“ಮರದ ನೆರಳು – ಬದುಕಿಗೆ ನೆರಳು”: ಕರ್ನಾಟಕ ಪ್ರೌಢಶಾಲೆ, ಮಾಣಿಯಲ್ಲಿ ಯುವ ವಾಹಿನಿ(ರಿ.)ಮಾಣಿ ಘಟಕದ ಯುವ ವೃಕ್ಷೋತ್ಸವ–2026 ಯಶಸ್ವಿ ಸಮಾಪ್ತಿ

0
6

ಮಾಣಿ : ಯುವವಾಹಿನಿ (ರಿ.) ಮಾಣಿ ಘಟಕದ ವತಿಯಿಂದ ಪರಿಸರ ಸಂರಕ್ಷಣೆ ಹಾಗೂ ಸಾಮಾಜಿಕ ಜವಾಬ್ದಾರಿಯ ಸಂದೇಶ ಸಾರುವ ಉದ್ದೇಶದಿಂದ ಹಮ್ಮಿಕೊಂಡಿದ್ದ ‘ಯುವ ವೃಕ್ಷೋತ್ಸವ–2026’ ಕಾರ್ಯಕ್ರಮವು ಕರ್ನಾಟಕ ಪ್ರೌಢಶಾಲೆ ಮಾಣಿಯಲ್ಲಿ ಯಶಸ್ವಿಯಾಗಿ ಸಮಾಪ್ತಿಗೊಂಡಿತು.

“ಮರದ ನೆರಳು – ಬದುಕಿಗೆ ನೆರಳು” ಎಂಬ ಧ್ಯೇಯವಾಕ್ಯದೊಂದಿಗೆ ಆಯೋಜಿಸಲಾದ ಈ ಅಭಿಯಾನದಡಿ ಜೂನ್ ಪೂರ್ತಿ ಒಂದು ತಿಂಗಳ ಅವಧಿಯಲ್ಲಿ ದೇವಸ್ಥಾನ, ದೈವಸ್ಥಾನ, ಶಾಲೆ-ಕಾಲೇಜು, ಗ್ರಾಮ ಪಂಚಾಯಿತಿ, ಅಂಗನವಾಡಿ ಕೇಂದ್ರ, ರುದ್ರಭೂಮಿ ಸೇರಿದಂತೆ 20ಕ್ಕೂ ಹೆಚ್ಚು ಸಾರ್ವಜನಿಕ ಸ್ಥಳಗಳಲ್ಲಿ ಗಿಡಗಳನ್ನು ನೆಟ್ಟು ಪರಿಸರ ಜಾಗೃತಿಯನ್ನು ಮೂಡಿಸಲಾಯಿತು.

ಯುವವಾಹಿನಿ ಮಾಣಿ ಘಟಕದ ಸದಸ್ಯರು ಒಗ್ಗಟ್ಟಿನಿಂದ ಈ ಸಮಾಜಮುಖಿ ಅಭಿಯಾನವನ್ನು ಯಶಸ್ವಿಯಾಗಿ ನಡೆಸಿ, ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಹೊಣೆಗಾರಿಕೆ ಎಂಬ ಸಂದೇಶವನ್ನು ಸಮಾಜಕ್ಕೆ ಸಾರಿದರು. ಸಾರ್ವಜನಿಕ ಉಪಯೋಗದ ಸ್ಥಳಗಳಲ್ಲಿ ಹಸಿರು ವಾತಾವರಣ ನಿರ್ಮಾಣಕ್ಕೆ ಕೈಜೋಡಿಸಿದ ಈ ಕಾರ್ಯಕ್ಕೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ಹಾಗೂ ಪ್ರಶಂಸೆ ವ್ಯಕ್ತವಾಯಿತು.

ಯುವ ವೃಕ್ಷೋತ್ಸವ ಸಮಾರೋಪ ಕಾರ್ಯಕ್ರಮದಲ್ಲಿ ಯುವವಾಹಿನಿ (ರಿ.) ಮಾಣಿ ಘಟಕದ ಅಧ್ಯಕ್ಷ ಗಣೇಶ್ ಸಾಯಿ ಕೊಡಾಜೆ, ಕರ್ನಾಟಕ ಪ್ರೌಢ ಶಾಲೆ ಮಾಣಿಯ ಆಡಳಿತ ಮಂಡಳಿ ಅಧ್ಯಕ್ಷ ಕಿರಣ್ ಹೆಗ್ಡೆ, ಯುವವಾಹಿನಿ ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಸೋಮಸುಂದರ ಸಾಲಿಯಾನ್, ಕೇಂದ್ರ ಸಮಿತಿಯ ಬೈಲಾ ತಿದ್ದುಪಡಿ ಸಮಿತಿಯ ಸಂಚಾಲಕ ರಾಜೇಶ್ ಸುವರ್ಣ ಬಂಟ್ವಾಳ , ಯುವವಾಹಿನಿ ಬಂಟ್ವಾಳ ಘಟಕದ ಸಮಾಜ ಸೇವೆ ನಿರ್ದೇಶಕರಾದ ಚಿನ್ನಾ ಕಲ್ಲಡ್ಕ, ಕರ್ನಾಟಕ ಪ್ರೌಢ ಶಾಲಾ ಮಾಣಿಯ ಶಿಕ್ಷಕಿ ಪ್ರತಿಮಾ ಹರೀಶ್, ಘಟಕದ ಮಾಜಿ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

ಪರಿಸರ ಸಂರಕ್ಷಣೆ ಮತ್ತು ಹಸಿರು ಪರಿಸರ ನಿರ್ಮಾಣದ ಸಂಕಲ್ಪದೊಂದಿಗೆ ಇಂತಹ ಸಮಾಜಮುಖಿ ಕಾರ್ಯಕ್ರಮಗಳನ್ನು ಮುಂದೆಯೂ ನಿರಂತರವಾಗಿ ಹಮ್ಮಿಕೊಳ್ಳುವುದಾಗಿ ಯುವವಾಹಿನಿ (ರಿ.) ಮಾಣಿ ಘಟಕ ತಿಳಿಸಿದೆ.

LEAVE A REPLY

Please enter your comment!
Please enter your name here