ಮಂಗಳೂರು : ತುಳು ಭಾಷೆಗೆ ಅನುವಾದಿಸಲಾದ ಸಂತ ಶ್ರೇಷ್ಠ ಕನಕದಾಸರ ಕಾವ್ಯ –ಕೀರ್ತನೆಯ ಕುರಿತು ಸಂವಾದ ಹಾಗೂ ಕಾವ್ಯ ವಾಚನ ಕಾರ್ಯಕ್ರಮವನ್ನು ಜೂ.13ರ ಮಧ್ಯಾಹ್ನ 3.00 ಗಂಟೆಗೆ ಮಂಗಳೂರು ಊರ್ವ ಸ್ಟೋರ್ ನಲ್ಲಿರುವ ತುಳು ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಕರ್ನಾಟಕ ಸರಕಾರದ ಸಂತ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರ ಕನಕದಾಸರ ಸಮಗ್ರ ಸಾಹಿತ್ಯವನ್ನು ತುಳು ಸೇರಿದಂತೆ ಒಟ್ಟು ಹದಿನಾಲ್ಕು ಭಾಷೆಗೆ ಅನುವಾದಿಸಿಗೆ ಇತ್ತೀಚಿಗೆ ಬಿಡುಗಡೆ ಮಾಡಿತ್ತು. ತುಳು ಅನುವಾದ ಸಂಪುಟದ ಸಂಪಾದಕರಾಗಿ ಕಾರ್ಯನಿರ್ವಹಿಸಿದ ವಿದ್ವಾಂಸರಾದ ಪ್ರೊ.ಎ.ವಿ.ನಾವಡ ಅವರು ಈ ವಿಚಾರ ಸಂಕಿರಣವನ್ನು ಉದ್ಘಾಟನೆ ಮಾಡಲಿದ್ದಾರೆ.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಕನ್ನಡ ತುಳು ವಿದ್ವಾಂಸ ಪ್ರೊ.ಬಿ.ಶಿವರಾಮ ಶೆಟ್ಟಿ ಕೃತಿ ಅವಲೋಕನ ಮಾಡಲಿದ್ದಾರೆ. ನಿವೃತ್ತ ಪ್ರಾಂಶುಪಾಲ ಪ್ರೊ.ಕೃಷ್ಣಮೂರ್ತಿ , ಕೆನರಾ ಪಿ.ಯು ಕಾಲೇಜಿನ ಉಪನ್ಯಾಸಕ ರಘು ಇಡ್ಕಿದು, ಆಳ್ವಾಸ್ ಕಾಲೇಜಿನ ಕನ್ನಡ ಉಪನ್ಯಾಸಕಿ ಡಾ.ಸುಧಾರಾಣಿ ಪ್ರತಿಕ್ರಿಯೆ ನೀಡಲಿದ್ದಾರೆ.
ಕೃತಿಯ ಅನುವಾದಕರಾದ ಆತ್ರಾಡಿ ಅಮೃತಾ ಶೆಟ್ಟಿ, ಮುದ್ದು ಮೂಡುಬೆಳ್ಳೆ, ಭಾಸ್ಕರ್ ರೈ ಕುಕ್ಕುವಳ್ಳಿ, ಡಾ.ಕಾತ್ಯಾಯಿನಿ ಕುಂಜಿಬೆಟ್ಟು, ಪ್ರೊ.ಟಿ.ಎ.ಎನ್.ಖಂಡಿಗೆ, ಡಾ.ವಸಂತ ಕುಮಾರ್ ಪರ್ಲ ಕರ್ಯಕ್ರಮದಲ್ಲಿ ಗೌರವ ಅತಿಥಿಗಳಾಗಿ ಉಪಸ್ಥಿತರಿರುವರು.
ಸಂವಾದ ಕಾರ್ಯಕ್ರಮದ ಆರಂಭದಲ್ಲಿ ಗಾಯಕ ನಾದಾ ಮಣಿನಾಲ್ಕೂರು ಅವರಿಂದ ಕನಕದಾಸರ ತುಳುವಿಗೆ ಅನುವಾದಗೊಂಡ ಕಾವ್ಯಗಳ ಗಾಯನ ಕರ್ಯಕ್ರಮ ನಡೆಯಲಿದೆ ಎಂದು ತುಳು ಅಕಾಡೆಮಿ ಪ್ರಕಟಣೆ ತಿಳಿಸಿದೆ.

