ಹೆಬ್ರಿ : ತುಮಕೂರು ರಾಮಕೃಷ್ಣ ವಿವೇಕಾನಂದ ಆಶ್ರಮದ 33 ನೆ ವಾರ್ಷಿಕೋತ್ಸವದ ಅಂಗವಾಗಿ ಮೇಕ್ ಮೆನ್, ಮೇಕ್ ನೇಶನ್ ಕಾಲೇಜು ವಿದ್ಯಾರ್ಥಿಗಳಿಗಾಗಿ ತುಮಕೂರು ರಾಮಕೃಷ್ಣ ಆಶ್ರಮದ ಸಭಾಭವನದಲ್ಲಿ ಆಯೋಜಿಸಲಾದ ರಾಜ್ಯಮಟ್ಟದ ಯುವ ಸಮ್ಮೇಳನದಲ್ಲಿ ವಿವೇಕ ವಿದ್ಯಾರ್ಥಿ 2025 ರಲ್ಲಿ ರಾಜ್ಯಮಟ್ಟದಲ್ಲಿ10 ನೆ ರ್ಯಾಂಕ್ ಪಡೆದ ಮುದ್ರಾಡಿ ಎಂ. ಎನ್. ಡಿ.ಎಸ್.ಎಂ. ಅನುದಾನಿತ ಪ್ರೌಢಶಾಲೆಯ 8 ನೆ ತರಗತಿ ವಿದ್ಯಾರ್ಥಿನಿ ವಂಶಿಕಾ ಅವರಿಗೆ ಪ್ರಶಸ್ತಿ ಪತ್ರ, ನಗದು ಬಹುಮಾನ ನೀಡಿ ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.
ರಾಣೆಬೆನ್ನೂರು ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ಪ್ರಕಾಶಾನಂದಜೀ ದಿವ್ಯ ಸಾನಿಧ್ಯ ವಹಿಸಿದ್ದರು. ತುಮಕೂರು ರಾಮಕೃಷ್ಣ ಆಶ್ರಮದ ಅಧ್ಯಕ್ಷರಾದ ಸ್ವಾಮೀಜಿ ಶ್ರೀ ಶ್ರೀ ವೀರೇಶಾನಂದಜೀ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಕರ್ನಾಟಕ ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾದ ಪಿ. ಕೃಷ್ಣ ಭಟ್, ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಿವೃತ್ತ ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ ಗೌಡ, ವಿವಿಧ ಜಿಲ್ಲೆಗಳ ರಾಮಕೃಷ್ಣ ಆಶ್ರಮದ ಅಧ್ಯಕ್ಷರುಗಳು ಉಪಸ್ಥಿತರಿದ್ದರು.
ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ವಿವೇಕ ವಿದ್ಯಾರ್ಥಿ ಪರೀಕ್ಷೆಯ ಉಡುಪಿ ಜಿಲ್ಲಾ ಸಂಯೋಜಕರಾದ ನಿವೃತ್ತ ಪ್ರಾಂಶುಪಾಲರಾದ ಕಾರ್ಕಳ ಪ್ರೊ.ಪದ್ಮನಾಭ ಗೌಡ, ಕಾರ್ಕಳ ತಾಲೂಕು ಸಂಯೋಜಕರಾದ ಜ್ಯೋತಿ ಎಸ್. ಶೆಟ್ಟಿ, ಕಾರ್ಕಳದ ಶಿಕ್ಷಕರಾದ ಶಿವಸುಬ್ರಮಣ್ಯ ಭಟ್, ಮುದ್ರಾಡಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಬಲ್ಲಾಡಿ ಚಂದ್ರಶೇಖರ ಭಟ್, ವಂಶಿಕಾಳ ಪೋಷಕರಾದ ಪ್ರತಿಮಾ, ಸಹೋದರ ಹಿತಾರ್ಥ್ ಪಾಲ್ಗೊಂಡಿದ್ದರು.
ಶ್ರೀ ರಾಮಕೃಷ್ಣ ವಿವೇಕಾನಂದ ಭಾವಪ್ರಚಾರ ಪರಿಷತ್ ಕರ್ನಾಟಕ ವತಿಯಿಂದ ರಾಜ್ಯಮಟ್ಟದ ವಿವೇಕ ವಿದ್ಯಾರ್ಥಿ 2025 ಪರೀಕ್ಷೆ ಡಿಸೆಂಬರ್ 9 ರಂದು ನಡೆದಿತ್ತು. ರಾಜ್ಯದ ಸುಮಾರು 10000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಪರೀಕ್ಷೆಯನ್ನು ಬರೆದಿದ್ದರು.
ರಾಜ್ಯಮಟ್ಟದ ಈ ಪರೀಕ್ಷೆಯಲ್ಲಿ ಗ್ರಾಮೀಣ ಭಾಗದ ಮುದ್ರಾಡಿ ಉಪ್ಪಳದ ಪ್ರತಿಭೆ ವಂಶಿಕಾಳ ಸಾಧನೆ ಗಮನಾರ್ಹವಾಗಿದ್ದು ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.

