ಮಣಿಪಾಲದಲ್ಲಿ ‘ಪೌಷ್ಟಿಕಾಂಶ ಸಮಾವೇಶ–2026’ ಯಶಸ್ವಿ

0
8

ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲ ಹಾಗೂ ಎಂ .ಸಿ .ಹೆಚ್ .ಪಿ ಯ ಕ್ಲಿನಿಕಲ್ ನ್ಯೂಟ್ರಿಷನ್ ಮತ್ತು ಡಯೆಟೆಟಿಕ್ಸ್ ವಿಭಾಗದ ವತಿಯಿಂದ ಪೌಷ್ಟಿಕಾಂಶ ಸಮಾವೇಶ 2026 ಕಾರ್ಯಕ್ರಮವನ್ನು ರಾಷ್ಟ್ರೀಯ ಪೌಷ್ಟಿಕಾಂಶ ಸಪ್ತಾಹ ಮತ್ತು ರಾಷ್ಟ್ರೀಯ ಪೋಷಣ್ ಮಹಾ ಅಂಗವಾಗಿ ಸೆಪ್ಟೆಂಬರ್ 1 ರಂದು ಆಯೋಜಿಸಲಾಯಿತು. ಈ ಬಾರಿಯ ಸಮ್ಮೇಳನದ ವಿಷಯ ಪೌಷ್ಟಿಕಾಂಶ ಮೌಲ್ಯಮಾಪನದಲ್ಲಿನ ಪ್ರಗತಿ: ವೈದ್ಯಕೀಯ ಒಳನೋಟಗಳು ಮತ್ತು ಪೌಷ್ಟಿಕಾಂಶ ಆರೈಕೆಯ ಸಮನ್ವಯ ಎಂಬುದಾಗಿತ್ತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾಹೆಯ ರಿಜಿಸ್ಟ್ರಾರ್ ಡಾ. ಪಿ. ಗಿರಿಧರ್ ಕಿಣಿ ಹಾಗೂ ಗೌರವ ಅತಿಥಿಯಾಗಿ ಕಸ್ತೂರ್ಬಾ ಆಸ್ಪತ್ರೆಯ ಅಸೋಸಿಯೇಟ್ ಡೈರೆಕ್ಟರ್ – ಆಪರೇಷನ್ಸ್ ಶ್ರೀ ಜಿಬು ಥಾಮಸ್ ಉಪಸ್ಥಿತರಿದ್ದರು.ಎಂ .ಸಿ .ಹೆಚ್ .ಪಿ ಡೀನ್ ಡಾ. ಜಿ. ಅರುಣ್ ಮಯ್ಯ ಹಾಗೂ ಅಸೋಸಿಯೇಟ್ ಡೀನ್ಸ್ ಡಾ. ಬಿ. ರೇಷ್ಮಿ ಮತ್ತು ಡಾ. ಜಾನ್ ಸೊಲೊಮನ್ ಉಪಸ್ಥಿತರಿದ್ದರು.

ಕಾರ್ಯಕ್ರಮವು ದೀಪ ಪ್ರಜ್ವಲನೆ ಮತ್ತು ಪ್ರಾರ್ಥನೆಯೊಂದಿಗೆ ಆರಂಭವಾಯಿತು. ಡಾ. ಪಿ. ಗಿರಿಧರ್ ಕಿಣಿ ಅವರು ಶುದ್ಧ ನೀರು ಮತ್ತು ವೈಯಕ್ತಿಕ ಆರೋಗ್ಯಕರ ಆಹಾರ ಪದ್ಧತಿಗಳೇ ಉತ್ತಮ ಪೌಷ್ಟಿಕತೆಯ ಆಧಾರ ಎಂದು ಒತ್ತಿ ಹೇಳಿದರು. ಆಹಾರ ಖರೀದಿಸುವಾಗ ಕನಿಷ್ಠ 10 ಸೆಕೆಂಡುಗಳ ಕಾಲ ಲೇಬಲ್ ಓದಿ, ಅವಧಿ ಮುಕ್ತಾಯ ದಿನಾಂಕ, ಶಕ್ತಿ ಮತ್ತು ಕೊಬ್ಬಿನ ಪ್ರಮಾಣವನ್ನು ಪರಿಶೀಲಿಸುವಂತೆ ಸಲಹೆ ನೀಡಿದರು.

ಶ್ರೀ ಜಿಬು ಥಾಮಸ್ ಅವರು ಕ್ಲಿನಿಕಲ್ ನ್ಯೂಟ್ರಿಷನ್ ಕ್ಷೇತ್ರದ ಬೆಳವಣಿಗೆಯನ್ನು ವಿವರಿಸಿ, 2005ರಲ್ಲಿ ಇಬ್ಬರು ಡಯೆಟಿಷಿಯನ್‌ಗಳಿಂದ ಆರಂಭವಾದ ವಿಭಾಗವು ಇಂದು 20ಕ್ಕೂ ಹೆಚ್ಚು ಡಯೆಟಿಷಿಯನ್‌ಗಳನ್ನು ಹೊಂದಿರುವುದನ್ನು ಉಲ್ಲೇಖಿಸಿದರು. ಡಯೆಟಿಷಿಯನ್‌ಗಳು ಇಂದು ವೈದ್ಯರೊಂದಿಗೆ ಸಮಾನ ಪಾಲುದಾರರಾಗಿ ಕಾರ್ಯನಿರ್ವಹಿಸುತ್ತಿದ್ದು, ಸಂಶೋಧನೆ ಮತ್ತು ವೈಜ್ಞಾನಿಕ ಆಧಾರಿತ ಪೌಷ್ಟಿಕ ಆರೈಕೆಗೆ ಹೆಚ್ಚಿನ ಒತ್ತು ನೀಡಬೇಕೆಂದು ಅವರು ಕರೆ ನೀಡಿದರು.

ಬೆಂಗಳೂರಿನ ಅಪೋಲೋ ಆಸ್ಪತ್ರೆಯ ತೀವ್ರ ನಿಗಾ ವಿಭಾಗದ ಮುಖ್ಯಸ್ಥ ರಾಗಿರುವ ಡಾ.ಹಿಮಾಲ್ ದೇವ್ ಜಿ. ಜೆ. ಮತ್ತು ಸೇಂಟ್ ಜಾನ್ಸ್ ಸಂಶೋಧನಾ ಸಂಸ್ಥೆಯ ಪೌಷ್ಟಿಕಾಂಶ ವಿಭಾಗದ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥ ರಾಗಿರುವ ಡಾ. ರೆಬೆಕ್ಕಾ ಕುರಿಯನ್ ರಾಜ್ ಉಪನ್ಯಾಸ ನೀಡಿದರು.ಆ ಬಳಿಕ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು
ಕಾರ್ಯಕ್ರಮದ ನಿರೂಪಣೆಯನ್ನು ದ್ವಿತೀಯ ವರ್ಷದ ವಿದ್ಯಾರ್ಥಿ ನೀಲ್ ದೀಪಕ್ ಶೆಟ್ ಅವರು ಅಚ್ಚುಕಟ್ಟಾಗಿ ನಡೆಸಿಕೊಟ್ಟರು.

ಕಾರ್ಯಕ್ರಮವು ಕ್ಲಿನಿಕಲ್ ನ್ಯೂಟ್ರಿಷನ್ ಕ್ಷೇತ್ರದಲ್ಲಿನ ಇತ್ತೀಚಿನ ಬೆಳವಣಿಗೆಗಳು, ನಿಖರವಾದ ಪೌಷ್ಟಿಕಾಂಶ ಮೌಲ್ಯಮಾಪನ ಮತ್ತು ವೈಯಕ್ತಿಕಗೊಳಿಸಿದ ಪೌಷ್ಟಿಕ ಆರೈಕೆಯ ಮಹತ್ವವನ್ನು ಒತ್ತಿಹೇಳುವ ಮೂಲಕ ಯಶಸ್ವಿಯಾಗಿ ನೆರವೇರಿತು.