ಉಡುಪಿ: ಸಾರ್ವಜನಿಕ ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ, ಉಡುಪಿ ಜಿಲ್ಲೆಯ ಮಟ್ಕಾ ಜುಗಾರಿ ಆರೋಪಿಯೊಬ್ಬನನ್ನು ಚಿಕ್ಕಮಗಳೂರು ಜಿಲ್ಲೆಗೆ ಗಡಿಪಾರು ಮಾಡಿ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರು ಆದೇಶ ಹೊರಡಿಸಿದ್ದಾರೆ.
ಶಿವಳ್ಳಿ ಗ್ರಾಮದ ಮಠದಬೆಟ್ಟು ನಾಗಬನದ ಬಳಿಯ ನಿವಾಸಿ ರಾಮರಾಜ್ ಅಲಿಯಾಸ್ ರಮೇಶ ಅರಸ್ (48) ಗಡಿಪಾರಾದ ಆರೋಪಿಯಾಗಿದ್ದಾನೆ.
ಈತನನ್ನು ಚಿಕ್ಕಮಗಳೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಗೆ ಗಡಿಪಾರುಗೊಳಿಸಿ ಶನಿವಾರ ಅಧಿಕೃತ ಆದೇಶ ಹೊರಡಿಸಲಾಗಿದೆ.
4 ಪ್ರಕರಣಗಳಲ್ಲಿ ಶಿಕ್ಷೆ
ಆರೋಪಿ ರಮೇಶ ಅರಸ್ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಕಾನೂನುಬಾಹಿರವಾಗಿ ಮಟ್ಕಾ ಜುಗಾರಿ ದಂಧೆ ನಡೆಸಿದ ಒಟ್ಟು 5 ಪ್ರಕರಣಗಳು ದಾಖಲಾಗಿದ್ದವು. ಈ ಪೈಕಿ ಈಗಾಗಲೇ 4 ಪ್ರಕರಣಗಳಲ್ಲಿ ಆರೋಪಿಗೆ ನ್ಯಾಯಾಲಯದಿಂದ ಶಿಕ್ಷೆಯಾಗಿದ್ದು, ಇನ್ನುಳಿದ ಒಂದು ಪ್ರಕರಣವು ಸದ್ಯ ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿದೆ.

