ತುಳು ಭಾಷೆ, ಸಂಸ್ಕೃತಿ ಉಳಿಸಲು ನಿರಂತರ ಪ್ರಯತ್ನ ಅಗತ್ಯ: ಜಯಕರ ಶೆಟ್ಟಿ

0
24


ಉಡುಪಿ: ತುಳುನಾಡಿನ ಸಂಪ್ರದಾಯ, ಆಚರಣೆ ಹಾಗೂ ಆಚಾರ–ವಿಚಾರಗಳನ್ನು ತುಳು ಭಾಷಿಕರೇ ಉಳಿಸಿ ಬೆಳೆಸಬೇಕು. ಮುಂದಿನ ಪೀಳಿಗೆಗೆ ನಮ್ಮ ಸಂಸ್ಕೃತಿಯ ಪರಿಚಯ ಮಾಡಿಕೊಡುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಉಡುಪಿ ತುಳುಕೂಟದ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಹೇಳಿದರು.
ಉಡುಪಿ ತುಳುಕೂಟ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ ‘ಆಟಿದ ತಿರ್ಲ್ 2026’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ತುಳುನಾಡಿನ ಸಂಸ್ಕೃತಿ ಹಾಗೂ ಪರಂಪರೆಯನ್ನು ಉಳಿಸುವಲ್ಲಿ ಇಂತಹ ಕಾರ್ಯಕ್ರಮಗಳು ಮಹತ್ವದ ಪಾತ್ರ ವಹಿಸುತ್ತವೆ. ತುಳು ಭಾಷಿಕರು ಒಗ್ಗಟ್ಟಾಗಿ ತುಳುಕೂಟದ ಚಟುವಟಿಕೆಗಳಿಗೆ ನಿರಂತರ ಬೆಂಬಲ ನೀಡುವ ಮೂಲಕ ಭಾಷೆ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ಕೈಜೋಡಿಸಬೇಕು ಎಂದು ಅವರು ಹೇಳಿದರು.
ಅಮೃತಾ ಪುರುಷೋತ್ತಮ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ಮಹಿಳಾ ಸಾಧಕಿಯರಾದ ಲೀಲಾವತಿ ಹಾಗೂ ಪುಷ್ಪ ಪೂಜಾರಿ ಅವರನ್ನು ಗೌರವಿಸಲಾಯಿತು. ತುಳುಕೂಟದ ಉಪಾಧ್ಯಕ್ಷ ಭುವನ ಪ್ರಸಾದ್ ಹೆಗ್ಡೆ, ನಿವೃತ್ತ ಪ್ರಾಂಶುಪಾಲ ಡಾ. ವಿ.ಕೆ. ಯಾದವ್, ಮನೋರಮ ಶೆಟ್ಟಿ, ಶೋಭಾ ಶೆಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಜ್ಯೋತಿ ದೇವಾಡಿಗ ಪ್ರಾರ್ಥಿಸಿದರು. ತುಳುಕೂಟದ ಸಂಚಾಲಕಿ ವಂದನಾ ವಿಶ್ವನಾಥ್ ಸ್ವಾಗತಿಸಿದರು. ಉಪಾಧ್ಯಕ್ಷ ದಿವಾಕರ್ ಸನಿಲ್ ವಂದಿಸಿದರು. ಯಶೋದಾ ಕೇಶವ್ ಕಾರ್ಯಕ್ರಮ ನಿರೂಪಿಸಿದರು. ತುಳುನಾಡಿನ ಸಾಂಪ್ರದಾಯಿಕ ಆಹಾರ ಪದ್ಧತಿಯ ವೈವಿಧ್ಯವನ್ನು ಪರಿಚಯಿಸುವ 33 ಬಗೆಯ ಖಾದ್ಯಗಳ ರಸದೌತಣ ‘ಆಟಿದ ತಿರ್ಲ್ 2026’ರ ಪ್ರಮುಖ ಆಕರ್ಷಣೆಯಾಯಿತು.