ನವದೆಹಲಿ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹಾರ್ಮುಜ್ ಜಲಸಂಧಿಯನ್ನು ತೆರೆಯಲು ಅಂತಿಮ ಗಡುವು ನೀಡುತ್ತಿರುವ ಬೆನ್ನಲ್ಲೇ, ಭಾರತದಲ್ಲಿನ ಇರಾನ್ ರಾಯಭಾರಿ ಮೊಹಮ್ಮದ್ ಫತಾಲಿ ಅವರು ಮಹತ್ವದ ಹೇಳಿಕೆ ನೀಡಿದ್ದಾರೆ. “ಹಾರ್ಮುಜ್ ಜಲಸಂಧಿಯು ಕೇವಲ ಇರಾನ್ನ ಶತ್ರುಗಳಿಗೆ ಮಾತ್ರ ಬಂದ್ ಆಗಿದೆಯೇ ಹೊರತು, ಭಾರತದಂತಹ ಮಿತ್ರ ರಾಷ್ಟ್ರಗಳಿಗೆ ಅಲ್ಲ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಇರಾನ್ ವಿರುದ್ಧ ಯುದ್ಧ ಸಾರುವ ಅಥವಾ ಶತ್ರು ದೇಶಗಳಿಗೆ ನೆರವಾಗುವ ಹಡಗುಗಳಿಗೆ ಮಾತ್ರ ಈ ಮಾರ್ಗವನ್ನು ಮುಚ್ಚಲಾಗಿದೆ. ಅಂತರಾಷ್ಟ್ರೀಯ ಜಲಮಾರ್ಗದ ಸುರಕ್ಷತೆಗೆ ಇರಾನ್ ಬದ್ಧವಾಗಿದೆ ಎಂದು ರಾಯಭಾರಿ ತಿಳಿಸಿದ್ದಾರೆ.
ಭಾರತವು ಈ ಭಾಗದ ಪ್ರಮುಖ ಶಕ್ತಿಯಾಗಿದ್ದು, ಭಾರತದ ತೈಲ ಮತ್ತು ವಾಣಿಜ್ಯ ಹಡಗುಗಳ ಸಂಚಾರಕ್ಕೆ ಇರಾನ್ ಸಂಪೂರ್ಣ ಸಹಕಾರ ನೀಡಲಿದೆ. ಭಾರತೀಯ ಹಡಗುಗಳ ಸುರಕ್ಷಿತ ಸಂಚಾರಕ್ಕೆ ವಿಶೇಷ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ಭರವಸೆ ನೀಡಿದ್ದಾರೆ.
ಈ ಭಾಗದಲ್ಲಿ ಅಸ್ಥಿರತೆ ಉಂಟಾಗಲು ಅಮೆರಿಕ ಮತ್ತು ಇಸ್ರೇಲ್ ನಡೆಸುತ್ತಿರುವ ‘ಕಾನೂನುಬಾಹಿರ ದಾಳಿ’ಗಳೇ ಕಾರಣ. ಪ್ರಾದೇಶಿಕ ಭದ್ರತೆಯನ್ನು ಕದಡುತ್ತಿರುವ ಶಕ್ತಿಗಳ ವಿರುದ್ಧ ಇರಾನ್ ಹೋರಾಡುತ್ತಿದೆ ಎಂದು ಫತಾಲಿ ಹೇಳಿದ್ದಾರೆ.

