ಕಿನ್ನಿಗೋಳಿ: ಕಳೆದ 4 ದಶಗಳಲ್ಲಿ ವೈದಿಕ, ಪೌರೋಹಿತ್ಯ, ಜ್ಯೋತಿಷ್ಯ, ತಂತ್ರಸ್ಥಾನ, ಬ್ರಹ್ಮವಾಹಕರಾಗಿ ಧಾರ್ಮಿಕ- ಆಧ್ಯಾತ್ಮಿಕ ಕ್ಷೇತ್ರದಲ್ಲಿ ನೀಡಿರುವ ಅವಿಶ್ರಾಂತ ಸೇವೆಯನ್ನು ಸಲ್ಲಿಸಿರುವ ವೇದಮೂರ್ತಿ ಕೊಲಕಾಡಿ ವಾದಿರಾಜ ಉಪಾಧ್ಯಾಯರನ್ನು ಇದೇ ಜುಲೈ 24ರಂದು ಜರಗಲಿರುವ ಕಿನ್ನಿಗೋಳಿ ಯುಗಪುರುಷ ಸಂಸ್ಥಾಪಕ ದಿ.ಕೊ.ಅ.ಉಡುಪರ ಸಂಸ್ಮರಣ ಸಮಾರಂಭದ ಸಂದರ್ಭ ದಿ| ಕಮಲಾಕ್ಷಿ ಉಡುಪರ ಸ್ಮರಣಾರ್ಥ ವೇದವಿದ್ವಾಂಸರ ನೆಲೆಯಲ್ಲಿ ಇವರನ್ನು ಸಂಮಾನಿಸಲಾಗುವುದು ಎಂದು ಯುಗಪುರುಷದ ಪ್ರಧಾನ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪ ತಿಳಿಸಿದ್ದಾರೆ.
ಶ್ರೀಯುತರು ಇರುವೈಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಎಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಸುರತ್ಕಲ್ ಶ್ರೀ ವೀರಭದ್ರ ದೇವಸ್ಥಾನ ಸೇರಿದಂತೆ ಕರಾವಳಿಯ ಅನೇಕ ದೇವಾಲಯಗಳ ಉತ್ಸವಾದಿಗಳಲ್ಲಿ ಬ್ರಹ್ಮವಾಹಕ ಸ್ಥಾನವನ್ನೂ ಸಹ ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ೨೦೦೪ ರಲ್ಲಿ ಶ್ರೀಯುತರ ಪ್ರಧಾನ ಮಾರ್ಗದರ್ಶನದಲ್ಲಿಯೇ ಬಪ್ಪನಾಡಿನ ಪ್ರಸಿದ್ದ ಶ್ರೀ ದುರ್ಗಾಪರಮೇಶ್ವರಿ ದೇವಾಲಯದ ಬ್ರಹ್ಮಕಳಶ ಉತ್ಸವವು ಐತಿಹಾಸಿಕವಾಗಿ ನಡೆದಿದೆ. ಶ್ರೀಯುತರು ಬೆಳವಾಯಿ ಕಾನ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನ, ಹೆಜಮಾಡಿ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನ,ಕರ್ನಿರೆ ವಿಷ್ಣುಮೂರ್ತಿ ದೇವಸ್ಥಾನ ಸೇರಿದಂತೆ ಹಲವು ಧಾರ್ಮಿಕ ಕ್ಷೇತ್ರದಲ್ಲಿ ತಂತ್ರಸ್ಥಾನವನ್ನೂ ಸಹ ನಿರ್ವಹಿಸಿದ್ದಾರೆ.

