ಸೇನೆಯಲ್ಲಿ 24ವರ್ಷಗಳ ಸೇವೆಸಲ್ಲಿಸಿ ನಿವೃತ್ತರಾದ ಆನಂದ ಕಬ್ಬಿನಾಲೆ ಇವರಿಗೆ ಮುನಿಯಾಲಿನಲ್ಲಿ ಭವ್ಯ ಸ್ವಾಗತ

0
45

ಆನಂದ ಕಬ್ಬಿನಾಲೆ ಸೇನಾ ಸೇವೆಯಲ್ಲಿ ನಿವೃತ್ತಿ : ಮುನಿಯಾಲಿನಲ್ಲಿ ಭವ್ಯ ಸ್ವಾಗತ : ಗೌರವ ಅರ್ಪಣೆ.

ಮುನಿಯಾಲಿನಲ್ಲಿ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣವಾಗಬೇಕು : ಉದಯ ಕುಮಾರ್‌ ಶೆಟ್ಟಿ.

ವಿಶೇಷ ವರದಿ – ಸುಕುಮಾರ್‌ ಮುನಿಯಾಲ್‌

ಮುನಿಯಾಲು : ಕ್ರೀಡಾ ಹಿನ್ನಲೆಯ ಕಾರಣದಿಂದಲೇ ಆನಂದ ಕಬ್ಬಿನಾಲೆ ಸಾಧನೆ ಮಾಡಲು ಸಾಧ್ಯವಾಗಿದೆ. ಕಬಡ್ಡಿಯ ಮೂಲಕ ಮುನಿಯಾಲಿನ ಹೆಸರು ಕೂಡ ರಾರಾಜಿಸುತ್ತಿದೆ. ಕಬಡ್ಡಿ ಸಹಿತ ಕ್ರೀಡೆಯು ಇನ್ನಷ್ಟು ಯುವ ಸಮುದಾಯದ ಬಾಳಿಗೆ ಬೆಳಕಾಗಬೇಕು ಅದಕ್ಕಾಗಿ ಮುನಿಯಾಲಿನಲ್ಲಿ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣವಾಗಬೇಕು, ಕೇಂದ್ರ ಮಾಡಲಿ ರಾಜ್ಯ ಸರ್ಕಾರ ಮಾಡಲಿ ನನ್ನ ಪೂರ್ಣ ಸಹಕಾರವಿದೆ ಎಂದು ಮುನಿಯಾಲು ಉದಯ ಕೃಷ್ಣಯ್ಯ ಶೆಟ್ಟಿ ಚಾರೀಟೇಬಲ್‌ ಟ್ರಸ್ಟ್‌ ಅಧ್ಯಕ್ಷ ಉದಯ ಕುಮಾರ್‌ ಶೆಟ್ಟಿ ಹೇಳಿದರು.

ಅವರು ಸೇನೆಯಲ್ಲಿ ೨೪ ವರ್ಷಗಳ ಸೇವೆಸಲ್ಲಿಸಿ ನಿವೃತ್ತರಾಗಿ ಹುಟ್ಟೂರಿಗೆ ಆಗಮಿಸಿದ ಆನಂದ ಕಬ್ಬಿನಾಲೆ ಅವರನ್ನು ಬುಧವಾರ ಮುನಿಯಾಲಿನಲ್ಲಿ ಮುನಿಯಾಲು ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘ ಹಾಗೂ ದೇಶಭಕ್ತರ ವೇದಿಕೆಯ ವತಿಯಿಂದ ಭವ್ಯವಾಗಿ ಸ್ವಾಗತಿಸಿ ಗೌರವಿಸಿ ಮಾತನಾಡಿದರು.

ಕಬ್ಬಿನಾಲೆಯ ಗ್ರಾಮೀಣ ಪ್ರದೇಶದಲ್ಲಿ ಬಡಕುಟುಂಬದಲ್ಲಿ ಹುಟ್ಟಿಬೆಳೆದು ಸೇನೆ ಸೇರಿ ಕಠಿಣ ಪರಿಶ್ರಮದ ಮೂಲಕ ೨೪ ವರ್ಷಗಳ ಸೇವೆ ಸಲ್ಲಿಸಿ ನಿವೃತ್ತರಾದ ಆನಂದ ಕಬ್ಬಿನಾಲೆ ಅವರು ಎಲ್ಲರಿಗೂ ಪ್ರೇರಣೆಯಾಗಿದ್ದಾರೆ. ಅವರ ಮುಂದಿನ ಜೀವನದಲ್ಲಿ ಸಮಾಜಮುಖಿ ಸೇವೆಗಳು ನಡೆಯಲಿ, ಅವರ ಮುಂದಿನ ಯಶಸ್ಸಿನ ಹಿಂದೆ ನಮ್ಮ ಸಹಕಾರವಿದೆ. ಅವರು ಕಬಡ್ಡಿ ಪಟುವಾಗಿದ್ದರಿಂದ ಎತ್ತರಕ್ಕೆ ಬೆಳೆಯಲು ಸಾಧ್ಯವಾಯಿತು ಎಂದು ಉದಯ ಕುಮಾರ್‌ ಶೆಟ್ಟಿ ಹೇಳಿದರು.

ಮುನಿಯಾಲು ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘ ಹಾಗೂ ದೇಶಭಕ್ತರ ವೇದಿಕೆಯ ಅಧ್ಯಕ್ಷ ಗೋಪಿನಾಥ ಭಟ್‌ ಮಾತನಾಡಿ ಯೋಧರು ನಮ್ಮ ಹೆಮ್ಮೆ, ನಮ್ಮೊಡನೆ ಇದ್ದು ಬೆಳೆದ ಆನಂದ ಕಬ್ಬಿನಾಲೆ ನಮ್ಮ ಹೆಮ್ಮೆ ಎಂದರು.

ಭವ್ಯ ಸ್ವಾಗತ ಮತ್ತು ಗೌರವ ಸ್ವೀಕರಿಸಿ ಮಾತನಾಡಿದ ನಿವೃತ್ತ ಯೋಧ ಆನಂದ ಕಬ್ಬಿನಾಲೆ ನಮ್ಮೂರಿನ ಜನರ ಪ್ರೀತಿಗೆ ಋಣಿಯಾಗಿದ್ದೇನೆ, ಇನ್ನಷ್ಟು ಸೇವೆ ಮಾಡುವ ಮನಸ್ಸು ಬಂದಿದೆ, ನಿಮ್ಮೊಡನೆ ಇದ್ದು ಎಲ್ಲರ ಸೇವೆ ಮಾಡುವೆ ಎಂದು ಪ್ರೀತಿ ಗೌರವಕ್ಕೆ ಕೃತಜ್ಞತೆ ಸಲ್ಲಿಸಿದರು.

ಆನಂದ ಕಬ್ಬಿನಾಲೆ ಅವರ ಕಬಡ್ಡಿ ಕೋಚ್‌ ರಮೇಶ ಸುವರ್ಣ ಕಡ್ತಲ, ಮುನಿಯಾಲು ಕರ್ನಾಟಕ ಪಬ್ಲಿಕ್‌ ಸ್ಕೂಲ್‌ ಪ್ರಾಂಶುಪಾಲೆ ಬೇಬಿ ಶೆಟ್ಟಿ, ನಿವೃತ್ತ ಸೈನಿಕ ವರಂಗ ಪಂಚಾಯಿತಿ ಪಿಡಿಒ ಶ್ರೀನಿವಾಸ್‌ ಮಾತನಾಡಿ ಅಭಿನಂದಿಸಿದರು.

ಆನಂದ ಕಬ್ಬಿನಾಲೆ ಅವರ ತಂದೆ ದೋಣಿಮಾರು ಪೇರಳದ ಸಂಜೀವ ಹಸಲ, ತಾಯಿ ಗಿರಿಜ ಕಬ್ಬಿನಾಲೆ, ಪತ್ನಿ ಸರಿತಾ ಆನಂದ್, ಮಕ್ಕಳು, ನಿವೃತ್ತ ಸೈನಿಕರಾದ ಶ್ರೀನಿವಾಸ್‌, ಜಯ ಶೆಟ್ಟಿಗಾರ್‌, ಕಡ್ತಲ ವಿಶ್ವನಾಥ ಶೆಟ್ಟಿ, ಮುನಿಯಾಲು ಪ್ರವೀಣ್‌ ಶೆಟ್ಟಿ ಅವರನ್ನು ಗೌರವಿಸಲಾಯಿತು. ಆನಂದ್‌ ಕಬ್ಬಿನಾಲೆ ಅವರ ಸಹಪಾಠಿಗಳು, ಅಭಿಮಾನಿಗಳು, ಸಂಘಸಂಸ್ಥೆಯವರು, ದೇಶಭಕ್ತರು ಗೌರವಿಸಿದರು.

ಮುನಿಯಾಲು ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘ ಹಾಗೂ ದೇಶಭಕ್ತರ ವೇದಿಕೆಯ ಪ್ರಸನ್ನ ಶೆಟ್ಟಿ ಪಡುಕುಡೂರು, ರಘುನಾಥ್‌, ಸಚಿನ್‌ ಮತ್ತು ಪದಾಧಿಕಾರಿಗಳು, ಮುನಿಯಾಲು ಮಹಾಗಣಪತಿ ಸೇವಾ ಸಮಿತಿಯ ಅಧ್ಯಕ್ಷ ಸುಧಾಕರ ಶೆಟ್ಟಿ, ಮುನಿಯಾಲು ಹಿಂದೂ ಹೆಲ್ಪ್‌ ಲೈನ್‌ ಗೌರವಾಧ್ಯಕ್ಷ ಡಾ.ಕೆ.ಸುದರ್ಶನ್‌ ಹೆಬ್ಬಾರ್‌, ಡಾ.ಅಮರಜಿತ್‌ ಕೆ, ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾ ಸಂಘದ ಅಧ್ಯಕ್ಷ ಮಂಜುನಾಥ ಟಿ ಕಾಡುಹೊಳೆ, ಮುನಿಯಾಲು ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ಕೃಷ್ಣ ಶೆಟ್ಟಿಗಾರ್‌, ವಿವಿಧ ಸಂಘಸಂಸ್ಥೆಗಳ ಪ್ರಮುಖರು,ಗಣ್ಯರು, ಊರಿನ ಪ್ರಮುಖರು ಭಾಗವಹಿಸಿದ್ದರು. ಮುನಿಯಾಲು ಕರ್ನಾಟಕ ಪಬ್ಲಿಕ್‌ ಸ್ಕೂಲ್‌ ಶಿಕ್ಷಕ ಪ್ರಕಾಶ ಪೂಜಾರಿ ಮಾತಿಬೆಟ್ಟು ಸ್ವಾಗತಿಸಿ ನಿರೂಪಿಸಿದರು.

LEAVE A REPLY

Please enter your comment!
Please enter your name here