ಕೌಶಲ್ಯಾಧರಿತ ಪಾಲಿಟೆಕ್ನಿಕ್ ಶಿಕ್ಷಣದಿಂದ ಉತ್ತಮ ಉದ್ಯೋಗ ಅವಕಾಶಗಳು – ಕೆ. ಅಭಯಚಂದ್ರ ಜೈನ್ ಎಸ್. ಎನ್. ಮೂಡಬಿದ್ರಿ ಪಾಲಿಟೆಕ್ನಿಕ್ ನಲ್ಲಿ ವಿದ್ಯಾರ್ಥಿ ಇಂಡಕ್ಷನ್ ಕಾರ್ಯಕ್ರಮ
ವಿಶ್ವದಾದ್ಯಂತ ಕೌಶಲ್ಯಕ್ಕೆ ವಿಶೇಷ ಮನ್ನಣೆ ಲಭಿಸುತ್ತಿದ್ದು, ತಾಂತ್ರಿಕ ಕೌಶಲ್ಯ ಸಂವರ್ಧನೆಯ ಶಿಕ್ಷಣ ನೀಡುವ ಡಿಪ್ಲೊಮಾ ಪದವಿ ಪಡೆದ ವಿದ್ಯಾರ್ಥಿಗಳು ಜಗತ್ತಿನಾದ್ಯಂತ ವಿಫುಲ ಉದ್ಯೋಗದ ಅವಕಾಶಗಳನ್ನು ಪಡೆಯುತ್ತಿದ್ದಾರೆ. ಉತ್ತಮ ಸೌಲಭ್ಯಗಳನ್ನು ಹೊಂದಿರುವ ರಾಜ್ಯದಲ್ಲೇ ವಿಶಿಷ್ಟ ಸ್ಥಾನ ಪಡೆದಿರುವ ಎಸ್. ಎನ್. ಮೂಡುಬಿದಿರೆ ಪಾಲಿಟೆಕ್ನಿಕ್ಕಿಗೆ ಸೇರ್ಪಡೆಗೊಳ್ಳುವ ಮೂಲಕ ವಿದ್ಯಾರ್ಥಿಗಳು ತಮ್ಮ ಬದುಕಿಗೆ ಭದ್ರ ಬುನಾದಿಯನ್ನು ರೂಪಿಸುತ್ತಿದ್ದೀರಿ.
ಮುಂದೆ ಉತ್ತಮ ನಾಗರಿಕರಾಗುವ ಭರವಸೆ ಮೂಡಿಸುತ್ತಿದ್ದೀರಿ ಎಂದು ಎಸ್. ಎನ್. ಮೂಡಬಿದ್ರಿ ಪಾಲಿಟೆಕ್ನಿಕ್ಕಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ನುಡಿದರು. ಎಸ್. ಎನ್. ಮೂಡಬಿದ್ರಿ ಪಾಲಿಟೆಕ್ನಿಕ್ಕಿನ ಹೊಸದಾಗಿ ಸೇರ್ಪಡೆಗೊಂಡ ಪ್ರಥಮ ವರ್ಷದ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಸ್ಟೂಡೆಂಟ್ ಇಂಡಕ್ಷನ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಶಿಕ್ಷಣ ಕ್ಷೇತ್ರವು ವ್ಯಾಪಾರೀಕರಣ ಗೊಳ್ಳುತ್ತಿರುವ ಇಂದಿನ ಕಾಲದಲ್ಲಿ ಶ್ರೀ ಮಹಾವೀರ ಕಾಲೇಜ್ ಟ್ರಸ್ಟ್ ಗ್ರಾಮೀಣ ಭಾಗದ ಆರ್ಥಿಕವಾಗಿ ಹಿಂದುಳಿದಿರುವ ಕುಟುಂಬಗಳ ವಿದ್ಯಾರ್ಥಿಗಳಿಗೆ ಅತೀ ಕಡಿಮೆ ವೆಚ್ಚದಲ್ಲಿ ಮೌಲ್ಯಯುತವಾದ ಗುಣಮಟ್ಟದ ಶಿಕ್ಷಣ ನೀಡುವ ಕಾರ್ಯ ಮಾಡುತ್ತಿದೆ ಎಂದರು. ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಸಂಪತ್ ಡಿ. ಸಾಮ್ರಾಜ್ಯ ಮಾತನಾಡಿ, ಎಸ್. ಎನ್. ಮೂಡಬಿದ್ರಿ ಪಾಲಿಟೆಕ್ನಿಕ್ ಆರಂಭವಾಗಿ ನಲ್ವತ್ತು ವರ್ಷಗಳಾಗಿದ್ದು ಮೊದಲಬಾರಿಗೆ ದಾಖಲೆ ಮುನ್ನೂರ ಐವತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರಥಮ ವರ್ಷಕ್ಕೆ ಸೇರ್ಪಡೆಗೊಂಡಿರುವುದು ಹೆತ್ತವರು ಈ ಸಂಸ್ಥೆಯ ಮೇಲಿಟ್ಟಿರುವ ವಿಶ್ವಾಸದ ದ್ಯೋತಕವಾಗಿದೆ.
ಇದಕ್ಕೆ ಕಾರಣರಾದ ಪ್ರಾಂಶುಪಾಲರು, ಹಾಗೂ ಸಿಬ್ಬಂದಿ ವರ್ಗದವರ ಪ್ರಾಮಾಣಿಕ ಪ್ರಯತ್ನವನ್ನು ಶ್ಲಾಘಿಸಿದರು. ಪ್ರಾಂಶುಪಾಲರಾದ ನೊರೊನ್ಹಾ ತರೀನಾ ರೀಟಾ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ವಾರ್ಷಿಕ ಇ – ಮ್ಯಾಗಝಿನ್ “ಇಂಪ್ರೆಷನ್ಸ್ʼ ಅನ್ನು ಹಾಗೂ ಸಂಸ್ಥೆಯ ಶೈಕ್ಷಣಿಕ ಕ್ಯಾಲೆಂಡರನ್ನು ಬಿಡುಗಡೆ ಮಾಡಲಾಯಿತು.
ನಿಕಟಪೂರ್ವ ಪ್ರಾಂಶುಪಾಲರಾದ ಜೆ. ಜೆ. ಪಿಂಟೊ ಕಾಲೇಜಿನ ಬಗ್ಗೆ ಸಮಗ್ರ ಮಾಹಿತಿ ನೀಡಿದರು. ಉಪನ್ಯಾಸಕ ಡಾ. ಗುರುದಾಸ್ ಎಸ್. ಪಿ. ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರುಗಳಾದ ಸಿ. ಎಚ್. ಗಫೂರ್, ಪಿ. ರಾಮನಾಥ ಭಟ್, ಸುರೇಶ್ ಪ್ರಭು, ವಿವಿಧ ವಿಭಾಗಗಳ ಮುಖ್ಯಸ್ಥರುಗಳಾದ ಗಣೇಶನ್ ಆರ್, ರಾಜೇಶ್ವರಿ ಕೆ. ಎನ್, ಹರೀಶ್ ತಂತ್ರಿ, ಗೋಪಾಲಕೃಷ್ಣ, ರಾಜೇಂದ್ರ, ಗುರುಪ್ರಸಾದ್ ಪ್ರಭು, ದಿವ್ಯಾ ಶೆಣೈ, ರಶ್ಮಿತಾ ಶೆಟ್ಟಿ, ಹಳೆವಿದ್ಯಾರ್ಥಿಸಂಘದ ಅಧ್ಯಕ್ಷ ಶರತ್ ಶೆಟ್ಟಿ, ಇಂಡಕ್ಷನ್ ಕಾರ್ಯಕ್ರಮ ಸಂಚಾಲಕ ರಾಮಪ್ರಸಾದ್, ವಿದ್ಯಾರ್ಥಿ ಕ್ಷೇಮಪಾಲ ಸುರೇಶ್ ಡಿ. ಬಿ. ಉಪಸ್ಥಿತರಿದ್ದರು. ಉಪನ್ಯಾಸಕಿ ಪ್ರಿಯಾ ಭಟ್ ಕಾರ್ಯಕ್ರಮ ನಿರೂಪಿಸಿದರು. ಸೌಮ್ಯ ಶೆಟ್ಟಿ ಧನ್ಯವಾದ ಸಮರ್ಪಿಸಿದರು.

