ಕುಂದಾಪುರ: ನಾದಾವಧಾನ ಪ್ರತಿಷ್ಠಾನ (ರಿ.) ಕುಂದಾಪುರ ಇದರ ವಾರ್ಷಿಕೋತ್ಸವ ಸಮಾರಂಭ ಜೂ. 7ರಂದು ನಾಗೂರಿನ ಒಡೆಯರಮಠ ಶ್ರೀ ಗೋಪಾಲಕೃಷ್ಣ ಕಲಾಮಂದಿರದಲ್ಲಿ ನಡೆಯಲಿದೆ. ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಎಡನೀರು ಮಠ ಇವರ ಶುಭಾಶೀರ್ವಾದದೊಂದಿಗೆ ಶ್ರೀ ಕೃಷ್ಣಮೂರ್ತಿ ಮಂಜರು ಮಾರಣಕಟ್ಟೆ ಇವರ ಶುಭ ಹಾರೈಕೆಯೊಂದಿಗೆ ಹಾಗೂ ಎಪಿ ಫಾಟಕ್ ಕಾರ್ಕಳ ಮಾರ್ಗದರ್ಶನದಲ್ಲಿ ವಾರ್ಷಿಕೋತ್ಸವ ನಡೆಯಲಿದೆ. ಬೆಳಗ್ಗೆ 9ರಿಂದ ನಾದಾವಧಾನ ವಿದ್ಯಾರ್ಥಿಗಳಿಂದ ಯಕ್ಷಗಾನ ಪದ್ಯಗಳ ಪ್ರಸ್ತುತಿ, ನಡೆದ ಬಳಿಕ 10.30ರಿಂದ ಉದ್ಘಾಟನಾ ಸಮಾರಂಭ ನಡೆಯಲಿದೆ.
ಮಧ್ಯಾಹ್ನ 2.30ರಿಂದ ಬಡಗಿನ ಅಗ್ರಗಣ್ಯ ಭಾಗವತರುಗಳಾದ ಶ್ರೀ ಸುರೇಶ್ ಶೆಟ್ಟಿ ಶಂಕರನಾರಾಯಣ, ಶ್ರೀ ರಾಘವೇಂದ್ರ ಆಚಾರ್ಯ ಜನಸಾಲೆ, ಶ್ರೀ ರಾಮಕೃಷ್ಣ ಹೆಗಡೆ ಹಿಲ್ಲೂರು, ಕುಮಾರಿ ಶ್ರೀರಕ್ಷಾ ಹೆಗಡೆ ಸಿದ್ದಾಪುರ, ಅಲ್ಲದೆ ವಿಶೇಷವಾಗಿ ಯಕ್ಷ ಧ್ರುವ ಶ್ರೀ ಪಟ್ಲ ಸತೀಶ್ ಶೆಟ್ಟಿ, ಇವರಿಂದ ಪೌರಾಣಿಕ ಪ್ರಸಂಗಗಳ ಆಯ್ದ ಪದ್ಯಗಳ ಅಪರೂಪ ಯಕ್ಷಗಾನ ವೈಭವ ಹಾಗೂ ಸಂಜೆ 5 ಗಂಟೆಗೆ ಶ್ರೀ ಹಿರಿಯ ಯಕ್ಷಗಾನ ಭಾಗವತರಾದ ಗೋಪಾಲ್ ಗಾಣಿಗ ಹೇರಂಜಾಲು ಅವರಿಗೆ ಗುರುವಂದನೆ ಹಾಗೂ ಸಭಾ ಕಾರ್ಯಕ್ರಮ ನಡೆಯಲಿದೆ. ಸಂಜೆ 6ರಿಂದ ಅಶ್ವಿನಿ ಕೊಂಡದಕುಳಿ ಹಾಗೂ ನಾದಾವಧಾನ ವಿದ್ಯಾರ್ಥಿಗಳಿಂದ ಯಕ್ಷಗಾನ ಪ್ರದರ್ಶನ ನಡೆಯಲಿದ್ದು, ವಿವಿಧ ಗಣ್ಯಾತಿ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಜೊತೆಗೆ ಚಲನಚಿತ್ರ ನಟ ಹಾಗೂ ನಿರ್ದೇಶಕರಾದ ಪ್ರಮೋದ್ ಶೆಟ್ಟಿ ಹಾಗೂ ಸಂದೇಶ್ ಶೆಟ್ಟಿ ವಿಶೇಷ ತಾರಾ ಮೆರುಗು ನೀಡಿಲಿದ್ದಾರೆ.