[ಯಕ್ಷಗಾನ ಅಭ್ಯಾಸ ಕೇಂದ್ರದ ತವರೂರು ತಿರುಗಾಟದಲ್ಲಿ ಪ್ರಶಸ್ತಿ ಪ್ರದಾನ]
ದುಬೈ : ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇ (YAKU)ಯು ತವರೂರು ತಿರುಗಾಟದಲ್ಲಿ ವರ್ಷಂಪ್ರತಿ ತಾಯಿನಾಡಿನ ಯಕ್ಷಗಾನ ರಂಗದ ಸಾಧಕರೊಬ್ಬರನ್ನು ಗುರುತಿಸಿ ನೀಡುತ್ತಾ ಬಂದಿರುವಂತೆ 2025-2026 ರ ಸಾಲಿನ “ವಿಶೇಷ ಯಕ್ಷ ಶ್ರೀ ರಕ್ಷಾ ಗೌರವ ಪ್ರಶಸ್ತಿ”ಯನ್ನು ಗಡಿನಾಡಿನ ಯಕ್ಷಗಾನ ಹಾಗೂ ರಂಗಭೂಮಿ ಕಲಾವಿದ ವಾಸು ಬಾಯರು ರವರಿಗೆ ನೀಡಲಾಗುವುದೆಂದು ಸಂಸ್ಥೆಯ ಸಂಚಾಲಕರಾದ ದಿನೇಶ್ ಶೆಟ್ಟಿ ಕೊಟ್ಟಿಂಜರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇ ತಂಡದ ತವರೂರಿನ ತಿರುಗಾಟದ ಸಂದರ್ಭದಲ್ಲಿ ಅಗಸ್ಟ್ ಎಂಟರಂದು ಮಂಗಳಾದೇವಿ ದೇವಾಲಯದ ಆವರಣದಲ್ಲಿ ಪ್ರದರ್ಶನಗೊಳ್ಳಲಿರುವ ಯಕ್ಷಗಾನದ ಸಭಾ ಕಾರ್ಯಕ್ರಮದಲ್ಲಿ ವಾಸು ಬಾಯರು ರವರಿಗೆ “ವಿಶೇಷ ಯಕ್ಷ ಶ್ರೀ ರಕ್ಷಾ ಗೌರವ ಪ್ರಶಸ್ತಿ 2026” ಯನ್ನು ನೀಡಿ ಗೌರವಿಸಲಾಗುವುದು ತಿಳಿಸಿದರು.
ಬಳಿಕ ತಂಡದ ಗುರುಗಳಾದ ಶೆಟ್ಟಿಗಾರ್ ರವರು ಮಾತನಾಡುತ್ತಾ ಈ ವರ್ಷದ ನಮ್ಮ ತಂಡ ಊರಿನ ಯಕ್ಷ ಪಯಣದಲ್ಲಿ ಅಗಸ್ಟ್ ಎರಡರಂದು ಮಧ್ಯಾಹ್ನ ಒಂದು ಮೂವತ್ತರಿಂದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸರಸ್ವತಿ ಸದನದಲ್ಲಿ ಕೀರ್ತಿಶೇಷ ಹಿರಿಯ ಬಲಿಪ ನಾರಾಯಣ ಭಾಗವತರ ರಚನೆಯ “ದಶಾವತಾರ”,ಅಗಸ್ಟ್ ನಾಲ್ಕರಂದು ಸಂಜೆ ಆರರಿಂದ ಆಳ್ವಾಸ್ ಧೀಂಕಿಟ ಯಕ್ಷಗಾನ ಅಧ್ಯಯನ ಕೇಂದ್ರದ ಸಹಯೋಗದೊಂದಿಗೆ ಡಾ.ವಿ.ಎಸ್.ಆಚಾರ್ಯ ಸಭಾಂಗಣ ವಿದ್ಯಾಗಿರಿ ಮೂಡುಬಿದಿರೆಯಲ್ಲಿ ಶೇಖರ್ ಶೆಟ್ಟಿಗಾರ್ ವಿರಚಿತ “ಮೋಹಿನಿ ಏಕಾದಶಿ”, ಅಗಸ್ಟ್ ಎಂಟರಂದು ಮಧ್ಯಾಹ್ನ ಒಂದು ಇಪ್ಪತ್ತರಿಂದ ಮಂಗಳಾದೇವಿ ದೇವಾಲಯದ ಸನ್ನಿಧಿಯಲ್ಲಿ ಯಕ್ಷ ಕವಿ ಬೋಳೂರು ಮಧುಕುಮಾರ್ ಮತ್ತು ಕವಿ ತಿರುಮಲ ವಿರಚಿತ “ಸುದರ್ಶನೋಪಖ್ಯಾನ” ಯಕ್ಷಗಾನ ಪ್ರದರ್ಶನಗೊಳ್ಳಲಿದೆ.ಈ ಮೂರು ಯಕ್ಷಗಾನ ಪ್ರದರ್ಶನಗಳಲ್ಲಿ ಊರಿನ ಪ್ರಸಿದ್ಧ ಹಿಮ್ಮೇಳಗಾರರಾದ ಸತೀಶ್ ಶೆಟ್ಟಿ ಪಟ್ಲ,ರವಿಚಂದ್ರ ಕನ್ನಡಿಕಟ್ಟೆ, ಬಲಿಪ ಶಿವಶಂಕರ ಭಟ್, ದೇವಿಪ್ರಸಾದ್ ಆಳ್ವ ತಲಪಾಡಿ, ಚಿನ್ಮಯ ಭಟ್ ಕಲ್ಲಡ್ಕ, ದೇವರಾಜ ಆಚಾರ್ಯ ಐಕಳ, ದಯಾನಂದ ಶೆಟ್ಟಿಗಾರ್ ಮಿಜಾರು,ಆನಂದ ಪಡ್ರೆ, ಮಯೂರ್ ನಾಯ್ಗ್, ರಾಜೇಶ್ ಬಿ ಕಟೀಲು, ಯಜ್ಞೇಶ್ ರೈ ಕಟೀಲು,ವಿಘ್ನೇಶ್ ಶೆಟ್ಟಿಗಾರ್ ಕಿನ್ನಿಗೋಳಿ,ಮನ್ವಿತ್ ಎಸ್ ಪದ್ಮಶಾಲಿ, ರಾಜೇಶ್ ಕುಂಪಲ ಮೊದಲಾದವರು ಸಹಕರಿಸಲಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಸಂಚಾಲಕರಾದ ದಿನೇಶ್ ಶೆಟ್ಟಿ ಕೊಟ್ಟಿಂಜ, ಜಯಾನಂದ ಪಕ್ಕಳ, ಯಕ್ಷಗುರುಗಳಾದ ಶೇಖರ್ ಶೆಟ್ಟಿಗಾರ್,ಶರತ್ ಕುಡ್ಲ, ಸವಿನಯ ನೆಲ್ಲಿತೀರ್ಥ, ಗಿರೀಶ್ ನಾರಾಯಣ್, ವಸಂತ ಶೆಟ್ಟಿ,ಪ್ರಕಾಶ ಪಕಳ,ರಾಜೇಶ್ ಕುತ್ತಾರ್ ಮೊದಲಾದವರು ಉಪಸ್ಥಿತರಿದ್ದರು.
🖋️ ವಿಜಯಕುಮಾರ್ ಶೆಟ್ಟಿ ಗಾಣದಮೂಲೆ(ದುಬೈ)

