ಬೆಂಗಳೂರು: ಬೆಂಗಳೂರಿನಿಂದ ಭುವನೇಶ್ವರಕ್ಕೆ ತೆರಳುತ್ತಿದ್ದ ಆಕಾಶ ಏರ್ ಸಂಸ್ಥೆಯ ಬೋಯಿಂಗ್ 737 ಮ್ಯಾಕ್ಸ್ ವಿಮಾನದಲ್ಲಿ ಇಂಧನ ಕೊರತೆಯ ಆತಂಕದಿಂದ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ವಿಮಾನದಲ್ಲಿ 194 ಪ್ರಯಾಣಿಕರು ಹಾಗೂ ಸಿಬ್ಬಂದಿ ಪ್ರಯಾಣಿಸುತ್ತಿದ್ದರು.
ಭುವನೇಶ್ವರದಲ್ಲಿ ಹವಾಮಾನ ಹದಗೆಟ್ಟ ಹಿನ್ನೆಲೆ ವಿಮಾನವನ್ನು ಲಕ್ನೋ ಕಡೆಗೆ ತಿರುಗಿಸಲಾಗಿತ್ತು. ಈ ವೇಳೆ ವಿಮಾನದ ಇಂಧನ ಮಟ್ಟ ವೇಗವಾಗಿ ಕುಸಿಯುತ್ತಿರುವುದನ್ನು ಗಮನಿಸಿದ ಪೈಲಟ್ ತಕ್ಷಣವೇ ‘ಪ್ಯಾನ್-ಪ್ಯಾನ್’ ತುರ್ತು ಕರೆ ನೀಡಿ ವಾಯು ಸಂಚಾರ ನಿಯಂತ್ರಣ ಕೇಂದ್ರಕ್ಕೆ ಮಾಹಿತಿ ನೀಡಿದ್ದಾರೆ.
ಘಟನೆಯ ಮಾಹಿತಿ ಸಿಗುತ್ತಿದ್ದಂತೆಯೇ ಲಕ್ನೋ ವಿಮಾನ ನಿಲ್ದಾಣದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿ ರನ್ವೇ ಖಾಲಿ ಮಾಡಲಾಯಿತು. ಅಗ್ನಿಶಾಮಕ ದಳ, ವೈದ್ಯಕೀಯ ತಂಡ ಹಾಗೂ ಭದ್ರತಾ ಸಿಬ್ಬಂದಿಯನ್ನು ಕೂಡಲೇ ಸಜ್ಜುಗೊಳಿಸಲಾಗಿತ್ತು.
ಎಲ್ಲ ಆತಂಕಗಳ ನಡುವೆಯೂ ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆಗಿದ್ದು, ಯಾವುದೇ ಪ್ರಾಣಹಾನಿ ಅಥವಾ ಅವಘಡ ಸಂಭವಿಸಿಲ್ಲ. ಬಳಿಕ ವಿಮಾನಕ್ಕೆ ಮರು ಇಂಧನ ತುಂಬಿಸಿ ಮುಂದಿನ ಪ್ರಯಾಣಕ್ಕೆ ಸಿದ್ಧಪಡಿಸಲಾಯಿತು.

