ಉಡುಪಿ: ಪ್ರಸ್ತುತ ಭವಿಷ್ಯನಿಧಿ ಪಿಂಚಣಿದಾರರು ಅತ್ಯಂತ ಕನಿಷ್ಠ ಮೊತ್ತ ರೂ. 600 ಹಾಗೂ ರೂ. 700 ಪಿಂಚಣಿ ಪಡೆಯುತ್ತಿದ್ದು, ಈ ಇಳಿವಯಸ್ಸಿನಲ್ಲಿ ಜೀವನ ನಿರ್ವಹಣೆ ಮಾಡುವುದು ತೀವ್ರ ಕಷ್ಟಕರವಾಗಿದೆ. ಭವಿಷ್ಯನಿಧಿ ಪಿಂಚಣಿದಾರರಿಗೆ ಕನಿಷ್ಠ ಪಿಂಚಣಿಯನ್ನು 9,000 ರೂ. ಹೆಚ್ಚಿಸಬೇಕು. ಕಾಲಕಾಲಕ್ಕೆ ಹೆಚ್ಚಳವಾಗುವ ತುಟ್ಟಿಭತ್ಯೆಯನ್ನು ಪಿಂಚಣಿದಾರರಿಗೂ ಅನ್ವಯಿಸಬೇಕು ಎಂದು ಸೌತ್ ಕೆನರಾ ಬೀಡಿ ವರ್ಕರ್ಸ್ ಫೆಡರೇಶನ್ ಜಿಲ್ಲಾ ಅಧ್ಯಕ್ಷ ಸುಕುಮಾರ್ ತೊಕ್ಕೊಟ್ಟು ಆಗ್ರಹಿಸಿದರು.
ಭವಿಷ್ಯ ನಿಧಿ ಪಿಂಚಣಿದಾರರ ಉಡುಪಿ ವಲಯ ಸಮಿತಿ (ಸಿಐಟಿಯು)ನೇತೃತ್ವದಲ್ಲಿ ಪಿಂಚಣಿದಾರರ ಹಲವು ಸಮಸ್ಯೆಗಳನ್ನು ಬಗೆಹರಿಸಲು ಒತ್ತಾಯಿಸಿ ಭವಿಷ್ಯ ನಿಧಿ ಕಚೇರಿ ಮುಂದೆ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಪಿಂಚಣಿ ಅರ್ಜಿ ಸಲ್ಲಿಸಲು ಕಚೇರಿಗೆ ಬರುವ ವಯೋವೃದ್ಧ ಕಾರ್ಮಿಕರಿಗೆ ನೆಪಗಳನ್ನು ಹೇಳಿ ವಾಪಸ್ ಕಳುಹಿಸುವ ಮೂಲಕ ಸಿಬ್ಬಂದಿ ಕಿರುಕುಳ ನೀಡುತ್ತಿದ್ದಾರೆ. ಹಿರಿಯ ನಾಗರಿಕರೊಂದಿಗೆ ಸೌಜನ್ಯದಿಂದ ವ್ಯವಹರಿಸುವಂತೆ ಕಚೇರಿ ಸಿಬ್ಬಂದಿಗೆ ಸೂಕ್ತ ಸೂಚನೆ ಹಾಗೂ ಜಾಗೃತಿ ಮೂಡಿಸಬೇಕು. ಪಿಂಚಣಿ ಅರ್ಜಿಯಲ್ಲಿನ ಲೋಪದೋಷಗಳನ್ನು ಮಾಲೀಕರು ಮತ್ತು ಭವಿಷ್ಯನಿಧಿ ಅಧಿಕಾರಿಗಳ ಹಂತದಲ್ಲೇ ಚರ್ಚಿಸಿ ಬಗೆಹರಿಸಬೇಕು. ಪಿಂಚಣಿ ಆದಾಲತ್ನಲ್ಲಿ ತೆಗೆದುಕೊಂಡ ತೀಮಾರ್ನಗಳನ್ನು ತಕ್ಷಣವೇ ಜಾರಿಗೆ ತರಬೇಕು ಎಂದು ಆಗ್ರಹಿಸಿದರು.
ಉಡುಪಿ ಜಿಲ್ಲಾ ಹಂಚು ಕಾರ್ಮಿಕರ ಸಂಘದ ಜಿಲ್ಲಾ ಕಾರ್ಯದರ್ಶಿ ಎಚ್.ನರಸಿಂಹ ಮಾತನಾಡಿದರು. ಜಿಲ್ಲಾ ಬೀಡಿ ಫೆಡರೇಶನ್ ಕಾರ್ಯದರ್ಶಿ ಕವಿರಾಜ್. ಎಸ್.ಕಾಂಚನ್, ಕೋಶಾಧಿಕಾರಿ ಬಲ್ಕೀಸ್, ಕಾರ್ಕಳ ತಾಲೂಕು ಬೀಡಿ ಕಾರ್ಮಿಕ ಸಂಘದ ಅಧ್ಯೆ ಸುನೀತ ಶೆಟ್ಟಿ, ಬೀಡಿ ಎಂಡ್ ಟೊಬ್ಯಾಕೋ ಲೇಬರ್ ಯೂನಿಯನ್ ಉಡುಪಿ ಅಧ್ಯೆ ನಳಿನಿ.ಎಸ್, ಸಿಐಟಿಯು ರಾಜ್ಯ ಕಾರ್ಯದರ್ಶಿ ಸುರೇಶ್ ಕಲ್ಲಾಗಾರ, ಸಿಐಟಿಯು ಉಡುಪಿ ಜಿಲ್ಲಾ ಅಧ್ಯಕ್ಷ ಶಶಿಧರ್ ಗೊಲ್ಲ, ಸಿಐಟಿಯು ಮುಖಂಡರಾದ ನಾಗೇಶ್ ಬೆಳ್ಮಣ್, ಉಡುಪಿ ಕಟ್ಟಡ ಸಂಘದ ಮುಖಂಡರಾದ ದಯಾನಂದ ಕೋಟ್ಯಾನ್, ಭವಿಷ್ಯ ನಿಧಿ ಪಿಂಚಣಿದಾರರ ಸಂಘದ ಅಧ್ಯೆ ಲಲಿತ ಸುವರ್ಣ, ಕೋಶಾಧಿಕಾರಿ ಸರೋಜ ಎಸ್. ಮೊದಲಾದವರು ಉಪಸ್ಥಿತರಿದ್ದರು.
ಸಭೆ ಬಳಿಕ ಭವಿಷ್ಯನಿಧಿ ಪಿಂಚಣಿದಾರರ ಉಡುಪಿ ವಲಯ ಸಮಿತಿಯ ಪದಾಧಿಕಾರಿಗಳು ಪ್ರಾದೇಶಿಕ ಭವಿಷ್ಯನಿಧಿ ಆಯುಕ್ತರಿಗೆ ಮನವಿ ಪತ್ರ ಸಲ್ಲಿಸಿದರು.

