ಮೂಡುಬಿದಿರೆ : ಕಟ್ಟಡದ ನಾಲ್ಕನೇ ಮಹಡಿಯಲ್ಲಿ ಶೀಟ್ ಅಳವಡಿಸುವ ವೇಳೆ ಕಾಲು ಜಾರಿ ಕೆಳಗೆ ಬಿದ್ದ 17 ವರ್ಷದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ದಾರುಣ ಘಟನೆ ಮೂಡುಬಿದಿರೆಯ ಕಡೆಪಳ್ಳ ಗಾಂಧಿನಗರದಲ್ಲಿ ನಡೆದಿದೆ.
ಮೃತ ಯುವಕನನ್ನು ಮಾರ್ಪಾಡಿ ಗ್ರಾಮದ ಪಾದೆಮನೆ ನಿವಾಸಿ ಸಂತೋಷ್ ಅವರ ಪುತ್ರ ಶೌರ್ಯ ಎಸ್. ಆಚಾರ್ಯ (17) ಎಂದು ಗುರುತಿಸಲಾಗಿದೆ.
ಕಡಪಳ್ಳ ಗಾಂಧಿನಗರದಲ್ಲಿರುವ ರಾಯಲ್ ಪ್ಯಾರಡೈಸ್ ಎಂಬ ಕಟ್ಟಡದಲ್ಲಿ ಶೀಟ್ ಅಳವಡಿಸುವ ಕೆಲಸ ನಡೆಯುತ್ತಿದ್ದ ವೇಳೆ ಶರ್ಯ ನಾಲ್ಕನೇ ಮಹಡಿಯಿಂದ ಕೆಳಗೆ ಬಿದ್ದಿದ್ದಾನೆ. ಗಂಭೀರ ಗಾಯಗೊಂಡಿದ್ದ ಅವರನ್ನು ತಕ್ಷಣ ಮೂಡುಬಿದಿರೆಯ ಆಳ್ವಾಸ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಘಟನೆಗೆ ಸಂಬಂಧಿಸಿದಂತೆ, ಕೆಲಸದ ವೇಳೆ ಅಗತ್ಯ ಸುರಕ್ಷತಾ ಸಾಧನಗಳು ಹಾಗೂ ರಕ್ಷಣಾ ವ್ಯವಸ್ಥೆಗಳನ್ನು ಒದಗಿಸದಿರುವುದೇ ದುರಂತಕ್ಕೆ ಕಾರಣ ಎಂಬ ಆರೋಪ ಕೇಳಿಬಂದಿದೆ. ಕಟ್ಟಡದ ಗುತ್ತಿಗೆದಾರ ಪ್ರವೀಣ್ ಹಾಗೂ ಮಾಲಕರಾದ ನೋರ್ಟ್ ಶಾಬಾ ರೇಗೋ ವಿರುದ್ಧ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

