ಮೇ 8,15 : ಎರಡು ಕಂತುಗಳಲ್ಲಿ ಪ್ರಸಾರ
ಮಂಗಳೂರು: ಕರಾವಳಿ ಜಿಲ್ಲೆಗಳಲ್ಲಿ ಶ್ರೀ ಶನೀಶ್ವರ ಪೂಜಾ ಪ್ರಸಂಗವೆಂದೇ ಪ್ರಸಿದ್ಧಿ ಪಡೆದ ಚಿನ್ಮಯ ದಾಸರ ‘ಶ್ರೀ ಶನೀಶ್ವರ ಮಹಾತ್ಮೆ’ ಯು ಇದೀಗ ಮಂಗಳೂರು ಆಕಾಶವಾಣಿಯಿಂದ ಯಕ್ಷಗಾನ ತಾಳಮದ್ದಳೆಯಾಗಿ ಪ್ರಸಾರಗೊಳ್ಳಲಿದೆ. ಕರ್ನಾಟಕ ಯಕ್ಷ ಭಾರತಿ ಪುತ್ತೂರು ತಂಡದ ಕಲಾವಿದರು ಇದನ್ನು ಎರಡು ಕಂತುಗಳಾಗಿ ಪ್ರಸ್ತುತಪಡಿಸುವರು.

ಶನಿ ಪ್ರಭಾವ : ಭರತವರ್ಷದ ಚಕ್ರವರ್ತಿ ರಾಜಾ ವಿಕ್ರಮಾದಿತ್ಯನ ಜನ್ಮ ರಾಶಿಗೆ ಶನಿ ಪ್ರವೇಶವಾಗುವ ಸಂದರ್ಭದ ತಾಳಮದ್ದಳೆಯ ಮೊದಲನೇ ಭಾಗ ‘ಶನಿ ಪ್ರಭಾವ’ ಮೇ 8 ರಂದು ಶುಕ್ರವಾರ ರಾತ್ರಿ ಗಂಟೆ 9.30ಕ್ಕೆ ಪ್ರಸಾರವಾಗಲಿದೆ.
ಅರ್ಥಧಾರಿಗಳಾಗಿ ಭಾಸ್ಕರ ರೈ ಕುಕ್ಕುವಳ್ಳಿ (ವಿಕ್ರಮಾದಿತ್ಯ ),ಗಣರಾಜ ಕುಂಬ್ಳೆ( ಶನೈಶ್ಚರ), ಎಂ.ಕೆ.ರಮೇಶ ಆಚಾರ್ಯ(ಅಲೋಲಿಕೆ), ರಮೇಶ ಸಾಲ್ವಣ್ಕರ್(ನಂದಿ ಶ್ರೇಷ್ಠಿ), ಉಮೇಶಾಚಾರ್ಯ ಗೇರುಕಟ್ಟೆ (ಸುಶೀಲೆ) ಮತ್ತು ಹರಿಶ್ಚಂದ್ರ ನಾಯಗ ಮಾಡೂರು (ಚಂದ್ರಶಯನ) ವಿವಿಧ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಭಾಗವತರಾಗಿ ಪ್ರಶಾಂತ ರೈ ಪುತ್ತೂರು; ಹಿಮ್ಮೇಳದಲ್ಲಿ ಪಿ.ಟಿ. ಜಯರಾಮ ಭಟ್, ಕೋಳ್ಯೂರು ಭಾಸ್ಕರ ಭಾಗವಹಿಸಿದ್ದಾರೆ.
ವಿಕ್ರಮಾದಿತ್ಯ ವಿಜಯ : ಪ್ರಸಂಗದ ಎರಡನೇ ಭಾಗ ‘ವಿಕ್ರಮಾದಿತ್ಯ ವಿಜಯ’ ದಲ್ಲಿ ಏಳೂವರೆ ವರ್ಷಗಳ ಶನಿಪೀಡೆಯಿಂದ ವಿಕ್ರಮನನ್ನು ಬಿಡುಗಡೆಗೊಳಿಸಿ ಅವನಿಗೆ ಸಕಲ ಸೌಭಾಗ್ಯ ಸಂಪತ್ತುಗಳನ್ನು ಕರುಣಿಸಿ, ಶ್ರೀ ಶನೈಶ್ಚರ ವ್ರತಾನುಷ್ಠಾನದ ಫಲಶ್ರುತಿ ಯೊಂದಿಗೆ ಶನಿದೇವ ಅಂತರ್ಧಾನನಾಗುವ ರೋಚಕ ಕಥೆಯಿದ್ದು ಅದು ಮುಂದಿನ ಶುಕ್ರವಾರ ಮೇ 15 ರಂದು ರಾತ್ರಿ 9:30ಕ್ಕೆ ಪ್ರಸಾರವಾಗುವುದು. ಕರ್ನಾಟಕ ಯಕ್ಷ ಭಾರತಿ ಸಂಚಾಲಕ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಸಂಯೋಜಿಸಿದ ಈ ಯಕ್ಷಗಾನವನ್ನು ಮಂಗಳೂರು ಆಕಾಶವಾಣಿಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಲತೀಶ್ ಪಾಲ್ದನೆ ನಿರ್ಮಿಸಿ ಬಾನುಲಿ ಪ್ರಸಾರಕ್ಕೆ ಸಿದ್ಧಪಡಿಸಿದ್ದಾರೆ.
ಚೈತನ್ಯ ಪ್ರಶಾಂತ್ ಧ್ವನಿ ಮುದ್ರಣ ಹಾಗೂ ಸಂಕಲನ ಕಾರ್ಯದಲ್ಲಿ ಸಹಕರಿಸಿದ್ದಾರೆ ಎಂದು ಪುತ್ತೂರಿನ ಕರ್ನಾಟಕ ಯಕ್ಷ ಭಾರತಿಯ ಪ್ರಕಟಣೆ ತಿಳಿಸಿದೆ.

