ಮೂಡುಬಿದಿರೆ : ಕಾರ್ಕಳ – ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿಯ ಬೆಳುವಾಯಿ ಕಾಂತಾವರ ಕ್ರಾಸ್ ಸಮೀಪ ಖಾಸಗಿ ಬಸ್ ಹಾಗೂ ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಅಪಘಾತದ ರಭಸಕ್ಕೆ ಎರಡೂ ವಾಹನಗಳು ತೀವ್ರವಾಗಿ ಜಖಂಗೊಂಡಿವೆ.
ಅಪಘಾತದ ಪರಿಣಾಮ ಕೆಲಕಾಲ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿದ್ದು, ವಾಹನ ಸವಾರರು ಪರದಾಡುವಂತಾಯಿತು. ಕಾಂತಾವರ ಕ್ರಾಸ್ ಬಳಿಯ ಯು-ಟರ್ನ್ ಅನ್ನು ಬುಧವಾರದಿಂದ ಏಕಾಏಕಿ ಬಂದ್ ಮಾಡಿರುವುದು ಈ ಭಾಗದಲ್ಲಿ ಭಾರಿ ಸಂಚಾರ ಗೊಂದಲಕ್ಕೆ ಕಾರಣವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಕಾಂತಾವರ ಕಡೆಯಿಂದ ಬರುವ ವಾಹನಗಳು ಮೂಡುಬಿದಿರೆ ಕಡೆಗೆ ತೆರಳಲು ಬಳಸುತ್ತಿದ್ದ ಕ್ರಾಸ್ ರಸ್ತೆಯನ್ನು ಬಂದ್ ಮಾಡಿರುವುದರಿಂದ ವಾಹನ ಸವಾರರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಬೆಳುವಾಯಿ ಪೇಟೆಗೆ ತೆರಳಲು ಚಿಲಿಂಬಿವರೆಗೆ ಹೋಗಿ ಅಲ್ಲಿಂದ ವಾಹನ ತಿರುಗಿಸಿಕೊಂಡು ಬರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಯಾವುದೇ ಪೂರ್ವ ಸೂಚನೆ ಅಥವಾ ಸೂಕ್ತ ವ್ಯವಸ್ಥೆಯಿಲ್ಲದೆ ರಸ್ತೆ ಬಂದ್ ಮಾಡಿರುವುದರಿಂದ ಎಲ್ಲೆಂದರಲ್ಲಿ ವಾಹನಗಳು ತಿರುಗಾಡುತ್ತಿದ್ದು, ಅಪಘಾತಗಳು ಸಂಭವಿಸುತ್ತಿವೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂಚಾರ ವ್ಯವಸ್ಥೆಯನ್ನು ಸರಿಪಡಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವಂತೆ ಸ್ಥಳೀಯರು ಸಂಬಂಧಪಟ್ಟ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.

