ಪ್ರತಿಭಾ ಕಾರಂಜಿ: ಮಕ್ಕಳ ಪ್ರತಿಭೆ ಅನಾವರಣಕ್ಕೆ ಉತ್ಕೃಷ್ಟ ವೇದಿಕೆ – ಶ್ರೀಮತಿ ಜಯಶ್ರೀ ಕೇಶವ್

0
125

ಮೂಡುಬಿದಿರೆ: ಇಂದಿನ ಮಕ್ಕಳಲ್ಲಿ ಹುದುಗಿರುವ ಅದ್ಭುತ ಸುಪ್ತ ಪ್ರತಿಭೆಗಳನ್ನು ಗುರುತಿಸಿ, ಅವುಗಳಿಗೆ ಸೂಕ್ತ ವೇದಿಕೆ ಒದಗಿಸುವ ಈ ‘ಪ್ರತಿಭಾ ಕಾರಂಜಿ’ಯು ವಿದ್ಯಾರ್ಥಿಗಳ ಕ್ರಿಯಾಶೀಲತೆಗೆ ಹಾಗೂ ಪ್ರತಿಭಾ ಪ್ರದರ್ಶನಕ್ಕೆ ಉತ್ತಮ ಮಾದರಿಯಾಗಿದೆ ಎಂದು ಮೂಡುಬಿದಿರೆ ಪುರಸಭಾ ಅಧ್ಯಕ್ಷೆ ಜಯಶ್ರೀ ಕೇಶವ್ ಅಭಿಪ್ರಾಯಪಟ್ಟರು. ಈ ವೇದಿಕೆಯು ಮಕ್ಕಳ ಮುಂದಿನ ಜೀವನಕ್ಕೆ ಒಂದು ಉತ್ತಮ ಅಡಿಪಾಯ ಎಂದು ಇಲ್ಲಿನ ರೋಟರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಇಂದು ನಡೆದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರೋಟರಿ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ರೊ.ನಾರಾಯಣ್ ಪಿ. ಎಂ. ಮಾತನಾಡಿ, ಮಕ್ಕಳಿಗೆ ಶಿಕ್ಷಣದ ಜೊತೆಗೆ ಇಂತಹ ಪೂರಕ ಚಟುವಟಿಕೆಗಳನ್ನು ನಡೆಸುವುದರಿಂದ ಅವರ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಈ ಪ್ರತಿಭಾ ಕಾರಂಜಿಯಂತಹ ವೇದಿಕೆಗಳು ಮಕ್ಕಳ ಜೀವನದಲ್ಲಿ ಮಹತ್ವದ ಪಾತ್ರ ವಹಿಸಲಿ ಎಂದು ಹೇಳಿ ಭಾಗವಹಿಸಿದ ಮಕ್ಕಳಿಗೆ ಶುಭ ಹಾರೈಸಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮೂಡುಬಿದಿರೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ವಿರೂಪಾಕ್ಷಪ್ಪ ಮಾತನಾಡಿ, ಪ್ರತಿಭಾ ಕಾರಂಜಿಯು ಮಕ್ಕಳ ಪ್ರತಿಭೆಯನ್ನು ಅನಾವರಣಗೊಳಿಸಲು ಇರುವ ಅಮೂಲ್ಯವಾದ ವೇದಿಕೆ ಎಂದರು ರೋಟರಿ ಸಂಸ್ಥೆಯ ಕಾರ್ಯಕ್ರಮಗಳ ವೈಶಿಷ್ಟ ಮತ್ತು ವ್ಯವಸ್ಥೆಗಳ ಅಚ್ಚುಕಟ್ಟುತನವನ್ನು ಪ್ರಶಂಸಿಸಿ, ಇಂತಹ ಶೈಕ್ಷಣಿಕ ವೇದಿಕೆಗಳಿಂದ ಮಕ್ಕಳು ತಮ್ಮ ಭವಿಷತ್ತನ್ನು ರೂಪಿಸಿಕೊಳ್ಳಲು ಪ್ರೇರಣೆ ಪಡೆಯುತ್ತಾರೆ ಎಂದರು.

ಕ್ಷೇತ್ರ ಸಮನ್ವಯಾಧಿಕಾರಿಗಳಾದ ಸೌಮ್ಯ ಬಿ ಅವರು ಮಾತನಾಡಿ, ‘ ಈ ಪ್ರತಿಭಾ ಕಾರಂಜಿ’ ಕಾರ್ಯಕ್ರಮವು ವಿನೂತನವಾಗಿದ್ದು ಶಾಲೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ , ಮಕ್ಕಳ ಸುಪ್ತ ಪ್ರತಿಭೆಗಳನ್ನು ಗುರುತಿಸಿ ಅವುಗಳಿಗೆ ಯೋಗ್ಯವಾದ ವೇದಿಕೆಯನ್ನು ಒದಗಿಸುವಲ್ಲಿ ಶಿಕ್ಷಕರು ಹಾಗೂ ಹೆತ್ತವರು ವಹಿಸುತ್ತಿರುವ ಪಾತ್ರ ಮಹತ್ವದ್ದು ಎಂದರು ಮತ್ತು ಕಾರ್ಯಕ್ರಮಕ್ಕೆ ಶುಭ ಕೋರಿದರು.

ಪ್ರತಿಭಾ ಕಾರಂಜಿ ನೋಡಲ್ ಅಧಿಕಾರಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮೂಡುಬಿದಿರೆಯ ಇ ಸಿ ಓ ಆಗಿರುವ ರಾಜೇಶ್ ಭಟ್ ಅವರು ತನ್ನ ಪ್ರಾಸ್ತಾವಿಕ ನುಡಿಗಳಲ್ಲಿ ಪ್ರತಿಭಾ ಕಾರಂಜಿಯ ಎಲ್ಲಾ ನಿಯಮಗಳನ್ನು ಸ್ಪಷ್ಟವಾಗಿ ತಿಳಿಯಪಡಿಸಿ ಸ್ಪರ್ಧೆಯ ವ್ಯವಸ್ಥೆಗಳ ಬಗ್ಗೆ ಮಾಹಿತಿ ನೀಡಿದರು..
ಕ್ಲಸ್ಟರ್ ನ ವಿಜೇತ ವಿಧ್ಯಾರ್ಥಿಗಳಿಗೆ ಸುಮಾರು 60ಕ್ಕೂ ಹೆಚ್ಚು ಸ್ಪರ್ಧೆಗಳು ಕಿರಿಯ ಹಿರಿಯ ಪ್ರೌಢ ವಿಭಾಗದಲ್ಲಿ ನಡೆದವು

ಕಾರ್ಯಕ್ರಮದ ವೇದಿಕೆಯಲ್ಲಿ ಸಂಸ್ಥೆಯ ಅಧ್ಯಕ್ಷರಾದ ನಾರಾಯಣ ಪಿ ಎಂ , ಸಂಚಾಲಕರಾದ ಪ್ರವೀಣಚಂದ್ರ ಜೈನ್ , ಮುಖ್ಯೋಪಾಧ್ಯಾಯಿನಿ ತಿಲಕಾ ಅನಂತವೀರ ಜೈನ್, ಇಲಾಖಾ ಅಧಿಕಾರಿಗಳಾದ ನವೀನ್ ಪುತ್ರನ್, ರಾಜೇಶ್ ಭಟ್ , ಸುಶೀಲಾ , ಮಹೇಶ್ವರಿ ಎನ್, ವಿವಿಧ ಸಂಘಗಳ ಅಧ್ಯಕ್ಷರುಗಳಾದ ಸುಧಾಕರ್ ಸಾಲ್ಯಾನ್ ಬಿ, ರಾಮಕೃಷ್ಣ ಶಿರೂರು, ದೊರೆ ಸ್ವಾಮಿ ಕೆ ಎನ್, ಸೀಮಾ ನಾಯಕ್, ಮೆಲ್ವಿನ್ ಅಲ್ಬು ಕರ್ಕ್ ಮೊದಲಾದ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ರೋಟರಿ ಆಂಗ್ಲ ಶಾಲೆಯ ಮಾಧ್ಯಮ ಸಂಚಾಲಕರಾದ ಪ್ರವೀಣ್ ಚಂದ್ರ ಜೈನ್ ಸ್ವಾಗತಿಸಿದರು. ಮುಖ್ಯೋಪಾಧ್ಯಾಯಿನಿ ತಿಲಕಾ ಅನಂತವೀರ ಜೈನ್ ವಂದಿಸಿ ಹಿರಿಯ ಸಂಯೋಜಕ ಗಜಾನನ ಮರಾಠೆ ಹಾಗೂ ನಾಗರತ್ನ ಬಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here