿಯಲ್ಲಿ ‘ಯಶ ಕರ್ನಾಟಕ’ ವಾರಪತ್ರಿಕೆಯ 12ನೇ ವರ್ಷದ ಸಂಭ್ರಮಾಚರಣೆ ಹಾಗೂ ರೈತರೊಂದಿಗೆ ಒಂದು ಹೊತ್ತು ಕಳೆಯುವ ‘ಚಿಂತನ-ಮಂಥನ-ಗೌರವ-ಸನ್ಮಾನ’ ಕಾರ್ಯಕ್ರಮವು ಜನವರಿ 26ರಂದು ಬೆಳಿಗ್ಗೆ 9:30ಕ್ಕೆ ಇಲ್ಲಿನ ಸ್ಕೌಟ್ಸ್ ಗೈಡ್ಸ್ ಕನ್ನಡ ಭವನದಲ್ಲಿ ನಡೆಯಲಿದೆ.
ಕಾರ್ಯಕ್ರಮದ ಮುಖ್ಯಾಂಶಗಳು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯಶ ಕರ್ನಾಟಕ ವಾರಪತ್ರಿಕೆಯ ಸಂಪಾದಕರಾದ ಪದ್ಮನಾಭ ಗಟ್ಟಿ ಅವರು ವಹಿಸಲಿದ್ದಾರೆ. ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾದ ಶ್ರೀನಿವಾಸ್ ನಾಯಕ್ ಇಂದಾಜೆ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
ಪ್ರಧಾನ ಉಪನ್ಯಾಸ
ಹಿರಿಯ ಪತ್ರಕರ್ತರು ಹಾಗೂ ಪ್ರಗತಿಪರ ಕೃಷಿಕರಾದ ರಾಧಾಕೃಷ್ಣ ಹೊಳ್ಳ ಅವರು ‘ಕೃಷಿಕರ ಮುಂದಿರುವ ಸವಾಲುಗಳು’ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ. ಪ್ರಸ್ತುತ ಕಾಲಘಟ್ಟದಲ್ಲಿ ರೈತರು ಎದುರಿಸುತ್ತಿರುವ ಸಮಸ್ಯೆಗಳು ಹಾಗೂ ಅವುಗಳಿಗೆ ಇರುವ ಪರಿಹಾರಗಳ ಬಗ್ಗೆ ಈ ಗೋಷ್ಠಿಯಲ್ಲಿ ಬೆಳಕು ಚೆಲ್ಲಲಾಗುವುದು.
ಯಶ ಕರ್ನಾಟಕ ಗೌರವ ಪುರಸ್ಕಾರ – 2026
ಇದೇ ಸಂದರ್ಭದಲ್ಲಿ ಎಂ.ಸಿ.ಎಸ್ ಬ್ಯಾಂಕ್ ಮೂಡುಬಿದಿರೆಯ ವಿಶೇಷ ಕಾರ್ಯನಿರ್ವಹಣಾಧಿಕಾರಿಗಳಾದ ಚಂದ್ರಶೇಖರ್ ಎಂ. ಅವರಿಗೆ ‘ಯಶ ಕರ್ನಾಟಕ ಗೌರವ ಪುರಸ್ಕಾರ – 2026’ ನೀಡಿ ಸನ್ಮಾನಿಸಲಾಗುವುದು.
ಮುಖ್ಯ ಅತಿಥಿಗಳು– ಕಾರ್ಯಕ್ರಮದಲ್ಲಿ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಪುಷ್ಪರಾಜ್ ಬಿ.ಎನ್., ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷರಾದ ಪಿ.ಬಿ. ಹರೀಶ್ ರೈ, ಮೂಡುಬಿದಿರೆ ಪ್ರೆಸ್ ಕ್ಲಬ್ ಅಧ್ಯಕ್ಷರಾದ ಸೀತಾರಾಮ ಆಚಾರ್ಯ, ಮೂಡುಬಿದಿರೆ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ನವೀನ್ ಸಾಲ್ಯಾನ್ ಹಾಗೂ ಪ್ರೆಸ್ ಕ್ಲಬ್ ಕಾರ್ಯದರ್ಶಿ ಕು. ಪ್ರೇಮಶ್ರೀ ಉಪಸ್ಥಿತರಿರಲಿದ್ದಾರೆ.
ವಿಕಾಸ ಮತ್ತು ಸಮಾನ ಮನಸ್ಕ ಮಾಧ್ಯಮ ವೇದಿಕೆ ಬೆಂಗಳೂರು ಇವರ ಸಹಯೋಗದೊಂದಿಗೆ ಕಾರ್ಯಕ್ರಮ ನಡೆಯಲಿದೆ.
ಈ ಕಾರ್ಯಕ್ರಮಕ್ಕೆ ಸಾರ್ವಜನಿಕರು ಹಾಗೂ ಕೃಷಿ ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ವರ್ಷ ಕ್ರಿಯೇಷನ್ಸ್ ಭಾರತದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹರೀಶ್ ಕೆ. ಆದೂರು ಅವರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

