ಉಡುಪಿ : ಕತಾರ್ನಿಂದ ರ್ಖಜೂರ ಹಾಗೂ ಗೃಹೋಪಯೋಗಿ ವಸ್ತುಗಳನ್ನು ಆಮದು ಮಾಡಿ ಭಾರತದಲ್ಲಿ ಮಾರಾಟ ಮಾಡಿದರೆ ಭಾರಿ ಲಾಭ ಗಳಿಸಬಹುದು ಎಂದು ನಂಬಿಸಿ ಸ್ವಂತ ಮಾವನಿಗೇ ಲಕ್ಷಾಂತರ ರೂ. ವಂಚಿಸಿದ ಟನೆ ನಡೆದಿದೆ.
ಬಡಗುಬೆಟ್ಟು ಗ್ರಾಮದ ಇಫ್ರಾನ್ ಅಜೀಜ್ (50) ವಂಚನೆಗೊಳಗಾದವರು. ಕತಾರ್ನಲ್ಲಿರುವ ಅಳಿಯ ಮೊಹಮ್ಮದ್ ಶರ್ಪದ್ದೀನ್ ಹಾಗೂ ಆತನ ಪಾಲುದಾರರಾದ ಕೇರಳದ ಮಹಮ್ಮದ್ ಶಾಹಿದ್ ಮತ್ತು ತಮಿಳುನಾಡಿನ ಶಮೀಮ್ ಬಾನು ವಂಚನೆ ಎಸಗಿದ ಆರೋಪಿಗಳು.
ಕತಾರ್ನಿಂದ ಬಂದಿದ್ದ ಅಳಿಯ ಶರ್ಪದ್ದೀನ್ ಮಾವ ಇಫ್ರಾನ್ ಅವರಿಗೆ ತಾನು ರ್ಖಜೂರದ ಬಿಸಿನೆಸ್ ಆರಂಭಿಸಿದ್ದು ಉತ್ತಮ ಲಾಭ ಬರುತ್ತಿದೆ ಎಂದು ಹೂಡಿಕೆಗೆ ಒತ್ತಾಯಿಸಿದ್ದನು. ಇದನ್ನು ನಂಬಿದ ಇಫ್ರಾನ್ ಆರೋಪಿಗಳ ಬ್ಯಾಂಕ್ ಖಾತೆಗೆ ಹಂತ ಹಂತವಾಗಿ ಒಟ್ಟು 15,81,000 ರೂ. ವರ್ಗಾವಣೆ ಮಾಡಿದ್ದರು.
ಹಣ ಪಡೆದ ಬಳಿಕ ಆರೋಪಿಗಳು ಯಾವುದೇ ಸರಕುಗಳನ್ನು ಕಳುಹಿಸದೆ, ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ವಂಚಿಸಿದ್ದಾರೆ. ಈ ಬಗ್ಗೆ ಇಫ್ರಾನ್ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು. ನ್ಯಾಯಾಲಯದ ನಿರ್ದೇಶನದಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

