ಜಿಲ್ಲಾ ಮಟ್ಟದ ಮಾವು ಮೇಳ ಉದ್ಘಾಟನೆ> ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿಕೆ
ಉಡುಪಿ: ರಾಮನಗರ ಜಿಲ್ಲೆಯ ರೈತರು ಬೆಳೆಸಿದ ವಿವಿಧ ತಳಿಗಳ ಮಾವಿನ ಹಣ್ಣುಗಳನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಲು ಈ ಮೇಳ ವೇದಿಕೆಯಾಗಿದೆ. ಇದು ಕೇವಲ ಮಾರಾಟವಲ್ಲ ಮಾತ್ರವಲ್ಲದೆ ರೈತರ ಶ್ರಮ ಮತ್ತು ಮಣ್ಣಿನ ಸುವಾಸನೆಯನ್ನು ಜನರಿಗೆ ತಲುಪಿಸುವ ಪ್ರಯತ್ನ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ತೋಟಗಾರಿಕೆ ಇಲಾಖೆ ಅಶ್ರಯದಲ್ಲಿ ರಾಮನಗರ ಜಿಲ್ಲಾ ಮಾವು ಮತ್ತು ತೋಟದ ಬೆಳೆಗಾರರ ಮಾರಾಟ ಸಂಘ ಸಹಯೋಗದಲ್ಲಿ ದೊಡ್ಡಣಗುಡ್ಡೆಯ ತೋಟಗಾರಿಕೆ ಇಲಾಖೆಯ ರೈತ ಸೇವಾ ಕೇಂದ್ರದ ಆವರಣದಲ್ಲಿ ಮೇ 14 ರಿಂದ 17 ರವರೆಗೆ ಆಯೋಜಿಸಲಾದ ಮಾವು ಮೇಳಕ್ಕೆ ಚಾಲನೆ ನೀಡಿ ಮಾತನಾಡಿದರು.
ಮೇಳದಲ್ಲಿ ಸುಮಾರು 12 ರಿಂದ 15 ವಿವಿಧ ತಳಿಗಳ ಮಾವಿನ ಹಣ್ಣುಗಳು ಲಭ್ಯವಿವೆ. ರಾಮನಗರ ಜಿಲ್ಲೆಯ ವಿವಿಧ ತಳಿಗಳ ನೈಸರ್ಗಿಕವಾಗಿ ಹಣ್ಣಾದ ಮಾವಿನ ಹಣ್ಣುಗಳನ್ನು ನೇರವಾಗಿ ಬೆಳೆಗಾರರಿಂದ ಗ್ರಾಹಕರಿಗೆ ತಲುಪಿಸುವ ಉದ್ದೇಶದಿಂದ ಈ ಮೇಳವನ್ನು ಆಯೋಜಿಸಲಾಗಿದೆ ಎಂದರು.
ತೋಟಗಾರಿಕೆ ಜಂಟಿ ನಿರ್ದೇಶಕಿ ಕ್ಷಮಾ ಪಾಟೀಲ್, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಶ್ರೀನಿವಾಸ ಹೇಮಂತ್ ಕುಮಾರ್ ಬೀಳಗಿ, ಸಹಾಯಕ ನಿರ್ದೇಶಕರಾದ ನಿಧೀಶ್, ವರುಣ್, ಕುಮಾರ್, ಗುರುಪ್ರಸಾದ್, ಸುನೀಲ್ ಮೊದಲಾದವರು ಉಪಸ್ಥಿತರಿದ್ದರು.

