ಉಡುಪಿ : ಬ್ರಹ್ಮಾವರ ಯಡ್ತಾಡಿ ಗ್ರಾಮದ ಸೈಬರ್ಕಟ್ಟೆಯಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರ ಆರೈಕೆಗೆಂದು ಬಂದಿದ್ದ ಹೋಮ್ ನರ್ಸ್ ರೋಗಿಯ ಮೊಬೈಲ್ ಬಳಸಿ ಯುಪಿಐ ಮೂಲಕ 1.60 ಲಕ್ಷ ರೂ. ಹಣವನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡು ವಂಚಿಸಿದ ಟನೆ ನಡೆದಿದೆ.
ಯಡ್ತಾಡಿ ಗ್ರಾಮದ ಸೈಬರ್ಕಟ್ಟೆ ನಿವಾಸಿ ಭಾಗ್ಯಲಕ್ಷ್ಮೀ ಎಂಬುವರ ಪತಿ ಶ್ರೀನಿವಾಸ ಪೂಜಾರಿ ಅವರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರ ಆರೈಕೆಗಾಗಿ ಉಡುಪಿಯಲ್ಲಿರುವ ‘ವಿ ಕೇರ್ ಹೋಮ್ ನರ್ಸ್ ಸಂಸ್ಥೆಯನ್ನು ಸಂಪರ್ಕಿಸಿ, 28,000 ರೂ. ಮುಂಗಡ ಹಣ ಪಾವತಿಸಿದ್ದರು. ಸಂಸ್ಥೆಯವರು ಜೂನ್ 25ರಂದು ಸಚಿನ್ ಎಂಬ ಹೋಮ್ ಬ್ರದರ್ನನ್ನು ಕಳುಹಿಸಿಕೊಟ್ಟಿದ್ದರು. ಕೆಲ ದಿನಗಳ ಕಾಲ ಕೆಲಸದಲ್ಲಿದ್ದ ಸಚಿನ್ ಜುಲೈ 7ರಂದು ತುರ್ತು ಕೆಲಸವಿದೆ ಎಂದು ಹೇಳಿ ತನ್ನ ಊರಿಗೆ ತೆರಳಿದ್ದ.
ವಂಚನೆ ಬೆಳಕಿಗೆ ಬಂದಿದ್ದು ಹೇಗೆ?
ಜುಲೈ 28ರಂದು ಶ್ರೀನಿವಾಸ್ ಮಗಳು ತಮ್ಮ ತಂದೆಯ ಬ್ಯಾಂಕ್ ಖಾತೆಯನ್ನು ಪರಿಶೀಲಿಸಿದಾಗ ಅಸಲಿ ವಿಷಯ ಹೊರಬಿದ್ದಿದೆ. ಸಚಿನ್ ಜೂನ್ 25 ರಿಂದ ಜುಲೈ 7 ರ ಅವಧಿಯಲ್ಲಿ ಶ್ರೀನಿವಾಸ ಪೂಜಾರಿ ಅವರ ಗಮನಕ್ಕೆ ಬಾರದಂತೆ ಅವರ ‘ಬ್ಯಾಂಕ್ ಆಫ್ ಬರೋಡಾ’ ಖಾತೆಯಿಂದ ಮೊಬೈಲ್ ಯುಪಿಐ ಮೂಲಕ ಹಂತ-ಹಂತವಾಗಿ ಒಟ್ಟು 1,60,500 ರೂ. ಹಣವನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡಿರುವುದು ಪತ್ತೆಯಾಗಿದೆ.
ವಿ ಕೇರ್ ಹೋಮ್ ನರ್ಸ್ ಸಂಸ್ಥೆಯನ್ನು ವಿಚಾರಿಸಿದಾಗ ಈ ವಿಷಯಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ಸಂಸ್ಥೆಯವರು ಹಾರಿಕೆ ಉತ್ತರ ನೀಡಿದ್ದಾರೆನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಆರೋಪಿ ಸಚಿನ್ ಹಾಗೂ ಆತನಿಗೆ ಸಾಥ್ ನೀಡಿದ ಸಂಸ್ಥೆಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಭಾಗ್ಯಲಕ್ಷ್ಮೀ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

