ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ಬೆಟ್ಟಂಪಾಡಿ ‘ಗ್ರಾಮ ಸಾಹಿತ್ಯ ಸಂಭ್ರಮ ಸರಣಿ ಕಾರ್ಯಕ್ರಮ -21’

0
12

ಪುತ್ತೂರು:ಕನ್ನಡ ಸಾಹಿತ್ಯವನ್ನು ಗ್ರಾಮೀಣ ಪ್ರದೇಶಗಳಿಗೆ ಕೊಂಡೊಯ್ಯುವ ಹಾಗೂ ಗ್ರಾಮೀಣ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ಉದ್ದೇಶದಿಂದ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಪುತ್ತೂರು ತಾಲೂಕು ಘಟಕದ ವತಿಯಿಂದ ‘ಸಾಹಿತ್ಯದ ನಡಿಗೆ ಗ್ರಾಮದ ಕಡೆಗೆ’ ಅಭಿಯಾನದಡಿ ಕಳೆದ ಐದು ವರ್ಷಗಳಿಂದ ನಡೆಯುತ್ತಿರುವ ‘ಗ್ರಾಮ ಸಾಹಿತ್ಯ ಸಂಭ್ರಮ’ ಇದೀಗ ತನ್ನ 21ನೇ ಸರಣಿಗೆ ತಲುಪಿದ್ದು, 31 ಗ್ರಾಮಗಳು ಪೂರ್ತಿ ಅಗಲಿದೆ.

ಪುತ್ತೂರು ತಾಲೂಕಿನ 22 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ 32 ಗ್ರಾಮಗಳನ್ನು ಒಳಗೊಂಡು ಗ್ರಾಮ ಸಾಹಿತ್ಯ ಸಮ್ಮೇಳನದ ಸ್ವರೂಪದಲ್ಲಿ ಈ ಅಭಿಯಾನವನ್ನು ನಡೆಸಲಾಗುತ್ತಿದ್ದು, ಸೆಪ್ಟೆಂಬರ್ 19ರಂದು ಬೆಟ್ಟಂಪಾಡಿ ಗ್ರಾಮದಲ್ಲಿ 21ನೇ ಸರಣಿ ನಡೆಯಲಿದೆ. ಬಳಿಕ ಅಕ್ಟೋಬರ್ 2ರಂದು ಬಲ್ನಾಡು ಗ್ರಾಮದಲ್ಲಿ ಕಾರ್ಯಕ್ರಮ ನಡೆಯುವುದರೊಂದಿಗೆ ಪುತ್ತೂರು ತಾಲೂಕಿನ 32 ಗ್ರಾಮಗಳನ್ನೂ ಒಳಗೊಂಡ ಈ ಐದು ವರ್ಷಗಳ ಗ್ರಾಮ ಸಾಹಿತ್ಯ ಸಂಭ್ರಮದ ಅಭಿಯಾನ ಪೂರ್ಣಗೊಳ್ಳಲಿದೆ.

ಈ ವಿಶಿಷ್ಟ ಅಭಿಯಾನವು ಹೊರನಾಡ ಕನ್ನಡಿಗ ಮಿತ್ರಂಪಾಡಿ ಜಯರಾಮ ರೈ, ಅಬುದಾಬಿ ಅವರ ಮಹಾಪೋಷಕತ್ವದಲ್ಲಿ, ನಾರಾಯಣ ಕುಂಬ್ರ ಅವರ ಸಂಚಾಲಕತ್ವದಲ್ಲಿ ಹಾಗೂ ಸಾಹಿತ್ಯ ಸೇವಕರ ಸಹಕಾರದೊಂದಿಗೆ ಅತ್ಯಂತ ಯಶಸ್ವಿಯಾಗಿ ಕಾರ್ಯರೂಪಕ್ಕೆ ಬರುತ್ತಿದೆ.

ಉದ್ಘಾಟನಾ ಸಮಾರಂಭದಲ್ಲಿ ಗಣ್ಯರ ಉಪಸ್ಥಿತಿ

ಈ ಸರಣಿ ಗ್ರಾಮ ಸಾಹಿತ್ಯ ಸಂಭ್ರಮದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತು, ಪುತ್ತೂರು ತಾಲೂಕು ಘಟಕದ ಅಧ್ಯಕ್ಷ ಶ್ರೀ ಪುತ್ತೂರು ಉಮೇಶ್ ನಾಯಕ್ ವಹಿಸಲಿದ್ದಾರೆ.ಸ. ಪ್ರ. ದ. ಕಾಲೇಜು ಬೆಟ್ಟಂಪಾಡಿ ಇಲ್ಲಿನ ಅಂತಿಮ ಬಿ ಎಸ್ಸಿ ವಿಭಾಗದ ಕು.ವೇದಾವತಿ ಬಿ ಸರ್ವಾಧ್ಯಕ್ಷತೆಯನ್ನು ವಹಿಸಲಿದ್ದು,ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆ ಬೆಟ್ಟಂಪಾಡಿ ಇಲ್ಲಿನ 9ನೇತರಗತಿ ವಿದ್ಯಾರ್ಥಿನಿ ಕು. ಪ್ರನ್ವಿ ಪ್ರಸಾದ್ ಸಮಾರೋಪ ಭಾಷಣ ಮಾಡಲಿದ್ದಾರೆ. ಕಾರ್ಯಕ್ರಮವನ್ನು ಗ್ರಾಮ ಪಂಚಾಯತ್ ಬೆಟ್ಟಂಪಾಡಿಯ ಆಡಳಿತಾಧಿಕಾರಿ ಡಾ. ಧರ್ಮಪಾಲ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀ ಸುರೇಂದ್ರ ರೈ, ಗ್ರಾಮ ಪಂಚಾಯತ್ ಬೆಟ್ಟಂಪಾಡಿಯ ಮಾಜಿ ಅಧ್ಯಕ್ಷೆ ಶ್ರೀಮತಿ ವಿದ್ಯಾಶ್ರೀ, ಪ್ರಿಯದರ್ಶಿನಿ ಪ್ರೌಢಶಾಲೆ ಬೆಟ್ಟಂಪಾಡಿಯ ಸಂಚಾಲಕ ಡಾ. ಸತೀಶ್ ರಾವ್ ಹಾಗೂ ಗ್ರಾಮ ಪಂಚಾಯತ್ ಬೆಟ್ಟಂಪಾಡಿಯ ಮಾಜಿ ಉಪಾಧ್ಯಕ್ಷ ಶ್ರೀ ಮಹೇಶ್ ಕೆ. ಭಾಗವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಗೌರವ ಉಪಸ್ಥಿತರಾಗಿ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕೋಶಾಧ್ಯಕ್ಷರಾದ ಶ್ರೀ ಬಿ. ಐತಪ್ಪ ನಾಯ್ಕ್, ಸ.ಪ.ಪೂ. ಕಾಲೇಜು ಬೆಟ್ಟಂಪಾಡಿಯ ಪ್ರಾಂಶುಪಾಲ ಡಾ. ಅಬ್ದುಲ್ ರಜಾಕ್ ಕೆ. ಹಾಗೂ ಚಿಗುರೆಲೆ ಸಾಹಿತ್ಯ ಬಳಗ ಪುತ್ತೂರಿನ ಅಧ್ಯಕ್ಷ ಶ್ರೀ ಚಂದ್ರಮೌಳಿ ಕಡಂದೇಲು, ಸ. ಪ್ರ, ದ. ಕಾಲೇಜು ಬೆಟ್ಟಂಪಾಡಿ ಇಲ್ಲಿನ ಕಾರ್ಯಾಧ್ಯಕ್ಷರಾದ ಶ್ರೀ. ನವೀನ್ ರೈ ಚೆಲ್ಯಡ್ಕ ಉಪಸ್ಥಿತರಿರುವರು. ಸ.ಪ್ರ.ದ. ಕಾಲೇಜು ಬೆಟ್ಟಂಪಾಡಿಯ ಕನ್ನಡ ಪ್ರಾಧ್ಯಾಪಕ ಡಾ. ಸುಬ್ರಹ್ಮಣ್ಯ ಭಟ್ ಅವರು “ಕನ್ನಡ ಸಾಹಿತ್ಯ ಬೆಳೆಸುವಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪಾತ್ರ” ವಿಷಯದ ಕುರಿತು ಉಪನ್ಯಾಸ ನೀಡಲಿದ್ದಾರೆ.ಡಾ ಹಾಜಿ ಅಬೂಬಕ್ಕರ್ ಎಸ್ ಆರ್ಲ ಪದವು ಅವರು ಅಭಿನಂದನಾ ನುಡಿಗಳನ್ನು ಆಡಲಿದ್ದಾರೆ. ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿ ಇಲ್ಲಿನ ಪ್ರಾಂಶುಪಾಲರಾದ ಶ್ರೀ ದಾಮೋದರ ಕಣಜಾಲು ಅವರು ಅತಿಥಿಗಳನ್ನು ಸ್ವಾಗತಿಸಲಿದ್ದಾರೆ.

ವಿದ್ಯಾರ್ಥಿಗಳೇ ಕೇಂದ್ರಬಿಂದು

ಗ್ರಾಮ ಸಾಹಿತ್ಯ ಸಂಭ್ರಮದ ಪ್ರಮುಖ ವಿಶೇಷತೆಯೆಂದರೆ ವಿದ್ಯಾರ್ಥಿಗಳೇ ಇದರ ಕೇಂದ್ರಬಿಂದುಗಳು. ಕವಿಗೋಷ್ಠಿ, ಕಥಾಗೋಷ್ಠಿ, ಪ್ರವಾಸಕಥನ, ‘ನನ್ನ ಆಪ್ತಮಿತ್ರ’, ‘ನನ್ನ ನೆಚ್ಚಿನ ಶಿಕ್ಷಕಿ/ಶಿಕ್ಷಕ’ ಸೇರಿದಂತೆ ವಿವಿಧ ಸಾಹಿತ್ಯಿಕ ವಿಭಾಗಗಳ ಮೂಲಕ ವಿದ್ಯಾರ್ಥಿಗಳ ಸೃಜನಶೀಲತೆ ಮತ್ತು ಪ್ರತಿಭೆಗೆ ಅವಕಾಶ ಕಲ್ಪಿಸುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ.

ಆದರೆ, ಇತ್ತೀಚೆಗೆ ಶಿಕ್ಷಣ ಇಲಾಖೆಯಿಂದ ಹೊರಡಿಸಲಾಗಿರುವ ಸುತ್ತೋಲೆಯ ಹಿನ್ನೆಲೆಯಲ್ಲಿ ಬೆಟ್ಟಂಪಾಡಿ ಹಾಗೂ ಬಲ್ನಾಡು ಗ್ರಾಮದಲ್ಲಿ ಕಾರ್ಯಕ್ರಮ ನಡೆಸಲು ಹಿನ್ನಡೆಯಾಗಿದ್ದು, ಕಾರ್ಯಕ್ರಮದ ಸ್ವರೂಪದಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ವಿದ್ಯಾರ್ಥಿಗಳನ್ನು ಶಾಲೆಯಿಂದ ಹೊರಗೆ ಕರೆತಂದು ಸಾಮೂಹಿಕವಾಗಿ ಕಾರ್ಯಕ್ರಮ ನಡೆಸುವ ಬದಲು, ಈ ಎಲ್ಲಾ ಸಾಹಿತ್ಯಿಕ ಗೋಷ್ಠಿಗಳು ಸಂಬಂಧಪಟ್ಟ ಶಾಲೆಗಳಲ್ಲಿಯೇ ಶಾಲಾ ಮಟ್ಟದಲ್ಲಿ ನಡೆಸಿದ್ದು, ಮನೆಯಲ್ಲೇ ಬರೆದು ತರಲು ಅವಕಾಶ ನೀಡಿದ್ದು, ಬೆಟ್ಟಂಪಾಡಿ ಗ್ರಾಮದ 11 ಶಾಲಾ ಕಾಲೇಜಿನ ಸುಮಾರು 200 ವಿದ್ಯಾರ್ಥಿಗಳು ವಿವಿಧ ಪ್ರಕಾರದ ಗೋಷ್ಠಿಗಳಲ್ಲಿ ಭಾಗಿಯಾಗಿದ್ದು, ಭಾಗವಹಿಸುವ ಎಲ್ಲ ವಿದ್ಯಾರ್ಥಿಗಳಿಗೂ ಅವರವರ ಶಾಲೆಗಳಲ್ಲಿಯೇ ಪ್ರಮಾಣ ಪತ್ರ ಹಾಗೂ ಪುಸ್ತಕ ಬಹುಮಾನ ನೀಡಲಾಗುವುದು. ಈ ಮೂಲಕ ವಿದ್ಯಾರ್ಥಿಗಳ ಸಾಹಿತ್ಯಾಸಕ್ತಿಯನ್ನು ಪ್ರೋತ್ಸಾಹಿಸುವ ಕಾರ್ಯ ನಿರಂತರವಾಗಿ ಮುಂದುವರಿಯಲಿದೆ.

ಗ್ರಾಮ ಸಾಧಕರಿಗೆ ಗೌರವ

ಗ್ರಾಮ ಸಾಹಿತ್ಯ ಸಂಭ್ರಮದ ಮತ್ತೊಂದು ಪ್ರಮುಖ ಉದ್ದೇಶ ಆಯಾ ಗ್ರಾಮದ ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ ಗೌರವಿಸುವುದಾಗಿದೆ. ಬೆಟ್ಟಂಪಾಡಿ ಕಾರ್ಯಕ್ರಮದಲ್ಲಿ ಸಾಹಿತ್ಯ, ಪತ್ರಿಕಾ ಮಾಧ್ಯಮ, ಜನಪದ, ಇತಿಹಾಸ ಅಧ್ಯಯನ ಮತ್ತು ಸಂಶೋಧನೆ, ನಾಟಿ ವೈದ್ಯಕೀಯ, ಶಿಕ್ಷಣ, ಕೃಷಿ, ದಿವ್ಯಾಂಗರ ಸೇವೆ, ವೈದ್ಯಕೀಯ, ಯಕ್ಷಗಾನ, ಸಹಕಾರ ಮತ್ತು ಶಿಕ್ಷಣ, ಸಮಾಜಸೇವೆ, ಚಿತ್ರಕಲೆ, ವಂಶಪಾರಂಪರಿಕ ಜ್ಯೋತಿಷ್ಯ ಮತ್ತು ಪೌರೋಹಿತ್ಯ ಹಾಗೂ ಕ್ರೀಡಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ 16 ಗ್ರಾಮ ಸಾಧಕರನ್ನು ಅಭಿನಂದಿಸಲಾಗುತ್ತಿದೆ.

  1. ಶ್ರೀ ಮಂಜುಳಗಿರಿ ವೆಂಕಟರಮಣ ಭಟ್ – ಸಾಹಿತ್ಯ
  2. ಶ್ರೀ ಉಮೇಶ್ ಗೌಡ ಮಿತ್ತಡ್ಕ – ಪತ್ರಿಕಾ ಮಾಧ್ಯಮ
  3. ಶ್ರೀ ಚೋಮ ಬೆಟ್ಟಂಪಾಡಿ – ಜನಪದ
  4. ಡಾ. ಪ್ರಮೋದ್ ಕುಮಾರ್ ಎಂ.ಜಿ. – ಇತಿಹಾಸ ಅಧ್ಯಯನ ಮತ್ತು ಸಂಶೋಧನೆ
  5. ಶ್ರೀಮತಿ ಕೈಜಮ್ಮ ಕೋನಡ್ಕ – ನಾಟಿ ವೈದ್ಯಕೀಯ
  6. ಶ್ರೀ ಯು. ದೇವಪ್ಪ ನಾಯ್ಕ ಉಪ್ಪಳಿಗೆ – ಶಿಕ್ಷಣ
  7. ಶ್ರೀಮತಿ ಅನಿತಾ ಕೂವೆಂಜ – ಕೃಷಿ
  8. ಶ್ರೀ ಸುಬ್ಬಣ್ಣ ಗೌಡ ಪಾರ – ಕೃಷಿ
  9. ಶ್ರೀಮತಿ ಶಶಿಕಲಾ – ದಿವ್ಯಾಂಗರ ಸೇವೆ
  10. ಡಾ. ಶ್ರೀಕೃಷ್ಣ ಭಟ್ – ವೈದ್ಯಕೀಯ
  11. ಶ್ರೀ ಸಂಜೀವ ರೈ ಅರೆಂಬ್ಯ – ಯಕ್ಷಗಾನ
  12. ಶ್ರೀ ಕೆ.ಎಸ್. ರಂಗನಾಥ ರೈ ಗುತ್ತು – ಸಹಕಾರ ಮತ್ತು ಶಿಕ್ಷಣ
  13. ಶ್ರೀ ಮೊಯಿದಿನ್ ಕುಂಞಿ – ಸಮಾಜ ಸೇವೆ
  14. ಶ್ರೀ ಐ. ಗೋಪಾಲಕೃಷ್ಣ ರಾವ್ – ಚಿತ್ರಕಲೆ
  15. ಶ್ರೀ ದಿನೇಶ್ ಮರಡಿತ್ತಾಯ ಗುಮ್ಮಟೆಗದ್ದೆ – ವಂಶಪಾರಂಪರಿಕ ಜ್ಯೋತಿಷ್ಯ ಮತ್ತು ಪೌರೋಹಿತ್ಯ
  16. ಶ್ರೀ ದಯಾನಂದ ರೈ ಕೋರ್ಮಂಡ – ಕ್ರೀಡಾ ಕ್ಷೇತ್ರ

ಇವರೊಂದಿಗೆ ಶ್ರೀ ಶಶಿಕುಮಾರ್ ರೈ ಬಾಲ್ಯೊಟ್ಟು, ನಿರ್ದೇಶಕರು, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಬೆಂಗಳೂರು, ಅವರನ್ನು ‘ವಿಶೇಷ ಸಾಧಕ ಪುರಸ್ಕಾರ’ ನೀಡಿ ಗೌರವಿಸಲಾಗುತ್ತದೆ.

ಕಡಿಮೆ ವೆಚ್ಚದಲ್ಲಿ, ಪರಿಣಾಮಕಾರಿ ಸಾಹಿತ್ಯ ಅಭಿಯಾನ

ಯಾವುದೇ ಅದ್ಧೂರಿ ವೆಚ್ಚಕ್ಕೆ ಆದ್ಯತೆ ನೀಡದೆ, ಅತ್ಯಂತ ಕಡಿಮೆ ಖರ್ಚಿನಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಈ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ. ಗ್ರಾಮಸ್ಥರು, ಶಿಕ್ಷಕರು, ವಿದ್ಯಾರ್ಥಿಗಳು, ಸಾಹಿತ್ಯಾಸಕ್ತರು, ಸ್ಥಳೀಯ ಸಂಸ್ಥೆಗಳು ಹಾಗೂ ಸಾಹಿತ್ಯ ಸೇವಕರ ಸಹಕಾರದಿಂದ ಕಾರ್ಯಕ್ರಮಗಳು ರೂಪುಗೊಳ್ಳುತ್ತಿವೆ.

ಒಂದು ತಾಲೂಕು ವ್ಯಾಪ್ತಿಯ 22 ಗ್ರಾಮ ಪಂಚಾಯಿತಿಗಳ 32 ಗ್ರಾಮಗಳನ್ನು ಒಳಗೊಂಡು, ಐದು ವರ್ಷಗಳ ಕಾಲ ನಿರಂತರವಾಗಿ ಗ್ರಾಮ ಸಾಹಿತ್ಯ ಸಮ್ಮೇಳನದ ಸ್ವರೂಪದಲ್ಲಿ ಕಾರ್ಯಕ್ರಮಗಳನ್ನು ನಡೆಸಿರುವುದು ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಹೆಗ್ಗಳಿಕೆಯಾಗಿದೆ. ಕರ್ನಾಟಕ ರಾಜ್ಯದಲ್ಲಿಯೇ ಈ ರೀತಿಯ ಪ್ರಯತ್ನ ಬಹುಶಃ ಪ್ರಪ್ರಥಮ ಎನ್ನಬಹುದಾದ ವಿಶಿಷ್ಟ ಪ್ರಯತ್ನ ಇದಾಗಿದೆ.

ಸೆಪ್ಟೆಂಬರ್ 19ರಂದು ಬೆಟ್ಟಂಪಾಡಿ ಹಾಗೂ ಅಕ್ಟೋಬರ್ 2ರಂದು ಬಲ್ನಾಡು ಕಾರ್ಯಕ್ರಮಗಳೊಂದಿಗೆ ಪುತ್ತೂರು ತಾಲೂಕಿನ 32 ಗ್ರಾಮಗಳಲ್ಲೂ ‘ಗ್ರಾಮ ಸಾಹಿತ್ಯ ಸಂಭ್ರಮ’ವನ್ನು ತಲುಪಿಸಿದ ಹೆಗ್ಗಳಿಕೆ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿಗೆ ಸಲ್ಲಲಿದೆ.

“ಸಾಹಿತ್ಯದ ನಡಿಗೆ ಗ್ರಾಮದ ಕಡೆಗೆ” — ಗ್ರಾಮದ ಪ್ರತಿಭೆಗಳಿಗೆ ವೇದಿಕೆ, ವಿದ್ಯಾರ್ಥಿಗಳಿಗೆ ಸಾಹಿತ್ಯದ ಪ್ರೇರಣೆ, ಸಾಧಕರಿಗೆ ಗೌರವ ಎಂಬ ಆಶಯದೊಂದಿಗೆ ಈ ಅಭಿಯಾನ ಮುಂದುವರಿಯುತ್ತಿದೆ.