ನೆಲ್ಲಿಕಾಯಿ (Amla) ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿ ನೈಸರ್ಗಿಕ ಆಹಾರವಾಗಿದ್ದು, ವಿಶೇಷವಾಗಿ ಮಧುಮೇಹದಿಂದ ಬಳಲುತ್ತಿರುವವರಿಗೆ ಇದು ಬಹಳ ಉಪಯುಕ್ತವಾಗಿದೆ. ಆರೋಗ್ಯ ತಜ್ಞರ ಪ್ರಕಾರ, ಊಟಕ್ಕೂ 20 ರಿಂದ 30 ನಿಮಿಷಗಳ ಮೊದಲು ನೆಲ್ಲಿಕಾಯಿ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯವಾಗುತ್ತದೆ.
ನೆಲ್ಲಿಕಾಯಿಯಲ್ಲಿ ಇರುವ ಕ್ರೋಮಿಯಂ ಖನಿಜಾಂಶವು ದೇಹದಲ್ಲಿ ಇನ್ಸುಲಿನ್ ಕಾರ್ಯಕ್ಷಮತೆಯನ್ನು ಸುಧಾರಿಸಲು ನೆರವಾಗುತ್ತದೆ. ಇದರಿಂದ ಆಹಾರದಲ್ಲಿನ ಕಾರ್ಬೋಹೈಡ್ರೇಟ್ಗಳು ನಿಧಾನವಾಗಿ ಜೀರ್ಣವಾಗಿ ಗ್ಲೂಕೋಸ್ ಆಗಿ ಪರಿವರ್ತನೆಯಾಗುವುದರಿಂದ ಊಟದ ಬಳಿಕ ರಕ್ತದಲ್ಲಿನ ಸಕ್ಕರೆ ಮಟ್ಟ ಏಕಾಏಕಿ ಹೆಚ್ಚಾಗುವ ಸಾಧ್ಯತೆ ಕಡಿಮೆಯಾಗುತ್ತದೆ.
ವಿಟಮಿನ್ ಸಿ ಸಮೃದ್ಧವಾಗಿರುವ ನೆಲ್ಲಿಕಾಯಿ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ ಜ್ವರ, ಶೀತ ಹಾಗೂ ವಿವಿಧ ಸೋಂಕುಗಳಿಂದ ರಕ್ಷಣೆ ನೀಡಲು ಸಹಕಾರಿಯಾಗಿದೆ. ಜೊತೆಗೆ ಇದರಲ್ಲಿರುವ ಆಂಟಿಆಕ್ಸಿಡೆಂಟ್ಗಳು ಕೆಟ್ಟ ಕೊಲೆಸ್ಟ್ರಾಲ್ (LDL) ಪ್ರಮಾಣವನ್ನು ಕಡಿಮೆ ಮಾಡಲು ನೆರವಾಗಿ ಹೃದಯದ ಆರೋಗ್ಯವನ್ನು ಕಾಪಾಡುತ್ತವೆ.
ನೆಲ್ಲಿಕಾಯಿಯಲ್ಲಿರುವ ನಾರಿನಾಂಶ ಜೀರ್ಣಕ್ರಿಯೆಯನ್ನು ಸುಧಾರಿಸಿ ಅಜೀರ್ಣ, ಗ್ಯಾಸ್ಟ್ರಿಕ್ ಹಾಗೂ ಮಲಬದ್ಧತೆ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಕಾರಿ. ಅಲ್ಲದೆ ರಕ್ತವನ್ನು ಶುದ್ಧೀಕರಿಸುವ ಗುಣ ಹೊಂದಿರುವುದರಿಂದ ಚರ್ಮದ ಕಾಂತಿ ಹೆಚ್ಚಲು ಮತ್ತು ಕೂದಲಿನ ಆರೋಗ್ಯ ಕಾಪಾಡಲು ಸಹಾಯ ಮಾಡುತ್ತದೆ.
ಮಧುಮೇಹ ಇರುವವರು ತಾಜಾ ನೆಲ್ಲಿಕಾಯಿಯನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಅಥವಾ ಊಟಕ್ಕೂ ಮುನ್ನ ಸೇವಿಸಬಹುದು. ನೆಲ್ಲಿಕಾಯಿ ರಸವನ್ನು ಸಹ ಸೇವಿಸಬಹುದಾದರೂ, ಸಕ್ಕರೆ ಮಿಶ್ರಿತ ನೆಲ್ಲಿಕಾಯಿ ಕ್ಯಾಂಡಿ ಅಥವಾ ಮಿಠಾಯಿಗಳನ್ನು ತಪ್ಪಿಸುವುದು ಉತ್ತಮ. ಮಧುಮೇಹದ ಔಷಧಿಗಳನ್ನು ಸೇವಿಸುತ್ತಿರುವವರು ಆಹಾರ ಪದ್ಧತಿಯಲ್ಲಿ ಬದಲಾವಣೆ ಮಾಡುವ ಮೊದಲು ವೈದ್ಯರ ಸಲಹೆ ಪಡೆಯುವುದು ಒಳಿತು.

