ಜಾತಿ ಧರ್ಮಗಳನ್ನು ಮೀರಿ ಅಸಹಾಯಕ ಮಕ್ಕಳ ರಕ್ಷಣೆ, ನೀರಿನಲ್ಲಿ ಮುಳುಗಿ ತೀರಿಕೊಂಡ ಜೀವಗಳಿಗೆ ಮುಕ್ತಿ ದೊರಕಿಸುವುದು ಹಾಗೂ ಅವರ ಕುಟುಂಬದವರಿಗೆ ನೆಮ್ಮದಿ ಕೊಡಿಸುವುದು ಅತ್ಯಂತ ಸಂತೋಷದ ಹಾಗೂ ಪುಣ್ಯದ ಕೆಲಸ ಎಂದು ಆಪದ್ಬಾಂಧವ, ಸಮಾಜ ಸೇವಕ ಈಶ್ವರ ಮಲ್ಪೆ ಹೇಳಿದರು. ಮುಂದುವರಿದು, ಸಣ್ಣ ಸಣ್ಣ ವಿಷಯಗಳಿಗೆ ದುಡುಕಿ ನಿರ್ಧಾರ ತೆಗೆದುಕೊಳ್ಳಬಾರದು .ಮಾದಕ ವ್ಯಸನಗಳಿಗೆ ಬಲಿ ಬೀಳಬಾರದು. ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳದೆ ಸೆಲ್ಫಿ ಗೀಳಿಗೆ ಬಲಿಯಾಗಬಾರದು ಎಂದು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.
ಪ್ರತಿಯೊಬ್ಬರು ಸಮಾಜ ಮುಖಿ ಕೆಲಸಗಳಲ್ಲಿ ತೊಡಗಿಸಿಕೊಳ್ಳಿ ಹಾಗೂ ತಂದೆ ತಾಯಿ ಗುರು ಹಿರಿಯರನ್ನು ಯಾವತ್ತೂ ಗೌರವಿಸಿ ಎಂದು ಕರೆ ನೀಡಿದರು. ನೀರಿನಲ್ಲಿ ಮುಳುಗಿ ದೇಹಗಳನ್ನು ಹೊರ ತೆಗೆಯುವ, ಬೆಲೆ ಬಾಳುವ ವಸ್ತುಗಳನ್ನು ನೀರಿನಾಳದಿಂದ ಹೊರ ತೆಗೆದು ಸಂಬಂಧಿತರಿಗೆ ತಲುಪಿಸುವ, ಅನಾರೋಗ್ಯ ಪೀಡಿತ ಮಕ್ಕಳನ್ನು ತುರ್ತು ಸಂದರ್ಭದಲ್ಲಿ ಉಚಿತ ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ತಲುಪಿಸುವ ತನ್ನೆಲ್ಲಾ ಬೇಗುದಿಗಳನ್ನು ಒಡಲಾಳದಲ್ಲಿ ಬಚ್ಚಿಟ್ಟು,ನಾಡಿನ ಯಾವುದೇ ತುರ್ತು ಪರಿಸ್ಥಿತಿಯಲ್ಲಿ ಜೀವದ ಹಂಗು ತೊರೆದು ಶ್ರಮಿಸುವ, ಆಪದ್ಬಾಂಧವ ಈಶ್ವರ ಮಲ್ಪೆ ಇವರ ಸಾಧನೆಯನ್ನು ಪರಿಗಣಿಸಿ ಸೈಲಸ್ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾದ ಸಾಮಾಜಿಕ ಅರಿವು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಸಂಸ್ಥೆಯ ಟ್ರಸ್ಟಿ ಶಾರ್ಲೆಟ್ ಮಾಬೆನ್ ಉಪಸ್ಥಿತರಿದ್ದರು. ಕಾಲೇಜಿನ ಪ್ರಿನ್ಸಿಪಾಲ್ ಡಾ. ಜಾರ್ಜ್ ಸನ್ಮಾನಿತರಿಗೆ ಮುಂದೆಯೂ ಇವರ ಸೇವೆ ಸಮಾಜಕ್ಕೆ ಸಿಗುವಂತಾಗಲಿ ಎಂದು ಶುಭ ಹಾರೈಸಿದರು.
ಸಾನ್ವಿ, ಜಾಯ್ಲಿನ್ ಮತ್ತು ಆಯೇಷಾ ಪ್ರಾರ್ಥಿಸಿದರು. ಪೂರ್ಣಿಮಾ ಸ್ವಾಗತಿಸಿದರು.
ಶಾಲಿನಿ ಅತಿಥಿಗಳನ್ನು ಪರಿಚಯಿಸಿದರು. ನವೀನ್ ಸನ್ಮಾನ ಪತ್ರ ವಾಚಿಸಿದರು. ದೀಪಾ ವಂದಿಸಿದರು.
ರಕ್ಷಿತಾ ಕಾರ್ಯಕ್ರಮ ನಿರೂಪಿಸಿದರು.

