ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಪದವಿಪೂರ್ವ ಕಾಲೇಜಿನಲ್ಲಿ ನಾಡಪ್ರಭು ಕೆಂಪೇಗೌಡ ಜಯಂತಿಯನ್ನು ಆಚರಿಸಲಾಯಿತು. ಪ್ರಾಂಶುಪಾಲರಾದ ಪ್ರಕಾಶ್ ಜೋಗಿ ಹಾಗೂ ಸಿಬ್ಬಂದಿಗಳು ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಸಂಸ್ಥೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ವಿಜಯ್ ಕುಮಾರ್ ಶೆಟ್ಟಿ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ , ಕೆಂಪೇಗೌಡರ ಸಾಧನೆ ಅದ್ವಿತೀಯವಾದುದು. ವಿಜಯನಗರ ಸಾಮ್ರಾಜ್ಯದ ಸಾಮಂತರಾಗಿ ಯಲಹಂಕದಲ್ಲಿ ಆಳ್ವಿಕೆ ಮಾಡುತ್ತಿದ್ದ ಕೆಂಪೇಗೌಡರು, ಬಾಲ್ಯದಲ್ಲಿಯೇ ಅದ್ಭುತ ನಾಯಕತ್ವದ ಕೌಶಲ್ಯವನ್ನು ಹೊಂದಿದವರು . ಈಗಿನ ವೈಯಾಲಿಕಾವಲ್ ಎಂದು ಕರೆಯುವ ದಿಣ್ಣೆಯ ಪ್ರಶಾಂತತೆಯನ್ನು ಗಮನಿಸಿ, ಹೊಸ ರಾಜಧಾನಿಯನ್ನು ಕಟ್ಟುವ ಕನಸನ್ನು ಕಂಡು ಅಪೂರ್ವ ಪೂರ್ವ ನಿಯೋಜಿತ ಕಲ್ಪನೆಯೊಂದಿಗೆ ನಾಲ್ಕು ಗೋಪುರಗಳನ್ನು ಒಳಗೊಂಡ ಕೆರೆಕಟ್ಟೆ, ವೃತ್ತಿಗೊಂದು ಪೇಟೆ, ಗ್ರಾಮಗಳು, ಗ್ರಾಮ ಪಂಚಾಯಿತಿಗಳು ಇತ್ಯಾದಿಗಳನ್ನು ಒಳಗೊಂಡ ಅದ್ಭುತ ನಗರವನ್ನು ಕಟ್ಟಿ ನಾಡಪ್ರಭು ಎನಿಸಿಕೊಂಡವರು. ತಮ್ಮ ಚಿಕ್ಕ ವಯಸ್ಸಿನಲ್ಲಿಯೇ ಈ ರೀತಿಯ ಸಾಧನೆಯನ್ನು ಮಾಡಿದ ಕೆಂಪೇಗೌಡರು ವಿದ್ಯಾರ್ಥಿಗಳಿಗೆ ಯುವಜನತೆಗೆ ಸಾಧನೆಗೆ ಪೂರ್ತಿಯ ದಾರಿದೀಪ ಎಂದರು. ವಿದ್ಯಾರ್ಥಿಗಳಾದ ಪ್ರಿಯಾಂಕ , ರಚಿತಾ, ತ್ರಿಷಾ ಶೆಟ್ಟಿ ನಾಡಪ್ರಭುವಿನ ಕುರಿತು ಭಾಷಣ ಮಾಡಿದರು. ಸಂಖ್ಯಾಶಾಸ್ತ್ರ ಉಪನ್ಯಾಸಕ ಚಂದ್ರಹಾಸ್ ನಿರೂಪಿಸಿ ವಂದಿಸಿದರು.