ಕ್ರೀಡೆ ಮೈ, ಮನಕ್ಕೆ ಹುಮ್ಮಸ್ಸು ನೀಡುತ್ತದೆ. ಕ್ರೀಡೆಯ ಮೂಲಕ ದೇಶಿಯ ಸಂಸ್ಕೃತಿಯನ್ನು ವಿಶ್ವದೆಲ್ಲೆಡೆ ಪಸರಿಸುತ್ತಿದ್ದಾರೆ ಎಂದು ಮೂಡುಬಿದಿರೆ ಜೈನಮಠದ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಹೇಳಿದರು.
ಈಶ ಫೌಂಡೇಶನ್ ಕೊಯಂಬತ್ತೂರು ಆಶ್ರಯದ ಗ್ರಾಮೋತ್ಸವ-ರೂರಲ್ ಪ್ರೀಪಿಯರ್ ಲೀಗ್ಗೆ ಪೂರ್ವಭಾವಿಯಾಗಿ ಮೂಡುಬಿದಿರೆ ಸ್ವರಾಜ್ಯ ಮೈದಾನದಲ್ಲಿ ಕ್ಲಸ್ಟರ್ ಮಟ್ಟದ ವಾಲಿಬಾಲ್ ಹಾಗೂ ಥ್ರೋಬಾಲ್ ಪಂದ್ಯಾಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಆಳ್ವಾಸ್ ಬಿ.ಪಿಎಡ್ ಕಾಲೇಜಿನ ಪ್ರಾಂಶುಪಾಲ ಮಧು ಜಿ.ಆರ್ ಮುಖ್ಯ ಅತಿಥಿಯಾಗಿ ಮಾತನಾಡಿ, ಈಶ ಫೌಂಡೇಶನ್ನ ಗ್ರಾಮೋತ್ಸವ ಕ್ರೀಡಾಕೂಟದಲ್ಲಿ ಈವರೆಗೆ ಎರಡು ಲಕ್ಷಕ್ಕೂ ಅಧಿಕ ಮಂದಿ ಕ್ರೀಡಾಪಟುಗಳು, 35 ಸಾವಿರಕ್ಕೂ ಅಧಿಕ ಗ್ರಾಮಗಳು ಭಾಗವಹಿಸಿವೆ. 38 ಸಾವಿರಕ್ಕೂ ಅಧಿಕ ಮಂದಿ ಕ್ರೀಡಾಪಟುಗಳು ಭಾಗವಹಿಸಿರುವುದು ವಿಶೇಷ. ನಗರ ಕೇಂದ್ರಿತವಾಗಿ ಇಂದು ಹಲವಾರು ಕ್ರೀಡೆ, ಕ್ರೀಡಾಕೂಟಗಳ ನಡೆಯುತ್ತಿದೆ. ಆದರೆ ಗ್ರಾಮೀಣ ಪ್ರದೇಶಗಳನ್ನು ಕೇಂದ್ರೀಕರಿಸಿ ಬೃಹತ್ ಕ್ರೀಡಾಕೂಟ ಆಯೋಜನೆ ಮಾಡುತ್ತಿರುವುದು ಸ್ವಾಗತಾರ್ಹ ಎಂದರು.
ಆಳ್ವಾಸ್ ಶಿಕ್ಷಣ ಸಂಸ್ಥೆಯ ದೈಹಿಕ ಶಿಕ್ಷಣ ನಿರ್ದೇಶಕಿ ಹಂಸವತಿ ಸಿ.ಎಚ್, ಯೋಜನೆಗಳ ಅನುಷ್ಠಾನ ಸಮಿತಿ ಮೂಡುಬಿದಿರೆ ತಾಲೂಕು ಅಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ, ಪಡುಮಾರ್ನಾಡು ಗ್ರಾಪಂ ಸದಸ್ಯ ರಮೇಶ್ ಶೆಟ್ಟಿ, ಕಾಂಗ್ರೆಸ್ ಮುಖಂಡ ಚಂದ್ರಹಾಸ ಸನಿಲ್ ಮುಖ್ಯ ಅತಿಥಿಯಾಗಿದ್ದರು. ಸಂಘಟನೆಯ ಪ್ರಮುಖರಾದ ಪ್ರಿತೇಶ್, ಅರವಿಂದ್, ದೀಪಕ್, ಮಾನಸಿ ಉಪಸ್ಥಿತರಿದ್ದರು.
ವರದಿ ರಾಯಿ ರಾಜಕುಮಾರ ಮೂಡುಬಿದಿರೆ

