ಮುನಿಯಾಲು ಗೋಧಾಮದಲ್ಲಿ ಏಕಪವಿತ್ರ ಶ್ರೀಮನ್ನಾಗಮಂಡಲ : ಸಮಾಲೋಚನ ಸಭೆ

0
59

ಪ್ರಕೃತಿಯ ಜೊತೆಗೆ ಬದುಕು ಗೋಧಾಮ ತೋರಿಸಿದೆ : ಶ್ರೀ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮೀಜಿ

ಹೆಬ್ರಿ : ಮುನಿಯಾಲಿನ ಸಂಜೀವಿನಿ ಫಾರ್ಮ್‌ ಗೋಧಾಮ ನೋಡಿ ಸಂತೋಷವಾಯಿತು. ಪ್ರಕೃತಿಯ ಆರಾಧನೆಯೊಂದಿಗೆ ಬದುಕು ಹೇಗೆ ಕಟ್ಟಿಕೊಳ್ಳಬೇಕೆಂಬುದನ್ನು ಗೋಧಾಮದ ಮೂಲಕ ತಿಳಿದುಕೊಳ್ಳಬೇಕು. ರೈತರ ಬಗ್ಗೆ ವಿಶೇಷ ಕಾಳಜಿ ಹೊಂದಿರುವ ಬಹುಮುಖ ಯೋಜನೆ ಯೊಜನೆಯ ರಾಮಕೃಷ್ಣ ಆಚಾರ್ಯರು ಸರ್ಕಾರ ಮಾಡದಿರುವ ಮಹಾನ್‌ ಕಾರ್ಯವನ್ನು ಮಾಡಿ ಕೃಷಿಪೀಠ ಪ್ರಶಸ್ತಿಯನ್ನು ನೀಡಲು ಮುಂದಾಗಿರುವುದು ಶ್ಲಾಘನೀಯ. ಪ್ರತಿಯೊಬ್ಬರೂ ಸಹಕಾರ ನೀಡಿದಾಗ ಅರ ಕಾರ್ಯ ಯಶಸ್ವಿಯಾಗುತ್ತದೆ ಎಂದು ಕಟಪಾಡಿ ಆನೆಗುಂದಿ ಮಹಾಸಂಸ್ಥಾನದ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮೀಜಿ ಹೇಳಿದರು.

ಅವರು ಮಂಗಳವಾರ ಹೆಬ್ರಿ ತಾಲ್ಲೂಕಿನ ಮುನಿಯಾಲು ಸಂಜೀವಿನಿ ಫಾರ್ಮ್‌ ಗೋಧಾಮದ ನಾಗಬನದಲ್ಲಿ ಫೆಬ್ರವರಿ 19 ರಿಂದ 21ರ ವರೆಗೆ ನಡೆಯಲಿರುವ ಏಕಪವಿತ್ರ ಶ್ರೀಮನ್ನಾಗಮಂಡಲದ ಅಂಗವಾಗಿ ನಡೆದ ಸಮಾಲೋಚನ ಸಭೆಯಲ್ಲಿ ಮಾತನಾಡಿದರು.

ಮುನಿಯಾಲು ಸಂಜೀವಿನಿ ಫಾರ್ಮ್‌ ಗೋಧಾಮದ ಸಂಸ್ಥಾಪಕ ಡಾ. ಜಿ. ರಾಮಕೃಷ್ಣ ಆಚಾರ್ ಮಾತನಾಡಿ ಅಂದಿನ ಕಾಲದ ಪಾರಂಪರಿಕ ಸಂಪ್ರದಾಯದಂತೆ ಗೋಧಾಮದಲ್ಲಿ ದೊಂದಿ ಬೆಳಕಿನಲ್ಲಿ ಭಕ್ತಿಭಾವಪೂರ್ಣ ” ಪ್ರಕೃತಿಯಿಂದ ಪ್ರಕೃತಿ” ಗೆ ಪರಿಕಲ್ಲನೆಯಲ್ಲಿ ಏಕಪವಿತ್ರ ಶ್ರೀಮನ್ನಾಗಮಂಡಲ ಅಭೂತಪೂರ್ವವಾಗಿ ನಡೆಯಲಿದೆ ಎಂದರು.

ಏಕಪವಿತ್ರ ಶ್ರೀಮನ್ನಾಗಮಂಡಲದ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ಶೆಟ್ಟಿ ಕಾರ್ಕಳ ಮಾತನಾಡಿ ಪ್ರಕೃತಿಯೊಂದಿಗೆ ಕೃಷಿಗೆ ವಿಶೇಷವಾದ ಸಂಬಂಧವಿದೆ. ನಾಗಮಂಡಲವನ್ನು ಪರಿಸರಕ್ಕೆ ಪೂರಕವಾಗಿ ಯಾವುದೇ ಧಕ್ಕೆ ಆಗದಂತೆ ನಾಗಮಂಡಲ ಪ್ರಾಚೀನ, ಪಾರಂಪರಿಕವಾದ ಹಿನ್ನೆಲೆಯೊಂದಿಗೆ ಗೋಧಾಮದಲ್ಲಿ ಆಯೋಜನೆಯಾಗಿದೆ. ಈ ಮಹಾನ್‌ ಪವಿತ್ರ ಕಾರ್ಯವನ್ನು ತಪಸ್ಸಿನ ಮೂಲಕ ಡಾ. ಜಿ. ರಾಮಕೃಷ್ಣ ಆಚಾರ್ ಕಾರ್ಯರೂಪಗೊಳಿಸಲಿದ್ದಾರೆ ಎಂದರು.

ವಿಶ್ವಕರ್ಮ ಸಮಾಜದ ಪ್ರಮುಖರಾದ ಶ್ರೀಧರ ಆಚಾರ್ಯ ಮಾತನಾಡಿ, ನಾಗಮಂಡಲದಂತಹ ಪುಣ್ಯ ಕೆಲಸವನ್ನು ಡಾ. ಜಿ ರಾಮಕೃಷ್ಣ ಆಚಾರ್ ಮಾಡುತ್ತಿರುವುದು ನಮ್ಮ ಸಮುದಾಯದ ಹೆಮ್ಮೆ. ಎಲ್ಲರೂ ಸಹಕಾರ ನೀಡುವ ಮೂಲಕ ನೈಸರ್ಗಿಕವಾಗಿ ನಡೆಯುವ ಈ ಕಾರ್ಯವನ್ನು ಯಶಸ್ವಿಗೊಳಿಸೋಣ ಎಂದರು.

ಮುನಿಯಾಲು ಸಂಜೀವಿನಿ ಫಾರ್ಮ್‌ ಗೋಧಾಮದ ಸಂಸ್ಥಾಪಕ ಡಾ. ರಾಮಕೃಷ್ಣ ಆಚಾರ್, ಟ್ರಸ್ಟಿ ಸವಿತಾ ರಾಮಕೃಷ್ಣ ಆಚಾರ್, ಏಕಪವಿತ್ರ ಶ್ರೀಮನ್ನಾಗಮಂಡಲದ ಅಧ್ಯಕ್ಷ ದೇವಿಪ್ರಸಾದ ಶೆಟ್ಟಿ ಮೂಡಬಿದರೆ, ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ಶೆಟ್ಟಿ ಕಾರ್ಕಳ, ಬಾರ್ಕೂರು ಎನ್.‌ ಆರ್‌. ದಾಮೋದರ ಶರ್ಮ, ವಿಶ್ವಕರ್ಮ ಸಮಾಜದ ಮುಖಂಡರು, ವಿವಿಧ ಪ್ರಮುಖರು ಇದ್ದರು. ದಾಮೋದರ ಶರ್ಮ ನಿರೂಪಿಸಿ, ಸ್ವಾಗತಿಸಿದರು.

LEAVE A REPLY

Please enter your comment!
Please enter your name here