ವರದಿ ರಾಯಿ ರಾಜ ಕುಮಾರ
ಸುರಸಾರವ ಪ್ರೈವೇಟ್ ಲಿಮಿಟೆಡ್ (ಸಂಗೀತ ಶಾಲೆ) ಸಂಸ್ಥೆಯ ವತಿಯಿಂದ ದ್ವಿತೀಯ ವರ್ಷದ ‘ಸಂಗೀತೋತ್ಸವ-2026 : ದಣಿದ ದನಿಗೆ ರಾಗದ ಬೆಸುಗೆ’ ಕಾರ್ಯಕ್ರಮವು ಜನವರಿ 25ರ ಭಾನುವಾರ ಸಂಜೆ 5 ಗಂಟೆಗೆ ಮೂಡುಬಿದಿರೆಯ ಸಮಾಜ ಮಂದಿರದಲ್ಲಿ ಜರುಗಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಯಶವಂತ ಎಂ.ಜಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಹೊರತರುವ ಧ್ಯೇಯೋದ್ದೇಶದೊಂದಿಗೆ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ನೃತ್ಯ ಪ್ರದರ್ಶನ ಕಲೆಗಳ ವಿಶ್ವವಿದ್ಯಾಲಯದ ಜೂನಿಯರ್, ಸೀನಿಯರ್ ಹಾಗೂ ವಿದ್ವತ್ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಈ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸಲಾಗುವುದು. ಅಲ್ಲದೆ, ಕಿಶೋರ್ ಕುಮಾರ್ ಅವರ ಗೀತೆಗಳನ್ನು ಹಾಡಿ ವಿಶ್ವದಾಖಲೆ ನಿರ್ಮಿಸಿದ ಪ್ರತಿಭೆಗಳಿಗೆ ಹಾಗೂ ವಿಶೇಷ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ‘ಗೌರವ ವಂದನೆ’ ಸಲ್ಲಿಸಲಾಗುವುದು.
ಸಂಸ್ಥೆಯ ‘ಸುರಸಾರವ ಕಲಾವಿಭೂಷಣ’ ಪ್ರಶಸ್ತಿಯನ್ನು ಹಿರಿಯ ಉದ್ಯಮಿ ಶ್ರೀಪತಿ ಭಟ್ ಅವರಿಗೆ ನೀಡಿ ಗೌರವಿಸಲಾಗುವುದು. ಪೂರ್ಣಿಮಾ (ಉಡುಪಿ), ವೇ.ಮೂ. ಶಶಿಧರ್ ಪುರೋಹಿತ್ (ಕಟಪಾಡಿ), ಆಲ್ವಿನ್ ಅಂದ್ರಾದೆ (ಸಾಸ್ತಾನ) ಮತ್ತು ಸುಶಾಂತ್ ಭಂಡಾರಿ (ಮಂಗಳೂರು) ಅವರಿಗೆ ‘ಸುರಸಾರವ ಕಲಾಭೂಷಣ’ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಮಧ್ಯಾಹ್ನ 1:45 ರಿಂದ ಶಾರದಾ ಪೂಜೆ, ಗುರುವಂದನೆ ಹಾಗೂ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಂಗೀತ ಕಾರ್ಯಕ್ರಮಗಳು ನಡೆಯಲಿವೆ ಎಂದರು. ನವೀನ್ ಕೋಟ್ಯಾನ್ , ರಾಜೇಶ್ ಶೆಟ್ಟಿ, ಮಲ್ಲಿಕಾ ಸುಕೇಶ್, ವಿಠಲ್ ಅಮೀನ್ ಸುದ್ದಿಗೋಷ್ಠಿಯಲ್ಲಿದ್ದರು.
.

