ರೋಟರಿ ಜಿಲ್ಲಾಮಟ್ಟದ ರಸಪ್ರಶ್ನಾ ಸ್ಪರ್ಧಾ ಕೂಟ : ರೋಟರಿ ಮೈಸೂರು ವಿಜಯನಗರ ಸಂಸ್ಥೆಗೆ ಪ್ರಶಸ್ತಿ

0
23

ಮಂಗಳೂರು ಫೆ 28 : ರೋಟರಿ ಮಂಗಳೂರು ಸೆಂಟ್ರಲ್ ಸಂಸ್ಥೆಯ ಆಶ್ರಯದಲ್ಲಿ ರೋಟರಿ ಜ್ಞಾನ, ಮಾಹಿತಿ ಮತ್ತು ಜಾಗೃತಿ ಅಭಿಯಾನದ ಅಂಗವಾಗಿ ರೋಟರಿ ಜಿಲ್ಲಾ ಮಟ್ಟದ 20ನೇ ವಾರ್ಷಿಕ “ಅಂತರ ರೋಟರಿ ಕ್ಲಬ್ ರಸಪ್ರಶ್ನಾ ಸ್ಪರ್ಧಾ ಕೂಟ” 27.02.2026 ರಂದು ನಗರದ ಬಿಜೈ ಓಷನ್ ಪಾರ್ಲ್ ಹೊಟೇಲ್ ಸಭಾಂಗಣದಲ್ಲಿ ಜರಗಿತು. ರೋಟರಿ ಕ್ಲಬ್, ಮೈಸೂರು ವಿಜಯನಗರ ಸಂಸ್ಥೆಯನ್ನು ಪ್ರತಿನಿಧಿಸಿದ ರೋ. ಹೆಚ್, ಎಮ್. ಹರೀಶ್ ರವರು ಪ್ರಥಮ ಸ್ಥಾನ ಪಡೆದು ರೋಟರಿ ಪ್ರತಿಷ್ಠಿತ ಪ್ರಶಸ್ತಿ ಪಡೆದರು. ರೋಟರಿ ಕ್ಲಬ್ ಮಂಗಳೂರು ಸಿಟಿ ಸಂಸ್ಥೆಯನ್ನು ಪ್ರತಿನಿಧಿಸಿದ ರೋ. ಡಾ. ರಂಜನ್ ಮತ್ತು ರೋ. ಸುಮಿತ್ ರಾವ್ ತಂಡ ದ್ವಿತೀಯ ಸ್ಥಾನ ಪಡೆದರು. ರೋಟರಿ ಮಂಗಳೂರು ಕೋಸ್ಟಲ್ ಸಂಸ್ಥೆಯನ್ನು ಪ್ರತಿನಿಧಿಸಿದ ರೋ. ಸುಬೋದ್ ಕುಮಾರ್ ದಾಸ್ ಮತ್ತು ರೋ. ಕಿರಣ್ ಪ್ರಸಾದ್ ರೈ ತೃತೀಯ ಸ್ಥಾನವನ್ನು ಪಡೆಯಿತು. ಈ ಸ್ಪರ್ಧಾ ಕೂಟವು ಅತ್ಯಂತ ಕುತೂಹಲಕಾರಿ ಮತ್ತು ರೋಮಾಂಚನಕಾರಿಯಾಗಿತ್ತು. ಕೇವಲ ರೋಟರಿ ಸಂಸ್ಥೆಯ ಆಡಳಿತ ವಿಷಯ ಹಾಗೂ ಚಟುವಟಿಕೆಗಳ ಬಗ್ಗೆ ಜರಗಿಸಲಾಗಿತ್ತು.

ಮೈಸೂರು ನಗರ ಮೂಲದ ಖ್ಯಾತ ಕೈಗಾರಿಕೋದ್ಯಮಿ ಹಾಗೂ ಮಾಜಿ ರೋಟರಿ ಜಿಲ್ಲಾ ಗವರ್ನರ್ ರೋ ಹೆಚ್. ಆರ್. ಕೇಶವ್ ರವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಸ್ಪರ್ಧಾಕೂಟದ ನಿರೂಪಕ ರೋ. ಡಾ. ದೇವದಾಸ್ ರೈ ರವರು ರೋಟರಿ ಅಂದೋಲನಕ್ಕೆ ನೀಡಿದ ಕೊಡುಗೆ ಮತ್ತು ಸಲ್ಲಿಸಿದ ಅನುಪಮ ಸೇವೆ ಅಪಾರ ಮತ್ತು ಅಮೂಲ್ಯ ಎಂದು ನುಡಿದು ಅವರ ಅಪ್ರತಿಮ ಸಾಧನೆಯನ್ನು ಶ್ಲಾಘಿಸಿದರು. ಬಳಿಕ ಸ್ಪರ್ಧಾ ಕೂಟ ವಿಜೇತರಿಗೆ ರೋಟರಿ ಆಕರ್ಷಕ ಪ್ರಶಸ್ತಿ, ಪ್ರಮಾಣ ಪತ್ರ ಮತ್ತು ನಗದು ರೂ.3,000/- ಬಹುಮಾನವನ್ನು ಹಸ್ತಾಂತರಿಸಿ, ಅಭಿನಂದಿಸಿದರು. ವಲಯ ಸಹಾಯಕ ಗವರ್ನರ್ ರೋ. ಚಿನ್ನಗಿರಿ ಗೌಡರವರು ಗೌರವ ಅತಿಥಿಯಾಗಿ ಪಾಲ್ಗೊಂಡು ಸಂಸ್ಥೆಯ ಸಾಪ್ತಾಹಿಕ ವಾರ್ತಾ ಗೃಹ ಪತ್ರಿಕೆ “ಸೆಂಟೋರ್” ರನ್ನು ಬಿಡುಗಡೆಗೊಳಿಸಿದರು. ಕ್ಲಬ್ ಅಧ್ಯಕ್ಷರಾದ ರೋ. ಬಾಸ್ಕರ್ ರೈ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ವಲಯ ಪ್ರತಿನಿಧಿ ರೋ. ರವಿ ಜಲಾನ್, ಸಂಸ್ಥೆಯ ನಿಯೋಜಿತ ಅಧ್ಯಕ್ಷ ರೋ. ರವೀಂದ್ರ ಬಿ.ಎನ್. ಉಪಸ್ಥಿತರಿದ್ದರು.

ಮೈಸೂರು, ಕೊಳ್ಳೆಗಾಲ, ಎಲಂದೂರ್, ಮಂಗಳೂರು, ಸುರತ್ಕಲ್, ಪುತ್ತೂರು, ದೇರಳಕಟ್ಟೆ ಸಿದ್ದಕಟ್ಟೆ ಜಿಲ್ಲೆಯ 14 ತಂಡಗಳು ಅಂತಿಮ ಮತ್ತು ನಿರ್ಣಾಯಕ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಕಾರ್ಯದರ್ಶಿ ರೋ. ವಿಕಾಸ್ ಕೋಟ್ಯಾನ್ ಮಾಸಿಕ ವರದಿ ಮಂಡಿಸಿದರು. ಮಾಜಿ ಅಧ್ಯಕ್ಷ ರೋ. ಸಾಯಿಬಾಬಾ ರಾವ್ ವಂದಿಸಿದರು.

ವರದಿ : ಎಂ.ಎ. ಮಲ್ಯ

LEAVE A REPLY

Please enter your comment!
Please enter your name here