
ಬೆಂಗಳೂರು : ಥಣಿಸಂದ್ರದ ಜಾಮಿಯ ಮಹಮ್ಮದಿಯ ಮನ್ಸೂರ ಶಿಕ್ಷಣ ಸಂಸ್ಥೆಯಲ್ಲಿ ಸರ್ಕಾರದ ಆದೇಶ ಉಲ್ಲಂಘಿಸಿ ಹಿಂದೂ ಧರ್ಮವಿರೋಧಿ ಬೋಧನೆ ಮಾಡಿದ್ದು, ಧರ್ಮನಿಂದನೆ ಮಾಡಿರುವವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಸೈಬರ್ ಅಪರಾಧ ವಿಭಾಗಕ್ಕೆ ದೂರು ಸಲ್ಲಿಕೆಯಾಗಿದೆ.
ಕರ್ನಾಟಕ ರಾಜ್ಯ ಅಹಿಂದ ಸಂಘಟನಾ ವೇದಿಕೆಯ ಉಪಾಧ್ಯಕ್ಷ ಹಾಗೂ ಈ ಶಾಲೆಯಲ್ಲಿ ಅಧ್ಯಯನ ಮಾಡುತ್ತಿದ್ದ ವಿದ್ಯಾರ್ಥಿಯ ತಂದೆ ಎನ್. ರೇವಣ್ಣ ಅವರು ಮೈಸೂರು ಸೈಬರ್ ಅಪರಾಧ ವಿಭಾಗಕ್ಕೆ ದೂರು ನೀಡಿದ್ದು, ಹಿಂದೂ ವಿರೋಧಿ ಹೇಳಿಕೆಗಳು ಯೂಟ್ಯೂಬ್ ನಲ್ಲಿ ಲಭ್ಯವಿದ್ದು, ಇದನ್ನು ಪರಿಶೀಲಿಸಿ ತಕ್ಷಣವೇ ಸಂಬಂಧಪಟ್ಟವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಜಾಮಿಯ ಮಹಮ್ಮದಿಯ ಮನ್ಸೂರ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಬೋಧನೆ ಮಾಡುವ ಸಂದರ್ಭದಲ್ಲಿ ಅಲ್ಲಿನ ಧಾರ್ಮಿಕ ಮುಖಂಡರು “ಹಿಂದೂ ಸಮಾಜದವರು ಜಾನುವಾರುಗಳಿಗೆ ಆಹಾರ ಹುಡುಕಿಕೊಂಡು ಅಫ್ಘಾನಿಸ್ತಾನದಿಂದ ಇಲ್ಲಿಗೆ ಬಂದ ವಲಸಿಗರಾಗಿದ್ದಾರೆ. ಇಲ್ಲಿಗೆ ಬಂದ ನಂತರ ಇವರು ಬ್ರಾಹ್ಮಣರು, ಶೂದ್ರರು, ಕ್ಷತ್ರಿಯರಾದರು. ಹಿಂದುಗಳು ಇಲ್ಲಿನವರಲ್ಲ. ನುಸುಳುಕೋರರು. ಹೊರ ದೇಶದಿಂದ ಬಂದವರು” ಎಂದು ವಿದ್ಯಾರ್ಥಿಗಳ ಮನಸ್ಸಿನಲ್ಲಿ ವಿಷ ಬೀಜ ಬಿತ್ತುತ್ತಿದ್ದಾರೆ. ಜೊತೆಗೆ ಹಿಂದೂ ಧರ್ಮದ ಭಾವನೆಗೆ ಧಕ್ಕೆ ತರುತ್ತಿದ್ದಾರೆ. ಶ್ರೀರಾಮ ದೇವರಿಗೆ ಅಗೌರವ ತೋರುತ್ತಿದ್ದಾರೆ.
ರಾಮರಾಜ್ಯ ನಾಶ ಮಾಡಬೇಕು ಎಂದು ಪ್ರಚೋದನಾಕಾರಿಯಾಗಿ ಭಾಷಣ ಮಾಡಿದ್ದಾರೆ. ನೈತಿಕತೆ ಪಾಠ ಮಾಡುವ ಬದಲು ಬೇರೆ ಧರ್ಮಗಳ ನಿಂದನೆಯಲ್ಲಿ ತೊಡಗಿದ್ದಾರೆ. ವಿಷದ ಬೀಜ ಬಿತ್ತುವ ಇವರ ಮೇಲೆ ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ದೂರಿಯಲ್ಲಿ ಎನ್. ರೇವಣ್ಣ ದೂರಿನಲ್ಲಿ ತಿಳಿಸಿದ್ದಾರೆ.
ಶಿಕ್ಷಣ ಸಂಸ್ಥೆಯಲ್ಲಿ ಧರ್ಮನಿಂದನೆ ಚಟುವಟಿಕೆ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಅಬ್ದುಲ್ ರಹೀಮ್ ಎಂಬುವರು ದೂರು ದಾಖಲಿಸಿದ್ದರು. ಇದರ ಅನ್ವಯ ಬೆಂಗಳೂರು ದಕ್ಷಿಣ ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಅಧಿಕೃತ ಸೂಚನೆ ಹೊರಡಿಸಿ, ಶಾಲೆಯ ಆವರಣದಲ್ಲಿ ಯಾವುದೇ ಚಟುವಟಿಕೆ ನಡೆಸದಂತೆ ಸೂಚಿಸಿದ್ದರು. ಸರ್ಕಾರದ ಆದೇಶವನ್ನೇ
ದಿಕ್ಕರಿಸಿರುವವರ ಮೇಲೆ ಸೂಕ್ತ ಕ್ರಮ ಆಗಬೇಕು ಎಂದು ದೂರುದಾರರು ಮನವಿ ಮಾಡಿದ್ದಾರೆ.
