ಉಡುಪಿ : ಡಿಸೆಂಬರ್ 02 ರಿಂದ 18, 2025ರ ವರೆಗೆ ಉಡುಪಿ ಆಸುಪಾಸಿನ 25 ಪ್ರೌಢಶಾಲೆಗಳ ವಿದ್ಯಾರ್ಥಿಗಳಿಂದ ಪ್ರದರ್ಶನಗೊಳ್ಳಲಿರುವ ಕಿಶೋರ ಯಕ್ಷಗಾನ ಸಂಭ್ರಮ – 2025 ನ್ನು ಇಂದು (02.12.2025) ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಜ್ಯೋತಿ ಬೆಳಗಿಸಿ, ಉದ್ಘಾಟಿಸಿ, ತಮ್ಮ ಅನುಗ್ರಹ ಸಂದೇಶದಲ್ಲಿ ಯಕ್ಷಗಾನ ನಮ್ಮ ಸಂಸ್ಕøತಿಯನ್ನು, ಪುರಾಣಜ್ಞಾನವನ್ನು ಮುಂದಿನ ತಲೆಮಾರಿಗೆ ವರ್ಗಾಯಿಸುವ ಅಪೂರ್ವವಾದ ಕಲಾಪ್ರಕಾರವಾಗಿದೆ. ಮುಂದಿನ ವರ್ಷಗಳಲ್ಲಿ ಉಡುಪಿ ಶ್ರೀಕೃಷ್ಣ ಮಠದಲ್ಲಿ ನಿರಂತರ ಅನ್ನದಾನದಂತೆ ಯಕ್ಷಗಾನ ಪ್ರದರ್ಶನಕ್ಕೂ ಅವಕಾಶ ಕಲ್ಪಿಸಿ, ಈ ಕಲೆಯ ಆಸರೆಗೆ ಅನುವು ಮಾಡಿಕೊಡಲಾಗುವುದು. ಎಲ್ಲಾ ಮಠ ಮಂದಿರಗಳು ಇದನ್ನು ಬದ್ಧತೆಯಿಂದ ಮಾಡಬೇಕಾಗಿದೆ ಎಂದರು. ಕಿರಿಯ ಶ್ರೀಗಳಾದ ಶ್ರೀ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಸಾನಿಧ್ಯವಹಿಸಿದ್ದರು. ಅಂಬಲಪಾಡಿ ದೇವಳದ ಧರ್ಮದರ್ಶಿಗಳಾದ ಡಾ. ನಿ. ಬೀ.ವಿಜಯ ಬಲ್ಲಾಳರು ಶುಭ ಹಾರೈಸಿದರು. ಉಡುಪಿಯ ನಿಕಟಪೂರ್ವ ಶಾಸಕರೂ, ಯಕ್ಷಶಿಕ್ಷಣ ಟ್ರಸ್ಟ್ ಸ್ಥಾಪಕಾಧ್ಯಕ್ಷರೂ ಆದ ಕೆ. ರಘುಪತಿ ಭಟ್, ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಪೂರ್ಣಿಮಾ, ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ.ಗಂಗಾಧರ ರಾವ್ ಅಭ್ಯಾಗತರಾಗಿ ಭಾಗವಹಿಸಿದ್ದರು. ಯಕ್ಷಶಿಕ್ಷಣ ಟ್ರಸ್ಟನ ವಿಶ್ವಸ್ಥರಾದ ಎಸ್. ವಿ. ಭಟ್ ಮತ್ತು ಯು.ಎಸ್.ರಾಜಗೋಪಾಲ ಆಚಾರ್ಯರು ಸ್ವಾಮೀಜಿಯವರಿಗೆ ಫಲವಸ್ತು ಸಮರ್ಪಿಸಿದರು.ಟ್ರಸ್ಟ್ ಕೋಶಾಧಿಕಾರಿ ಗಣೇಶ ಬ್ರಹ್ಮಾವರ, ಯಕ್ಷಗಾನ ಕಲಾರಂಗದ ಕೆ. ಸದಾಶಿವ ರಾವ್,ಭುವನ ಪ್ರಸಾದ ಹೆಗ್ಡೆ, ಎ. ಅನಂತರಾಜ ಉಪಾಧ್ಯಾಯ, ಕೆ.ಅಜಿತ್ ಕುಮಾರ್,ಮಂಜುನಾಥ ಹೆಬ್ಬಾರ, ನಾಗರಾಜ ಹೆಗಡೆ,ದಿನೇಶ ಪೂಜಾರಿ,ಆನಂದ ಶೆಟ್ಟಿ, ನಟರಾಜ ಉಪಾಧ್ಯಾಯ ಉಪಸ್ಥಿತರಿದ್ದರು. ಟ್ರಸ್ಟ್ ನ ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಸಾವನೆಯ ಮಾತುಗಳನ್ನಾಡಿದರು. ವಿಶ್ವಸ್ತರುಗಳಾದ ವಿ. ಜಿ. ಶೆಟ್ಟಿ ಸ್ವಾಗತಿಸಿ, ವಿದ್ಯಾಪ್ರಸಾದ್ ವಂದಿಸಿದರು. ನಾರಾಯಣ ಎಂ. ಹೆಗಡೆ ಕಾರ್ಯಕ್ರಮ ನಿರೂಪಿಸಿದರು. ಉದ್ಘಾಟನಾ ಸಮಾರಂಭದ ಬಳಿಕ ವಿದ್ಯೋದಯ ಪಬ್ಲಿಕ್ ಸ್ಕೂಲ್ನ ವಿದ್ಯಾರ್ಥಿಗಳಿಂದ ಚರಿತ್ ಹೇರೂರು ನಿರ್ದೇಶನದಲ್ಲಿ ಶಶಿಪ್ರಭಾ ಪರಿಣಯ ಹಾಗೂ ಕಡಿಯಾಳಿ ಯು. ಕಮಲಾ ಬಾಯಿ ಪ್ರೌಢಶಾಲಾ ವಿದ್ಯಾರ್ಥಿಗಳಿಂದ ಕೃಷ್ಣಮೂರ್ತಿ ಭಟ್ ನಿರ್ದೇಶನದಲ್ಲಿ ಶ್ವೇತಕುಮಾರ ಸೊಗಸಾಗಿ ಪ್ರಸ್ತುತಗೊಂಡಿತು.

