ಯಕ್ಷಗಾನ ಕಲಾರಂಗದ 97ನೆಯ ಮನೆ ಹಸ್ತಾಂತರ

0
10

ಅಮಾಸೆಬೈಲ್‌ : ವಿದ್ಯಾಪೋಷಕ್ ಯಕ್ಷಗಾನ ಕಲಾರಂಗದ ವತಿಯಿಂದ ಅಮಾಸೆಬೈಲಿನ ಸರಕಾರಿ ಪ್ರೌಢಶಾಲೆಯ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಸಾನ್ವಿತ (ಶೋಭಾ ಮತ್ತು ಸುರೇಶ್ ಕೊಠಾರಿ ಇವರ ಪುತ್ರಿ) ಇವಳಿಗೆ ಕುಂದಾಪುರ ತಾಲೂಕಿನ ಅಮಾಸೆಬೈಲಿನಲ್ಲಿ ಉಡುಪಿ ಅಂಬಲಪಾಡಿಯ ಮೀರಾ ರಾಮಮೂರ್ತಿ ಭಟ್ಟ ಮತ್ತು ಮಕ್ಕಳು ರಾಮಮೂರ್ತಿ ಭಟ್ಟ ಇವರ ಸ್ಮರಣೆಯಲ್ಲಿ ನಿರ್ಮಿಸಿದ ನೂತನ ಮನೆ ‘ರಾಮಮೂರ್ತಿ’ ಉದ್ಘಾಟನೆಗೊಂಡಿತು.

ಜ್ಯೋತಿ ಬೆಳಗಿಸಿದ ಮೀರಾ ರಾಮಮೂರ್ತಿ ಭಟ್ಟರು ಮಾತನಾಡಿ ‘ಕೆರೆಯ ನೀರನು ಕೆರೆಗೆ ಚೆಲ್ಲಿ’ ಎಂಬ ದಾಸರ ಕೀರ್ತನೆಯನ್ನು ಉದ್ಧರಿಸಿ ನಾನು ಕೊಟ್ಟಿದ್ದಲ್ಲ, ಭಗವಂತ ನನಗೆ ನೀಡಿದ್ದರಲ್ಲಿ ಒಂದಶವನ್ನು ದಾನಮಾಡಿದ್ದೇನಷ್ಟೆ. ಯಕ್ಷಗಾನ ಕಲಾರಂಗದವರು ಎಲ್ಲ ಕಷ್ಟ ತೆಗೆದುಕೊಂಡು ಬಡ ಹುಡುಗಿಯ ಕುಟುಂಬಕ್ಕೆ ಸುಂದರ ಮನೆ ನಿರ್ಮಿಸಿ ನನಗೊಂದು ಅವಕಾಶ ಕಲ್ಪಿಸಿದರು. ಅವರಿಗೆ ಕೃತಜ್ಞಳಾಗಿದ್ದೇನೆ. ಸಾನ್ವಿತಾಳಿಗೆ ಶುಭವಾಗಲಿ ಎಂದರು. ಅಧ್ಯಕ್ಷತೆ ವಹಿಸಿದ್ದ ಶಾಸಕ ಕಿರಣ್ ಕುಮಾರ್ ಕೊಡ್ಗಿಯವರು ಕಲಾರಂಗದವರು ಯಾವ ಆಡಂಬರ, ದುಂದು ವೆಚ್ಚ ಮಾಡದೆ, ಪ್ರಚಾರ ಅಪೇಕ್ಷಿಸದೆ ಮಾಡುತ್ತಿರುವ ಸಮಾಜಪರ ಕೆಲಸಗಳು ನನಗೆ ಬಹಳ ಇಷ್ಟವಾಗಿವೆ. ಅವರ ಅಭಿಮಾನಿಯಾಗಿ ಬಂದು ಆನಂದ ಅನುಭವಿಸುತ್ತಿದ್ದೇನೆ ಎಂದರು.

ರಾಮ ಮೂರ್ತಿಯವರ ಮಕ್ಕಳಾದ ಮನು ಭಾರದ್ವಾಜ್, ಡಾ ಪೂರ್ಣಶ್ರೀ ಮಾತನಾಡಿ ಈ ಕಾರ್ಯಕ್ರಮಕ್ಕೆ ಬಂದಿದ್ದರಿಂದ ಕಲಾರಂಗದರ ಸಮಾಜಪರ ಕಳಕಳಿಯ ದರ್ಶನವಾಯಿತು. ಈ ಸಂಸ್ಥೆಯೊಂದಿಗೆ ನಾವು ಸದಾ ಇರುತ್ತೇವೆ ಎಂದು ಹೇಳಿದರು.

ಕೋಟೇಶ್ವರ ಗೀತಾ ಎಚ್. ಎಸ್. ಎನ್. ಫೌಂಡೇಶನ್ ಅಧ್ಯಕ್ಷ ಎ. ಶಂಕರ ಐತಾಳ್, ಶಿಕ್ಷಣ ಪ್ರೇಮಿ ಸಖಾರಾಮ್ ಸೋಮಯಾಜಿ, ಸಹನಾ ಭಾರದ್ವಾಜ್, ಮೂಕಾಂಬಿಕಾ ವಾರಂಬಳ್ಳಿ ಅಭ್ಯಾಗತರಾಗಿ ಭಾಗವಹಿಸಿದ್ದರು. ವೇದಿಕೆಯಲ್ಲಿ ನಿರಂಜನ ಬಲ್ಲಾಳ್,ಲಲಿತಾ ಬಲ್ಲಾಳ್,ಯಶೋದಾ ನಾಗೇಶನ್, ಶ್ಯಾಮಲಾ ಪ್ರಸಾದ್, ದೇವಕಿ ಉಪಸ್ಥಿತರಿದ್ದರು. ಯಕ್ಷಗಾನ ಕಲಾರಂಗದ ಪ್ರೊ. ಕೆ. ಸದಾಶಿವ ರಾವ್, ವಿದ್ಯಾಪ್ರಸಾದ್, ಯು.ವಿಶ್ವನಾಥ ಶೆಣೈ, ವಿಜಯಕುಮಾರ್ ಮುದ್ರಾಡಿ, ಭುವನಪ್ರಸಾದ್ ಹೆಗ್ಡೆ, ಅನಂತರಾಜ್ ಉಪಾಧ್ಯ,ಡಾ. ರಾಜೇಶ್ ನಾವುಡ, ಹಿರಿಯಣ್ಣ ಕಿದಿಯೂರು, ಕೆ. ಅಜಿತ್ ಕುಮಾರ್,ಡಾ. ಪ್ರತಿಮಾ ಜೆ. ಆಚಾರ್ಯ,ಜಯರಾಮ ಪಡಿಯಾರ್,ವಿನೋದಾ ಎಂ. ಹಾಗೂ ಡಾ. ಶ್ರೀಕಾಂತ್ ಸಿದ್ಧಾಪುರ,ವಿಶ್ವನಾಥ ಶೆಟ್ಟಿ,ಕೃಷ್ಣ ಪೂಜಾರಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಸ್ತಾವನೆಯ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here