ಮಂಗಳೂರಿನಲ್ಲಿ ಜುಲೈ 19 ರಂದು ‘ಕರ್ಂಗೋಲ್‌ – ಕಂಗುಲು’ ಸಾಕ್ಷ್ಯಚಿತ್ರ ಪ್ರದರ್ಶನ ಹಾಗೂ ‘ಕುದ್ಕ ಬಚ್ಚಿರೆ’ ಪುಸ್ತಕ ಬಿಡುಗಡೆ!

0
11

ಮಂಗಳೂರು: ತುಳುನಾಡಿನ ಸಾಂಸ್ಕೃತಿಕ ಆಸ್ಮಿತೆ, ಮೌಖಿಕ ಇತಿಹಾಸ ಹಾಗೂ ಸಾಹಿತ್ಯ ಪರಂಪರೆಯನ್ನು ಬಿಂಬಿಸುವ ಎರಡು ವಿಶೇಷ ಕಾರ್ಯಕ್ರಮಗಳಿಗೆ ಮಂಗಳೂರು ಸಾಕ್ಷಿಯಾಗಲಿದೆ.

ಹೌದು ಇದೇ ಜುಲೈ 19ರಂದು ಮಂಗಳೂರಿನ ನಂತೂರಿನಲ್ಲಿರುವ ಸಂದೇಶ ಫೌಂಡೇಶನ್‌ನಲ್ಲಿ ತುಳುನಾಡಿನ ಮೂಲನಿವಾಸಿಗಳ ಕಲಾಪ್ರಕಾರಗಳ ಕುರಿತ ಡಾಕ್ಯುಮೆಂಟರಿ ಪ್ರದರ್ಶನ ಹಾಗೂ ವಿಶಿಷ್ಟ ತುಳು ಸಣ್ಣ ಕತೆಗಳ ಪುಸ್ತಕ ಬಿಡುಗಡೆ ಕಾರ್ಯಕ್ರಮ ಆಯೋಜಿಸಲಾಗಿದೆ.

‘ಕರ್ಂಗೋಲ್‌ – ಕಂಗುಲು’ ಸಾಕ್ಷ್ಯಚಿತ್ರ ಪ್ರದರ್ಶನ ಮತ್ತು ಸಂವಾದ

ತುಳುನಾಡಿನ ಮೂಲ ನಿವಾಸಿ ಸಮುದಾಯದ ಅತ್ಯಂತ ಪ್ರಮುಖ ಹಾಗೂ ಸಾಂಪ್ರದಾಯಿಕ ಕಲಾಪ್ರಕಾರಗಳಾದ ‘ಕರ್ಂಗೋಲ್‌’ ಮತ್ತು ‘ಕಂಗೀಲು’ ಕುರಿತು ಸಿದ್ಧಪಡಿಸಲಾದ ವಿಶೇಷ ಸಾಕ್ಷ್ಯಚಿತ್ರ (ಡಾಕ್ಯುಮೆಂಟರಿ) ಅಂದು ಬೆಳಿಗ್ಗೆ 10:00 ಗಂಟೆಗೆ ಪ್ರದರ್ಶನಗೊಳ್ಳಲಿದೆ.ಮಾಯಿಲು ಫಿಲ್ಮ್ಸ್‌ ಮತ್ತು ಕಡಲ್‌ ಸ್ಟುಡಿಯೋಸ್ ಜಂಟಿಯಾಗಿ ನಿರ್ಮಿಸಿರುವ ಈ ಚಿತ್ರವು 108 ನಿಮಿಷಗಳ ಕಾಲಾವಧಿಯನ್ನು ಹೊಂದಿದೆ.

ಏನಿದರ ವಿಶೇಷತೆ

ತುಳುನಾಡಿನ ಮೌಖಿಕ ಇತಿಹಾಸ, ಸಾಂಸ್ಕೃತಿಕ ಅವಳಿ ವೀರರ ಚರಿತ್ರೆ, ಮೂಲನಿವಾಸಿ ಸಮುದಾಯಗಳ ಆಚರಣೆಗಳು ಹಾಗೂ ಅವರ ಸಾಂಸ್ಕೃತಿಕ ಆಸ್ಮಿತೆಯನ್ನು ಈ ಚಿತ್ರವು ವಿವರಿಸುತ್ತದೆ. ಈ ಸಾಕ್ಷ್ಯಚಿತ್ರವನ್ನು ಜಯಂತ್‌ ನಿಟ್ಟಡೆ ಮತ್ತು ಸಾಗರ್‌ ಬನ್ನಂಜೆ ಜಂಟಿಯಾಗಿ ನಿರ್ದೇಶಿಸಿದ್ದು, ಶಿವಪ್ರಸಾದ್‌ ಮತ್ತು ಪ್ರದೀಪ್‌ ಗರ್ಡಾಡಿ ಅವರು ಛಾಯಾಗ್ರಹಣ ಹಾಗೂ ಸಂಕಲನದ ಜವಾಬ್ದಾರಿ ನಿಭಾಯಿಸಿದ್ದಾರೆ. ಚಿತ್ರ ಪ್ರದರ್ಶನದ ನಂತರ ಚಿತ್ರತಂಡದೊಂದಿಗೆ ಮುಕ್ತ ಸಂವಾದ ಕಾರ್ಯಕ್ರಮ ನಡೆಯಲಿದೆ.

‘ಕುದ್ಕ ಬಚ್ಚಿರೆ’ ಪುಸ್ತಕ ಬಿಡುಗಡೆ ಮತ್ತು ಪ್ರಶಸ್ತಿ ಪ್ರದಾನ

ತುಳು ಸಾಹಿತ್ಯ ಪರಂಪರೆಯಲ್ಲಿಯೇ ಮೊದಲ ಬಾರಿಗೆ ಆಯೋಜಿಸಲಾಗಿದ್ದ ವಿಶಿಷ್ಟ ತುಳು ಸಣ್ಣ ಕಥೆ ಬರೆಯುವ ಸ್ಪರ್ಧೆ “ಕುದ್ಕ ಬಚ್ಚಿರೆ”ಯ ಪುಸ್ತಕ ಬಿಡುಗಡೆ ಕಾರ್ಯಕ್ರಮ ಅಂದು ಬೆಳಿಗ್ಗೆ 9:30ಕ್ಕೆ ನೆರವೇರಲಿದೆ. ಸ್ಪರ್ಧೆಯಲ್ಲಿ ವಿಜೇತರಾದ ಬರಹಗಾರರಿಗೆ ಈ ಸಂದರ್ಭದಲ್ಲಿ ಬಹುಮಾನ ವಿತರಣೆ ಮಾಡಲಾಗುವುದು. ಸ್ಪರ್ಧೆಗೆ ಬಂದ ಕಥೆಗಳಲ್ಲಿ ಅತ್ಯುತ್ತಮವಾದವುಗಳನ್ನು ಆಯ್ದು ಸಿದ್ಧಪಡಿಸಲಾದ “ಕುದ್ಕ-ಬಚ್ಚಿರೆ” ಪುಸ್ತಕವನ್ನು ಇದೇ ವೇದಿಕೆಯಲ್ಲಿ ಲೋಕಾರ್ಪಣೆಗೊಳಿಸಲಾಗುವುದು.

ಎಲ್ಲರಿಗೂ ಮುಕ್ತ ಅವಕಾಶ

ಈ ವಿಶಿಷ್ಟ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಪ್ರವೇಶ ಸಂಪೂರ್ಣ ಉಚಿತವಾಗಿದ್ದು, ಆಸಕ್ತರಿಗೆ ಮುಕ್ತ ಅವಕಾಶವಿದೆ. ತುಳು ಸಾಹಿತಿಗಳು, ಸಂಶೋಧಕರು, ವಿದ್ಯಾರ್ಥಿಗಳು, ಸಿನಿಮಾದ ರಂಗದ ಗಣ್ಯರು, ಕಲಾ ಪ್ರೇಮಿಗಳು ಹಾಗೂ ಸಮುದಾಯದ ಹಿರಿಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ತುಳು ಸಾಹಿತ್ಯ ಮತ್ತು ಕಲೆಯ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಸಂಘಟಕರು ವಿನಂತಿಸಿದ್ದಾರೆ.

ಸಂಪರ್ಕಕ್ಕಾಗಿ 7795529458, 8870358703