ಉಡುಪಿ: ಅಲ್ಪಸಂಖ್ಯಾತರ ಯೋಜನೆಯಡಿ 2 ಕೋಟಿ ರೂ. ಸಾಲ ಮಂಜೂರಾಗಲಿದ್ದು, ನಂತರ ಸಾಲ ಮರುಪಾವತಿ ಮಾಡುವುದಾಗಿ ನಂಬಿಸಿ ಮಹಿಳೆಯೊಬ್ಬರಿಂದ ಸುಮಾರು 148 ಗ್ರಾಂ ಚಿನ್ನಾಭರಣ ಅಡಮಾನ ಇರಿಸಿ ಹಣ ಪಡೆದು ವಂಚಿಸಿರುವ ಬಗ್ಗೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆರ್ಗಾ ಗ್ರಾಮದ ತ್ರಿಶಂಕು ನಗರದ ನಿವಾಸಿ ಮೋಹಿನಿ ಶೆಟ್ಟಿಗಾರ್ ವಂಚನೆಗೊಳಗಾದವರು. ಇವರಿಗೆ ಪರಿಚಯಸ್ಥರಾಗಿದ್ದ ಜೀನತ್ ಎಂಬಾಕೆ 2020ರಲ್ಲಿ ತುರ್ತಾಗಿ 50 ಲಕ್ಷ ರೂ. ಹಣದ ಅವಶ್ಯಕತೆ ಇದೆ. ತನಗೆ ಅಲ್ಪಸಂಖ್ಯಾತರ ಯೋಜನೆಯಡಿ 2 ಕೋಟಿ ರೂ. ಸಾಲ ಮಂಜೂರಾಗಲಿದ್ದು, ಸಾಲದ ಹಣ ಕೈ ಸೇರಿದ ತಕ್ಷಣ ಒಂದು ವರ್ಷದೊಳಗೆ ನಿಮ್ಮ ಹಣ ಹಾಗೂ ಚಿನ್ನವನ್ನು ಹಿಂತಿರುಗಿಸುವುದಾಗಿ ನಂಬಿಸಿದ್ದಳು. ಇದನ್ನು ಸತ್ಯವೆಂದು ನಂಬಿದ ಮೋಹಿನಿ ಅವರು, 2020ರ ಆಗಸ್ಟ್ ಮತ್ತು ಅಕ್ಟೋಬರ್ ತಿಂಗಳಲ್ಲಿ ತನ್ನ ಬಳಿಯಿದ್ದ ಸುಮಾರು 148 ಗ್ರಾಂ ಚಿನ್ನಾಭರಣಗಳನ್ನು (ಅಂದಾಜು ಮೌಲ್ಯ 22 ಲಕ್ಷ ರೂ.) ಸುಧೀಂದ್ರ ಫೈನಾನ್ಸ್ನಲ್ಲಿ ಅಡವಿಟ್ಟು 4,36,000 ರೂ. ಹಣವನ್ನು ಜೀನತ್ಗೆ ನೀಡಿದ್ದರು. ಹಣ ಪಡೆದ ಬಳಿಕ ಸುಮಾರು ಒಂದೂವರೆ ವರ್ಷದವರೆಗೆ ಜೀನತ್ ಸಾಲದ ಕಂತನ್ನು ಕಟ್ಟುತ್ತಾ ಬಂದಿದ್ದಳು. ಆದರೆ ಆ ಬಳಿಕ ಸಾಲದ ಕಂತನ್ನೂ ಕಟ್ಟದೆ, ಚಿನ್ನವನ್ನೂ ಹಿಂತಿರುಗಿಸದೇ ಸತಾಯಿಸಿದ್ದಾಳೆ. ಇದರಿಂದ ಬೇಸತ್ತ ಮೋಹಿನಿ ಜೀನತ್ ಮನೆಗೆ ಹೋಗಿ ಕೇಳಿದಾಗ ಅವಾಚ್ಯ ಶಬ್ದಗಳಿಂದ ಬೈದು ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.

