ದಂತ ಆರೋಗ್ಯ ನಿರ್ಲಕ್ಷ್ಯ ಸಲ್ಲದು : ಡಾ ಚೂಂತಾರು‌

0
17

ಉಳ್ಳಾಲ: ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನ ಮತ್ತು ಆರೋಗ್ಯ ಭಾರತಿ ಮಂಗಳೂರು ಇದರ ವತಿಯಿಂದ ದಕ್ಷ್ ಪ್ಲೇ ಸ್ಕೂಲ್ ವಿದ್ಯಾರ್ಥಿಗಳಿಗೆ ದಂತ ಕಿಟ್ ವಿತರಣೆ ಹಾಗೂ ಹಲ್ಲಿನ ಸಂರಕ್ಷಣೆಯ ಕುರಿತು ಮಾಹಿತಿ ಕಾರ್ಯಕ್ರಮ ಗುರುವಾರ ದಕ್ಷ್ ಪ್ಲೇ ಸ್ಕೂಲ್‌ನಲ್ಲಿ ನಡೆಯಿತು.

ಖ್ಯಾತ ವೈದ್ಯರು ಹಾಗೂ ಸಾಮಾಜಿಕ ಚಿಂತಕರಾದ ಡಾ. ಮುರಲೀ ಮೋಹನ್ ಚೂಂತಾರು ಅವರು ಮಕ್ಕಳಿಗೆ ದಂತ ಕಿಟ್ ವಿತರಿಸಿ ಮಾತನಾಡಿ, ಆಹಾರವನ್ನು ಜಗಿಯಲು, ಸುಲಭವಾಗಿ ತಿನ್ನಲು ಹಾಗೂ ಜೀರ್ಣಕ್ರಿಯೆಗೆ ಸಹಕರಿಸಲು ಗಟ್ಟಿಯಾದ ಮತ್ತು ಆರೋಗ್ಯಕರ ಹಲ್ಲುಗಳು ಅಗತ್ಯ. ನಗುವಾಗ ಸುಂದರವಾದ ಹಲ್ಲುಗಳು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತವೆ ಎಂದರು.

ಮಕ್ಕಳು ಪ್ರತಿದಿನ ಬೆಳಗ್ಗೆ ಮತ್ತು ರಾತ್ರಿ ಎರಡು ಬಾರಿ ಹಲ್ಲುಜ್ಜುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಸಿಹಿತಿಂಡಿ, ಚಾಕೊಲೇಟ್ ಹಾಗೂ ಹಲ್ಲಿಗೆ ಅಂಟಿಕೊಳ್ಳುವ ಪದಾರ್ಥಗಳ ಸೇವನೆಯನ್ನು ಕಡಿಮೆ ಮಾಡಬೇಕು. ಚಾಕೊಲೇಟ್ ಅಥವಾ ಸಿಹಿತಿಂಡಿ ಸೇವಿಸಿದ ಬಳಿಕ ಬಾಯಿಯನ್ನು ಸ್ವಚ್ಛವಾಗಿ ತೊಳೆಯಬೇಕು ಎಂದು ಸಲಹೆ ನೀಡಿದರು.

ಆರೋಗ್ಯಕರ ಹಲ್ಲುಗಳಿಗಾಗಿ ಸೇಬು, ಮಾವು, ಮೂಸಂಬಿ ಸೇರಿದಂತೆ ತಾಜಾ ಹಣ್ಣುಗಳು ಹಾಗೂ ಹಸಿ ತರಕಾರಿಗಳನ್ನು ಸೇವಿಸಬೇಕು. ಜಂಕ್‌ಫುಡ್‌ಗಳನ್ನು ಸಾಧ್ಯವಾದಷ್ಟು ದೂರವಿಟ್ಟು, ಮನೆಯಲ್ಲಿ ಅಮ್ಮ ತಯಾರಿಸಿದ ಇಡ್ಲಿ,ಚಪಾತಿ, ಉಪಿಟ್ಟು, ದೋಸೆ ಸೇರಿದಂತೆ ಪೌಷ್ಟಿಕ ಆಹಾರವನ್ನು ಸೇವಿಸುವುದು ಉತ್ತಮ. ಆರೋಗ್ಯಕರ ಆಹಾರ ಸೇವನೆಯಿಂದ ಹಲ್ಲುಗಳ ಜೊತೆಗೆ ಒಟ್ಟಾರೆ ದೈಹಿಕ ಆರೋಗ್ಯವೂ ಉತ್ತಮವಾಗುತ್ತದೆ ಎಂದು ತಿಳಿಸಿದರು.

ಪ್ರಾಧ್ಯಾಪಕಿ ಸುಮಲಾ ಕೊಣಾಜೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.ದಕ್ಷ್ ಪ್ಲೇ ಸ್ಕೂಲ್‌ನ ವ್ಯವಸ್ಥಾಪಕ ನಿರ್ದೇಶಕಿ ಮಲ್ಲಿಕಾ ಉಳ್ಳಾಲ ಬೈಲ್ ವಂದಿಸಿದರು.
ಪತ್ರಕರ್ತೆ ವಜ್ರ ಗುಜರನ್, ಶಿಕ್ಷಕರಾದ ಶಿಲ್ಪಾ ರಾಕೇಶ್ ಗಟ್ಟಿ ಹಾಗೂ ಚಿತ್ರಕಲಾ ಉಪಸ್ಥಿತರಿದ್ದರು.ಸುಮಾರು ೫೦ ಮಂದಿ ಮಕ್ಕಳಿಗೆ ದಂತ ಕಿಟ್ ವಿತರಿಸಲಾಯಿತು.

ಹಲ್ಲಿನಲ್ಲಿ ಹುಳುಕು ಉಂಟಾಗಿ ರಂಧ್ರವಾದಾಗ ಅದನ್ನು ನಿರ್ಲಕ್ಷಿಸಬಾರದು. ಆರಂಭದಲ್ಲೇ ಸೂಕ್ತ ಚಿಕಿತ್ಸೆ ಪಡೆಯದಿದ್ದರೆ ಹಲ್ಲಿನಲ್ಲಿ ತೀವ್ರ ನೋವು ಉಂಟಾಗಿ, ಕೀವು ತುಂಬಿ ಬಳಿಕ ಇಂಜೆಕ್ಷನ್ ಅಥವಾ ಇತರ ಚಿಕಿತ್ಸೆಗಳ ಅಗತ್ಯ ಬೀಳುವ ಪರಿಸ್ಥಿತಿ ಎದುರಾಗಬಹುದು. ಆದ್ದರಿಂದ ಚಿಕ್ಕಂದಿನಿಂದಲೇ ಹಲ್ಲಿನ ಬಗ್ಗೆ ಕಾಳಜಿ ವಹಿಸುವ ಅಭ್ಯಾಸ ಬೆಳೆಸಿಕೊಳ್ಳಬೇಕು ಡಾ. ಚೂಂತಾರು ತಿಳಿಸಿದರು.