ನಿಪ್ಪಾಣಿಯ ಮಹಾಕಾಳಿ ಸಂಸ್ಥಾನ ಸದ್ಧರ್ಮ ಪೀಠದ ಪೀಠಾಧಿಪತಿಗಳು ಹಾಗೂ ಈಡಿಗ-ನಾಮಧಾರಿ ಸಮಾಜದ ಗುರುಗಳಾದ ಶ್ರೀ ಶ್ರೀ ಶ್ರೀ ಅರುಣಾನಂದ ಸ್ವಾಮೀಜಿ ಅವರು ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಭೇಟಿ ನೀಡಿ ಸಾಂತ್ವನ ಹೇಳಿದರು.

ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಈಡಿಗ ಸಮಾಜದ ಎಲ್ಲಾ ಪಂಗಡಗಳ ಸಭೆಯಲ್ಲಿ ದುರಂತದಲ್ಲಿ ಮೃತಪಟ್ಟ ಕುಟುಂಬಗಳ ಸ್ಥಿತಿಗತಿ ಕುರಿತು ಚರ್ಚೆ ನಡೆದಿತ್ತು. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಸ್ವಾಮೀಜಿಯವರು ಸ್ಥಳಕ್ಕೆ ಭೇಟಿ ನೀಡಿ ಮೃತರ ಕುಟುಂಬ ಸದಸ್ಯರಿಂದ ಸಂಪೂರ್ಣ ಮಾಹಿತಿ ಪಡೆದು ಅವರ ನೋವಿನಲ್ಲಿ ಭಾಗಿಯಾದರು.

ಈ ಸಂದರ್ಭದಲ್ಲಿ ಮಾತನಾಡಿದ ಸ್ವಾಮೀಜಿಯವರು, ದುರಂತ ಪೀಡಿತ ಕುಟುಂಬಗಳ ಪರಿಸ್ಥಿತಿಯನ್ನು ಈಡಿಗ ಸಮಾಜದ ಎಲ್ಲಾ ಪಂಗಡಗಳ ಮುಂದಿನ ಸಭೆಯಲ್ಲಿ ಪ್ರಸ್ತಾಪಿಸಿ, ಸರ್ಕಾರ ಹಾಗೂ ಸಂಬಂಧಿತ ಇಲಾಖೆಗಳ ಮೂಲಕ ಹೆಚ್ಚಿನ ಪರಿಹಾರ ದೊರಕುವಂತೆ ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು. ಅಲ್ಲದೆ, ಮಹಾಕಾಳಿ ಸಂಸ್ಥಾನ ಸದ್ಧರ್ಮ ಪೀಠದಿಂದಲೂ ಅಗತ್ಯ ಸಹಾಯ-ಸಹಕಾರ ಒದಗಿಸಲಾಗುವುದು ಎಂದು ಹೇಳಿದರು.

ಸ್ವಾಮೀಜಿಯವರ ಈ ಮಾನವೀಯ ಕಾಳಜಿ ಹಾಗೂ ಸಾಂತ್ವನ ಕಾರ್ಯಕ್ಕೆ ಸ್ಥಳೀಯ ಈಡಿಗ ಸಮಾಜದ ಮುಖಂಡರು ಮತ್ತು ಕುಟುಂಬಸ್ಥರು ಕೃತಜ್ಞತೆ ಸಲ್ಲಿಸಿದರು. ಸಮಾಜದ ವತಿಯಿಂದ ಶ್ರೀ ಅರುಣಾನಂದ ಸ್ವಾಮೀಜಿಯವರಿಗೆ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸಲಾಯಿತು.

