ಉಡುಪಿ: ಕರಾವಳಿ ಭಾಗದ ಹೆಸರಾಂತ ದೈವ ನರ್ತಕ, ದೈವಗಳ ನುಡಿಯ ಮೂಲಕ ಸಾವಿರಾರು ಭಕ್ತರಿಗೆ ಅಭಯ ನೀಡುತ್ತಿದ್ದ ಕುಕ್ಕೆಹಳ್ಳಿ ಸೋಮು ಪಾಣಾರ ಅವರು ದೈವಾದೀನರಾಗಿದ್ದಾರೆ. ಅವರ ನಿಧನ ತುಳುನಾಡಿನ ದೈವಾರಾಧನೆ ಮತ್ತು ಕಲಾಲೋಕಕ್ಕೆ ತುಂಬಲಾರದ ನಷ್ಟ ಉಂಟುಮಾಡಿದೆ.
ಪಾಣಾರ ಸಮುದಾಯದ ಕುಡಿಯಾಗಿದ್ದ ಸೋಮು ಪಾಣಾರ ಅವರು, ಕೋಲ, ನೇಮ, ಜಾತ್ರೆಗಳಲ್ಲಿ ದೈವದ ಅಣಿ ತೊಟ್ಟು ನರ್ತಿಸುತ್ತಿದ್ದಾಗ ಭಕ್ತರು ಅವರಲ್ಲಿ ಸಾಕ್ಷಾತ್ ದೈವವನ್ನೇ ಕಾಣುತ್ತಿದ್ದರು. ಅವರ ಬಾಯಿಂದ ಬರುತ್ತಿದ್ದ ದೈವನುಡಿ ಅನೇಕ ಕುಟುಂಬಗಳ ಕಷ್ಟಗಳಿಗೆ ಪರಿಹಾರ, ಕಲಹಗಳಿಗೆ ತೀರ್ಪು ಆಗಿತ್ತು. ನಿಯಮ, ನಿಷ್ಠೆ, ಶ್ರದ್ಧೆಯಿಂದ ದೈವಚಾಕ್ರಿ ಮಾಡುತ್ತಿದ್ದ ಅವರು ಯುವ ದೈವಾರಾಧಕರಿಗೆ ಮಾದರಿಯಾಗಿದ್ದರು.
ಶ್ರದ್ಧಾಂಜಲಿ ಸಭೆ ಅಗಲಿದ ಸೋಮು ಪಾಣಾರ ಅವರ ಆತ್ಮಕ್ಕೆ ಚಿರಶಾಂತಿ ಕೋರಿ ದೈವ ನರ್ತಕ ಸೋಮು ಪಾಣಾರ ಅಭಿಮಾನಿ ಬಳಗವು 09-07-2026, ಗುರುವಾರ ಸಮಯ: ಮಧ್ಯಾಹ್ನ 11.00 ಗಂಟೆ ಸ್ಥಳ: ಕುಕ್ಕೆಹಳ್ಳಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಶ್ರದ್ಧಾಂಜಲಿ ಸಭೆ ಆಯೋಜಿಸಿದೆ.
ಅಭಿಮಾನಿ ಬಳಗವು ಎಲ್ಲಾ ದೈವಾರಾಧಕರು, ಕಲಾಭಿಮಾನಿಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಶ್ರೀಯುತರ ಆತ್ಮಕ್ಕೆ ಶಾಂತಿ ಕೋರಬೇಕೆಂದು ವಿನಂತಿಸಿದೆ.
ಕಲಾಲೋಕಕ್ಕೆ ಬರಸಿಡಿಲು
ತುಳುನಾಡಿನಲ್ಲಿ ದೈವ ನರ್ತಕರು ಕೇವಲ ಕಲಾವಿದರಲ್ಲ. ಅವರು ದೈವ ಮತ್ತು ಭಕ್ತರ ನಡುವಿನ ಕೊಂಡಿ. ಸೋಮು ಪಾಣಾರ ಅವರ ಅಗಲಿಕೆಯಿಂದ ಆ ಕೊಂಡಿ ಒಂದು ಕಳಚಿದಂತಾಗಿದೆ ಎಂದು ಹಿರಿಯ ದೈವಾರಾಧಕರು ಕಂಬನಿ ಮಿಡಿದಿದ್ದಾರೆ. ಸರಳ, ಸಜ್ಜನಿಕೆಯ ವ್ಯಕ್ತಿತ್ವದಿಂದ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದ ಸೋಮು ಪಾಣಾರ ಅವರ ಸೇವೆಯನ್ನು ತುಳುನಾಡು ಸದಾ ಸ್ಮರಿಸುತ್ತದೆ.
ವರದಿ: ವಿನೋದ್ ಶೆಟ್ಟಿ, ಉಡುಪಿ

