ಬಿಸಿಸಿಐಯ ನೂತನ ಖಜಾಂಜಿಯಾಗಿ ವಿಟ್ಲ ಮೂಲದ ಅಡ್ವಾಯಿ ರಘುರಾಮ ಭಟ್ ಆಯ್ಕೆ

0
163

ನವದೆಹಲಿ/ಪುತ್ತೂರು: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯ ನೂತನ ಖಜಾಂಜಿಯಾಗಿ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ, ತುಳುನಾಡಿನ ವಿಟ್ಲ ಮೂಲದ ಅಡ್ವಾಯಿ ರಘುರಾಮ ಭಟ್(67) ಅವರು ಅವಿರೋಧವಾಗಿ ಆಯ್ಕೆಯಾಗಿ ಸೆ.28ರಂದು ಅಧಿಕಾರ ವಹಿಸಿಕೊಂಡಿದ್ದಾರೆ.

ಬಿಸಿಸಿಐ ಅಧ್ಯಕ್ಷರಾಗಿ ದೆಹಲಿ ತಂಡದ ಮಾಜಿ ನಾಯಕ ಮಿಥುನ್ ಮನ್ಮಾಸ್ ಆಯ್ಕೆಯಾಗಿದ್ದು, ಮುಂಬೈಯಲ್ಲಿ ನಡೆದ ಬಿಸಿಸಿಐ ಸಭೆಯಲ್ಲಿ ಅವಿರೋಧ ಆಯ್ಕೆ ನಡೆದು ಪದಾಧಿಕಾರಿಗಳು ಅಧಿಕಾರ ವಹಿಸಿಕೊಂಡರು.

ಕರ್ನಾಟಕ ರಣಜಿ ತಂಡದಲ್ಲಿ ಎಡಗೈ ಸ್ಪಿನ್ನರ್ ಆಗಿ ಆಡಿದ್ದ ರಘುರಾಮ ಭಟ್ ಅವರು ಎರಡು ಟೆಸ್ಟ್ ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ಅದಾದ ಬಳಿಕ ಕ್ರಿಕೆಟ್ ಕೋಚ್ ಆಗಿ, ಆಡಳಿತಗಾರನಾಗಿ ಗುರುತಿಸಿಕೊಂಡಿದ್ದ ಅವರು ಕಳೆದ ಮೂರು ವರ್ಷಗಳಿಂದ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ವಿಟ್ಲ ಮೂಲದ ರಘುರಾಮ ಭಟ್
ರಘುರಾಮ ಭಟ್ ಅವರು ಮೂಲತಃ ಬಂಟ್ವಾಳ ತಾಲೂಕು ಪೆರುವಾಯಿ ಗ್ರಾಮದ ಅಡ್ವಾಯಿಯವರು. ಪುತ್ತೂರಿನಲ್ಲಿ ಈ ಹಿಂದೆ ವಕೀಲರಾಗಿದ್ದ ಅಡ್ವಾಯಿ ಭೀಮ್ ಭಟ್ ಮತ್ತು ನಾರಾಯಣಿ ಅಮ್ಮ ದಂಪತಿಯ ಎರಡನೇ ಮಗನಾಗಿ ಪುತ್ತೂರಿನಲ್ಲಿ ಜನ್ಮ ತಾಳಿದ್ದರು. ಪದವಿವರೆಗಿನ ತಮ್ಮ ಶಿಕ್ಷಣವನ್ನು ಬೆಂಗಳೂರುನಲ್ಲಿ ಪೂರ್ಣಗೊಳಿಸಿದ್ದ ರಘುರಾಮ ಭಟ್ ಅವರು ಆರಂಭದಲ್ಲಿ ವಿಜಯಾ ಬ್ಯಾಂಕ್ ಅಧಿಕಾರಿಯಾಗಿ ಕೆಲಸಕ್ಕೆ ಸೇರಿದ್ದರು. ಅಲ್ಲಿಂದ ಬಳಿಕ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಉದ್ಯೋಗಕ್ಕೆ ಸೇರಿ ಅದೇ ಬ್ಯಾಂಕ್‌ನಲ್ಲಿ ವಯೋ ನಿವೃತ್ತಿ ಹೊಂದಿದ್ದರು. ಶಾಲಾ ದಿನಗಳಿಂದಲೇ ಇವರು ಕ್ರಿಕೆಟ್‌ನಲ್ಲಿ ಆಸಕ್ತಿ ಹೊಂದಿದ್ದರು. ಎರಡು ಟೆಸ್ಟ್ ಪಂದ್ಯಗಳಲ್ಲಿ ಭಾರತ ತಂಡದಲ್ಲಿ ಆಟವಾಡಿದ್ದರು. ರಣಜಿ ತಂಡದಲ್ಲಿ ಎಡಗೈ ಸ್ಪಿನ್ನರ್ ಆಗಿ ಜನಪ್ರಿಯರಾಗಿದ್ದರು. ಸದ್ಯ ಇವರು ಪತ್ನಿ ಶೋಭಾ, ವಿಮಾನದಲ್ಲಿ ಕ್ಯಾಬಿನ್ ಕ್ರೂ ಆಗಿರುವ ಪುತ್ರ ಶಶಾಂಕ್ ಭಟ್ ಅವರೊಂದಿಗೆ ಬೆಂಗಳೂರುನಲ್ಲಿ ವಾಸ್ತವ್ಯವಿದ್ದಾರೆ. ಪೆರುವಾಯಿಯಲ್ಲಿ ಇವರು ಮನೆ, ಜಮೀನು ಹೊಂದಿದ್ದಾರೆ. ರಘುರಾಮ ಭಟ್ ಅವರ ತಂದೆ ಅಡ್ಡಾಯಿ ಭೀಮ ಭಟ್ ಅವರು ಹಲವು ವರ್ಷಗಳ ಹಿಂದೆ ಪುತ್ತೂರುನಲ್ಲಿ ವಕೀಲರಾಗಿ ಸೇವೆ ಸಲ್ಲಿಸಿದ್ದರು.

LEAVE A REPLY

Please enter your comment!
Please enter your name here