ಆಳ್ವಾಸ್ ನಲ್ಲಿ ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇಯ ತಂಡದಿಂದ ಯಕ್ಷಗಾನ‌ ಪ್ರದರ್ಶನ

0
30

ಡಾ.ಮೋಹನ್ ಆಳ್ವರವರಿಗೆ ಗೌರವಭಿನಂದನ ಕಾರ್ಯಕ್ರಮ

ಮೂಡಬಿದಿರೆ: ಕಂಡವರ ಕಣ್ಣರಳಿಸಬಲ್ಲ ಕನ್ನಡದ ಕಮನೀಯ ಕಲೆಯೇ ಯಕ್ಷಗಾನ. ಇದು ಕಾವ್ಯ, ನಾಟ್ಯ, ಗಾಯನವೇ ಮೊದಲಾ‌ದ ಸಾಂಗತ್ಯವನ್ನು ಒಳಗೊಂಡಿರುವ ಒಂದು ಸತ್ತ್ವಯುತ ಸಾಂಸ್ಕೃತಿಕ ಸೌರಂಭದ ಕಲೆ.

ಈ ಬಾರಿ ಕಲೆಯ ಅನಾವರಣಗೊಂಡದ್ದು ಇಲ್ಲಿಯವರಿಂದಲ್ಲ ಬದಲಾಗಿ ಗಲ್ಫ್ ರಾಷ್ಟ್ರಗಳಲ್ಲಿ‌ ಉದ್ಯೋಗನಿಮಿತ್ತ ನೆಲೆಯಾಗಿರುವ ಅನಿವಾಸಿ ಭಾರತೀಯರಿಂದ. ಅದರಲ್ಲೂ ವಿಶೇಷವಾಗಿ ಅಲ್ಲಿಯೇ ಹುಟ್ಟಿ ಬೆಳೆದ ಪುಟಾಣಿ ಮಕ್ಕಳಿಂದ. ಅಲ್ಲಿನ ಮಕ್ಕಳು ಕಲಿಯುತ್ತಿರುವುದು ಇಂಗ್ಲಿಷ್ ಮಾಧ್ಯಮದಲ್ಲೇ ಆದರೂ ಯಕ್ಷಗಾನಕ್ಕೆ ಬೇಕಾಗಿ ಕನ್ನಡವನ್ನು ಕಲಿತು, ಪ್ರದರ್ಶನ ನೀಡಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ.


ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇ, ದುಬೈ. ಇದರ ವತಿಯಿಂದ‌ ಮೂಡಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ನಡೆದ ಪೂರ್ವರಂಗ ಸಹಿತವಾದ ‘ಮೋಹಿನಿ ಏಕಾದಶಿ’ ಯಕ್ಷಗಾನ ಪ್ರಸಂಗವು ಕಲಾಭಿಮಾನಿಗಳ ಮೆಚ್ಚುಗೆಯನ್ನು ಗಳಿಸಿತು.

20 ಮಂದಿ ಬಾಲಕ – ಬಾಲಕಿಯರು ಹಾಗೂ ಒಟ್ಟು 38 ಕಲಾವಿದರು ವಿವಿಧ ಪಾತ್ರಗಳಲ್ಲಿ‌ ಕಾಣಿಸಿಕೊಂಡರು. ಇವರಿಗೆಲ್ಲ ಗುರುಗಳಾಗಿ ಒದಗಿಬಂದವರು ಯಕ್ಷಮಯೂರ ಬಿರುದಾಂಕಿತ ಶೇಖರ ಡಿ. ಶೆಟ್ಟಿಗಾರರು, ನಾಟ್ಯ ಸಂಯೋಜಿಸಿದವರು ಶರತ್ ಕುಡ್ಲ, ಚೆಂಡೆ-ಮದ್ದಳೆ ಗುರುಗಳಾಗಿರುವವರು ಸವಿನಯ ನೆಲ್ಲಿತೀರ್ಥ ಹಾಗೂ ಆನ್ ಲೈನ್ ಮೂಲಕ ಅಲ್ಲಿನ‌ ವಿದ್ಯಾರ್ಥಿಗಳಿಗೆ ಭಾಗತಿಕೆಯನ್ನು ಕಲಿಸಿಕೊಡುತ್ತಿರುವವರು ಖ್ಯಾತ ಭಾಗವತರಾದ ಭವ್ಯಶ್ರೀ ಕುಲ್ಕುಂದ ಇವರು.

ಈ ಸಂದರ್ಭದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಎಂ. ಮೋಹನ್ ಆಳ್ವರನ್ನು ದುಬೈ ಯಕ್ಷಗಾನ ಅಭ್ಯಾಸ ಕೇಂದ್ರದ ವತಿಯಿಂದ ಸನ್ಮಾನಿಸಲಾಯಿತು.

“ವಿದೇಶದಲ್ಲಿ ಇದ್ದರೂ ನಮ್ಮ ಸಂಸ್ಕೃತಿಯನ್ನು ಹಾಗೂ ಸಾಂಸ್ಕೃತಿಕ ಕಲೆಯನ್ನು ಉಳಿಸುವಲ್ಲಿ ಇವರೆಲ್ಲರ ಶ್ರಮ ನಿಜಕ್ಜೂ ಶ್ಲಾಘನೀಯ ಮತ್ತು ಅನುಸರಣೀಯ” ಎಂದು ಆಳ್ವರು ಅಭಿಪ್ರಾಯ ಪಟ್ಟರು.

ವೇದಿಕೆಯಲ್ಲಿ‌ ಧನಲಕ್ಷ್ಮಿ ಕ್ಯಾಶ್ಯೂ ಇಂಡಸ್ಟ್ರೀಸ್ ನ‌ ಮಾಲಿಕರಾದ ಶ್ರೀಪತಿ‌ ಭಟ್, ಬಹುಮೇಳಗಳ‌ ಸಂಚಾಲಕರಾದ ಕಿಶನ್ ಹೆಗ್ಡೆ ಪಳ್ಳಿ, ಯಕ್ಷಗಾನ ಕಲಾರಂಗ ಉಡುಪಿಯ ಕಾರ್ಯದರ್ಶಿಗಳಾದ ಮುರಳಿ ಕಡೆಕಾರ್, ಯಕ್ಷಧ್ರುವ ಯಕ್ಷಶಿಕ್ಷಣದ ಸಂಚಾಲಕರಾದ ವಾಸುದೇವ್ ಐತಾಳ್ ಮತ್ತು ಯಕ್ಷಗಾನ‌ ಅಭ್ಯಾಸ ಕೇಂದ್ರದ ಸಂಚಾಲಕರಾದ ದಿನೇಶ್ ಶೆಟ್ಟಿ‌ ಕೊಟ್ಟಿಂಜ‌ ಇವರು ಉಪಸ್ಥಿತರಿದ್ದರು. ಆಳ್ವಾಸ್ ಧೀಂಕಿಟ ಯಕ್ಷಗಾನ ಅಭ್ಯಾಸ ಕೇಂದ್ರದ ಸಂಯೋಜಕರಾದ ಗುರುಪ್ರಾಸದ್ ಭಟ್ ಇವರು ಕಾರ್ಯಕ್ರಮ ನಿರೂಪಿಸಿದರು.