ವರದಿ : ಮಂದಾರ ರಾಜೇಶ್ ಭಟ್
ಮಂಗಳೂರು : ಕರ್ನಾಟಕ ಜಾನಪದ ಪರಿಷತ್ತು (ಕಜಾಪ) ಬೆಂಗಳೂರು ಕೇಂದ್ರ ಘಟಕದ ಆದೇಶದಂತೆ, ದಕ್ಷಿಣ ಕನ್ನಡ ಜಿಲ್ಲಾ ಘಟಕದ ವ್ಯಾಪ್ತಿಯಲ್ಲಿರುವ ಎಲ್ಲಾ ಒಂಬತ್ತು ತಾಲೂಕು ಘಟಕಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಬರ್ಖಾಸ್ತುಗೊಳಿಸಲಾಗಿದೆ.
ದಿನಾಂಕ 30/04/2026ರ ರಾತ್ರಿಯಿಂದಲೇ ಈ ಆದೇಶ ಜಾರಿಗೆ ಬಂದಿದ್ದು, ಜಿಲ್ಲಾಧ್ಯಕ್ಷರ ಅನುಮೋದನೆಯೊಂದಿಗೆ ಅಧಿಕೃತ ಸೂಚನೆ ಹೊರಡಿಸಲಾಗಿದೆ. ಈ ಕುರಿತು ಪತ್ರಿಕೆಗೆ ಮಾಹಿತಿ ನೀಡಿರುವ ಜಿಲ್ಲಾ ಘಟಕವು, ಸಂಘಟನೆಯಲ್ಲಿ ಪಾರದರ್ಶಕತೆ ಮತ್ತು ನವ ಚೈತನ್ಯ ತುಂಬುವ ನಿಟ್ಟಿನಲ್ಲಿ ಈ ತುರ್ತು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ.
ಕಾರ್ಯಚಟುವಟಿಕೆಗಳ ಸ್ಥಗಿತ
ಮುಂದಿನ ಆದೇಶದವರೆಗೆ ಬರ್ಖಾಸ್ತುಗೊಂಡ ಘಟಕಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಪರಿಷತ್ತಿನ ಹೆಸರಿನಲ್ಲಿ ಯಾವುದೇ ವ್ಯವಹರಿಸುವಂತಿಲ್ಲ ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ಸಕ್ರಿಯತೆಯ ಕೊರತೆ
ಜಿಲ್ಲೆಯ ಒಂಬತ್ತು ಘಟಕಗಳ ಪೈಕಿ ಕೇವಲ ಕೆಲವು ಘಟಕಗಳು ಮಾತ್ರ ಸಕ್ರಿಯವಾಗಿದ್ದು, ಉಳಿದ ಘಟಕಗಳಲ್ಲಿ ಕಾರ್ಯವೈಖರಿ ಕುಂಠಿತಗೊಂಡಿರುವುದು ಈ ನಿರ್ಧಾರಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ.
ಹೊಸ ಪದಾಧಿಕಾರಿಗಳ ನೇಮಕ
ಶೀಘ್ರದಲ್ಲೇ ಎಲ್ಲಾ ತಾಲೂಕುಗಳಿಗೆ ಹೊಸ ಅಧ್ಯಕ್ಷರು ಹಾಗೂ ಪದಾಧಿಕಾರಿಗಳನ್ನು ನೇಮಕ ಮಾಡುವ ಸಾಧ್ಯತೆ ದಟ್ಟವಾಗಿದೆ.
ಕಠಿಣ ಮಾನದಂಡಗಳು
ಹೊಸ ನೇಮಕಾತಿಯಲ್ಲಿ ಪಾರದರ್ಶಕತೆಗೆ ಆದ್ಯತೆ ನೀಡಲಾಗುವುದು. ಸಮಾಜದಲ್ಲಿ ಉತ್ತಮ ಚಾರಿತ್ರ್ಯ ಉಳ್ಳವರು ಮತ್ತು ಜಾನಪದ ರಂಗದಲ್ಲಿ ಆಸಕ್ತಿ ಉಳ್ಳವರಿಗೆ ಮಾತ್ರ ಅವಕಾಶ ನೀಡಲಾಗುವುದು.
ಕ್ರಿಮಿನಲ್ ಹಿನ್ನೆಲೆಗೆ ನೋ ಎಂಟ್ರಿ
ಯಾವುದೇ ರೀತಿಯ ಕ್ರಿಮಿನಲ್ ಹಿನ್ನೆಲೆ ಹೊಂದಿರುವ ವ್ಯಕ್ತಿಗಳಿಗೆ ಪರಿಷತ್ತಿನ ಪದಾಧಿಕಾರಿಗಳಾಗಲು ಅವಕಾಶ ನೀಡುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಜಿಲ್ಲಾ ಘಟಕ ನೀಡಿದೆ.
”ರಾಜ್ಯಾಧ್ಯಕ್ಷರ ಸೂಚನೆಯಂತೆ ಸಂಘಟನೆಯ ಹಿತದೃಷ್ಟಿಯಿಂದ ಈ ಶಿಸ್ತು ಕ್ರಮ ಕೈಗೊಳ್ಳಲಾಗಿದೆ. ಜನಪದ ಕಲೆ ಮತ್ತು ಸಂಸ್ಕೃತಿಯ ಉಳಿವಿಗೆ ಪ್ರಾಮಾಣಿಕವಾಗಿ ಶ್ರಮಿಸುವ ತಂಡವನ್ನು ಶೀಘ್ರದಲ್ಲೇ ಕಟ್ಟಲಾಗುವುದು.” ಎಂದು ಜಿಲ್ಲಾಧ್ಯಕ್ಷರ ಕಚೇರಿಯಿಂದ ಮಾಹಿತಿ ಲಭಿಸಿದೆ.

