ಮಂಜೇಶ್ವರ: ಬೆಳ್ತಂಗಡಿ ಸಮೀಪದ ಉಜಿರೆ ಶಿವಾಜಿ ನಗರ ನಿವಾಸಿ, ಹತ್ತನೇ ತರಗತಿ ವಿದ್ಯಾರ್ಥಿನಿ ಜೇಷ್ಠ ಆಚಾರ್ಯ (15) ಮೃತದೇಹ ನೇ**ಣು ಬಿಗಿದ ಸ್ಥಿತಿಯಲ್ಲಿ ಮನೆಯೊಳಗೆ ನಿನ್ನೆ ಬೆಳಗ್ಗೆ ಪತ್ತೆಯಾಗಿದೆ.
ಜೇಷ್ಠ ಆಚಾರ್ಯ, ಶಾಲಾರಂಭವಾದ ನಿನ್ನೆ ಉಜಿರೆಯ ಎಸ್.ಡಿ.ಎಂ ಹೈಸ್ಕೂಲ್ ನಲ್ಲಿ ಹತ್ತನೇ ತರಗತಿಗೆ ಹಾಜರಾಗಲು ತಯಾರಿ ನಡೆಸುತ್ತಿರುವ ಮಧ್ಯೆ ಬೆಳಗ್ಗೆ 8.30 ಕ್ಕೆ ಯುನಿಫಾರ್ಮ್ ಧರಿಸಲು ಬೆಡ್ ರೂಮ್ ಗೆ ತೆರಳಿದ್ದಳು. ತಡವಾದರೂ ಮಗಳು ಕೋಣೆಯಿಂದ ಬರದನ್ನ ಗಮನಿಸಿದ ಹೆತ್ತವರು ಬಾಗಿಲು ಬಡಿದರೂ ಯಾವುದೇ ಪ್ರತ್ಯುತ್ತರ ದೊರಕದ ಕಾರಣ, ಕಿಟಿಕಿಯಿಂದ ನೋಡಿದಾಗ ಸೀರೆಯಲ್ಲಿ ಫ್ಯಾನ್ ಗೆ ನೇಣು ಬಿಗಿದ ಸ್ಥಿತಿಯಲ್ಲಿ ಕಂಡು ಬಂದಿದ್ದು, ಕೂಡಲೇ ಸ್ಥಳೀಯರ ನೆರವಿನೊಂದಿಗೆ ಬಾಗಿಲು ಮುರಿದು, ಜೇಷ್ಠಳನ್ನು ಕುಣಿಕೆಯಿಂದ ಕೆಳಗಿಳಿಸಿ, ಸ್ಥಳೀಯ ಆಸ್ಪತ್ರೆಗೆ ದಾಖಲಿಸುವ ಹಾದಿ ಮಧ್ಯೆ ಮೃತಪಟ್ಟಿದ್ದಾಳೆ ಎಂದು ಮನೆ ಮಂದಿ ತಿಳಿಸಿದ್ದಾರೆ.
ಜೇಷ್ಠ ನೇಣು ಬಿಗಿಯಲು ಕಾರಣ ಏನೆಂದು ತಿಳಿದು ಬಂದಿಲ್ಲ. ಈ ಬಗ್ಗೆ ಮನೆಯವರು ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೋಷಕರ ದೂರಿನನ್ವಯ ಬೆಳ್ತಂಗಡಿ ಪೊಲೀಸರು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಅಡಿಯಲ್ಲಿ ಅಸ್ವಾಭಾವಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತದೇಹದ ಮರಣೋತ್ತರ ಪರೀಕ್ಷೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಡೆದು, ಇಂದು ಬೆಳಗ್ಗೆ ಮನೆಗೆ ತರಲಾಯಿತು. ಬಳಿಕ ಉಜಿರೆಯ ಹಿಂದೂ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಿತು.

