ಪುತ್ತೂರು : ಯೋಗವು ಕೇವಲ ದೈಹಿಕ ಆರೋಗ್ಯಕ್ಕೆ ಸೀಮಿತವಲ್ಲ. ಅದು ದೇಹ, ಮನಸ್ಸು ಮತ್ತು ಆತ್ಮದ ಸಮನ್ವಯವನ್ನು ಸಾಧಿಸುವ ಒಂದು ಮಹತ್ತರ ಜೀವನ ಪದ್ಧತಿಯಾಗಿದೆ ಎಂದು ಆರ್ವಿ ಇಂಟರ್ ಗ್ರಾಫಿಕ್ಸ್ ಪುತ್ತೂರು ಸಂಸ್ಥೆಯ ಮಾಲೀಕರು ಹಾಗೂ ಯೋಗ ತರಬೇತುದಾರರಾದ ಜ್ಞಾನೇಶ್ ವಿಶ್ವಕರ್ಮ ನುಡಿದರು.
ಇವರು ವಿವೇಕಾನಂದ ಪದವಿಪೂರ್ವ ಕಾಲೇಜಿನ ವೈದೇಹಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದರು. ಆಧುನಿಕ ಜೀವನ ಶೈಲಿಯಿಂದ ಉಂಟಾಗುತ್ತಿರುವ ಒತ್ತಡ, ಆತಂಕ ಹಾಗೂ ಆರೋಗ್ಯ ಸಮಸ್ಯೆಗಳನ್ನು ನಿವಾರಿಸುವಲ್ಲಿ ಯೋಗದ ಪಾತ್ರ ಅತ್ಯಂತ ಮುಖ್ಯವಾಗಿದೆ.

ನಿಯಮಿತ ಯೋಗಾಭ್ಯಾಸದಿಂದ ವ್ಯಕ್ತಿತ್ವ ವಿಕಸನವಾಗುತ್ತದೆ. ಯೋಗವು ವ್ಯಕ್ತಿಯ ಏಕಾಗ್ರತೆ, ಮಾನಸಿಕ ಸ್ಥಿರತೆ, ದೈಹಿಕ ಕ್ಷಮತೆ ಹಾಗೂ ಆತ್ಮ ಶಿಸ್ತನ್ನು ಬೆಳೆಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ (SPಙSS) ಯ ಯೋಗ ಶಿಕ್ಷಕರಾದ ಸುಮ ಹಾಗೂ ರವೀಂದ್ರ ಇವರು ವಿದ್ಯಾರ್ಥಿಗಳಿಗೆ ಯೋಗ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು..
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ದೇವಿಚರಣ್ ರೈ ಎಮ್. ವಹಿಸಿದ್ದರು. ಉಪನ್ಯಾಸಕ ಹಾಗೂ ಉಪನ್ಯಾಸಕೇತರ ವೃಂದದವರು ಉಪಸ್ಥಿತರಿದ್ದರು. ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ. ಜ್ಯೋತಿ ಸ್ವಾಗತಿಸಿ, ಉಪನ್ಯಾಸಕಿ ದಿವ್ಯಾ ಜಿ. ವಂದಿಸಿ, ನಿರೂಪಿಸಿದರು.

