ದಾವಣಗೆರೆ, ಜೂನ್,
ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿ, ಬರಹಗಳು ಮಾನವನ ಜೀವನಕ್ಕೆ ಸ್ಪೂರ್ತಿ. ಈ ಸಾಂಸ್ಕೃತಿಕ ಚಟುವಟಿಕೆಗಳನ್ನು ನಮ್ಮ ನಿಮ್ಮೆಲ್ಲರ ಜ್ಞಾನ, ಪರಿಜ್ಞಾನ ಹೆಚ್ಚುತ್ತದೆ ಎಂದು ಕಲಾಕುಂಚ ಕೇರಳದ ಗಡಿನಾಡ ಘಟಕ, ಯುವಕ ಸಂಘ ಗ್ರಂಥಾಲಯ ಮತ್ತು ಧರ್ಮತ್ಕಡ್ಕ ವಚನಾಲಯದ ಸಂಯುಕ್ತಾಶ್ರಯದಲ್ಲಿ ಇತ್ತೀಚಿಗೆ ಕೇರಳ ಗ್ರಂಥಾಲಯ ಪಿತಾಮಹ ಶ್ರೀ ಎ.ಎನ್.ಫಣಿಕ್ಕರ್ ಸ್ಮರಣಾರ್ಥ ವಚನಾ ಸಪ್ತಾಹ ಸಮಾರಂಭದ ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿ ಪ್ರೊ. ಪಿ.ಎನ್. ಮೂಡಿತ್ತಾಯ ಮಾತನಾಡಿದರು.
ಕನ್ನಡ ಕಣ್ಮಣಿ ಕಯ್ಯಾರ ಕಿಞ್ಞಣ್ಣ ರೈ ಇವರ ಬಗ್ಗೆ ವಿಚಾರ ಸಂಕಿರಣವನ್ನು ಕೇರಳದ ಗಡಿನಾಡ ಚಿಂತಕರು, ಸಾಹಿತಿಗಳಾದ ರಾಧಾಕೃಷ್ಣ ಕೆ. ಉಳೆಯತ್ಕಡ್ಕ ಉಪನ್ಯಾಸ ನಡೆಸಿಕೊಟ್ಟರು. ಕಾಸರಗೋಡು ಜಿಲ್ಲೆಯ ಧರ್ಮತ್ಕಡ್ಕ ಯುವಕ ಸಂಘದ ಸಭಾಂಗಣದಲ್ಲಿ ನಡೆದ ಈ ಸಮಾರಂಭದ ಅಧ್ಯಕ್ಷತೆಯನ್ನು ಕಲಾಕುಂಚ ಕೇರಳದ ಗಡಿನಾಡಿನ ಶಾಖೆಯ ಸ್ಥಾಪಕ ಅಧ್ಯಕ್ಷರಾದ ಶ್ರೀಮತಿ ಜಯಲಕ್ಷ್ಮಿ ಕಾರಂತ್ರವರು ವಹಿಸಿಕೊಂಡರು. ಮುಖ್ಯ ಅತಿಥಿಗಳಾಗಿ ಧರ್ಮತ್ಕಡ್ಕ ವಿಶ್ರಾಂತ ಪ್ರಾಂಶುಪಾಲರಾದ ಎನ್.ರಾಮಚಂದ್ರ ಭಟ್, ಶ್ರೀ ದುರ್ಗಾ ಪರಮೇಶ್ವರಿ ವಿದ್ಯಾಸಂಸ್ಥೆಯ ಪ್ರಬಂಧಕರಾದ ಶಂಕರನಾರಾಯಣ ಭಟ್, ಶ್ರೀ ದುರ್ಗಾ ಪರಮೇಶ್ವರಿ ವಿದ್ಯಾಸಂಸ್ಥೆಯ ಪ್ರಾಂಶುಪಾಲರಾದ ಸತೀಶ್ಕುಮಾರ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದು ಸಾಹಿತ್ಯ ವಿಚಾರ ಸಂಕಿರಣ ನಡೆಸಿಕೊಟ್ಟರು.
ಧರ್ಮತ್ಕಡ್ಕ ಯುವಕ ಸಂಘದ ಅಧ್ಯಕ್ಷರಾದ ರಾಮಮೋಹನ್ ಚೆಕ್ಕೆ ಸ್ವಾಗತಿಸಿದರು, ಯುವಕ ಸಂಘದ ರಾಜಾರಾಮ ರಾವ್ ನಿರೂಪಿಸಿದರು. ಕೊನೆಯಲ್ಲಿ ಶಿಕ್ಷಕಿಯಾದ ಶ್ರೀಮತಿ ಈಶ್ವರಿ ವಂದಿಸಿದರು. ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪ್ರೇಕ್ಷಕರು ಮೆಚ್ಚುಗೆ ಪಡೆದರು ಎಂದು ಕಲಾಕುಂಚದ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ಪ್ರಕಟಿಸಿದ್ದಾರೆ.

