ಮಂಗಳೂರು: ಜುಲೈ 20 ಎಸ್ ಸಿ ಎಸ್ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಕಲ್ಯಾಣ ಮಂಡಳಿ ವತಿಯಿಂದ 2026–27ನೇ ಶೈಕ್ಷಣಿಕ ವರ್ಷದ “ಪ್ರಸ್ಥಾನಂ–2K26” ಸಂಸ್ಥೆಯ ಪರಿಚಯ ಹಾಗೂ ವಿದ್ಯಾರ್ಥಿ ಪ್ರವೇಶೋತ್ಸವ ಕಾರ್ಯಕ್ರಮ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. 2026–29ನೇ ಸಾಲಿನ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳನ್ನು ಆತ್ಮೀಯವಾಗಿ ಸ್ವಾಗತಿಸಿ, ಕಾಲೇಜಿನ ಧ್ಯೇಯ, ಮೌಲ್ಯಗಳು, ಶೈಕ್ಷಣಿಕ ಸಂಸ್ಕೃತಿ ಹಾಗೂ ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವ ವಿಕಸನಕ್ಕೆ ಲಭ್ಯವಿರುವ ಅವಕಾಶಗಳ ಕುರಿತು ಪರಿಚಯಿಸುವ ಉದ್ದೇಶದಿಂದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಎಂ ಸಿ ಎಫ್ ಲಿಮಿಟೆಡ್, ಮಂಗಳೂರು ಸಂಸ್ಥೆಯ ನಿವೃತ್ತ ಮಾನವ ಸಂಪನ್ಮೂಲ ಮತ್ತು ಆಡಳಿತ ವಿಭಾಗದ ಮುಖ್ಯಸ್ಥರು, ಐ ಐ ಎಸ್ ಡಿ ಆರ್ ಸಲಹೆಗಾರರು ಹಾಗೂ ಎನ್ ಐ ಪಿ ಎಂ ಮಂಗಳೂರು ಘಟಕದ ಮಾಜಿ ಅಧ್ಯಕ್ಷರಾದ ಶ್ರೀ ಪಿ. ಸುರೇಶ್ ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿ.ವಿದ್ಯಾರ್ಥಿಗಳಿಗೆ ಶಿಸ್ತು, ವೃತ್ತಿಪರತೆ, ನೈತಿಕ ಮೌಲ್ಯಗಳು ಹಾಗೂ ನಿರಂತರ ಕಲಿಕೆಯ ಮಹತ್ವವನ್ನು ತಿಳಿಸಿ, ಕಾಲೇಜು ನೀಡುವ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಂಡು ಉಜ್ವಲ ಭವಿಷ್ಯ ರೂಪಿಸಿಕೊಳ್ಳುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಕೆ.ಇ.ಸಿ.ಟಿ.®, ಎಸ್ ಸಿ ಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಶ್ರೀ ಯು. ಕೆ. ಖಾಲಿದ್ ಅವರು 2026–27ನೇ ಶೈಕ್ಷಣಿಕ ವರ್ಷದ ಸಂಸ್ಥೆಯ ವಾರ್ಷಿಕ ಧ್ಯೇಯವಾಕ್ಯವನ್ನು ಅನಾವರಣಗೊಳಿಸಿ, ಅಧ್ಯಕ್ಷೀಯ ಭಾಷಣದ ಮೂಲಕ ವಿದ್ಯಾರ್ಥಿಗಳಿಗೆ ಸಂಸ್ಥೆಯ ಮೌಲ್ಯಗಳನ್ನು ಪಾಲಿಸಿಕೊಂಡು ವೈಯಕ್ತಿಕ ಹಾಗೂ ವೃತ್ತಿಪರ ಬೆಳವಣಿಗೆಯತ್ತ ಸಾಗುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು
2023–26ನೇ ಸಾಲಿನ ಬಿ.ಕಾಂ.ನ ಹಳೆ ವಿದ್ಯಾರ್ಥಿ ಶ್ರೀ ಬಿ. ಸುದೀಪ್ ರೈ ಅವರು ತಮ್ಮ ಕಾಲೇಜು ಜೀವನದ ಅನುಭವಗಳನ್ನು ಹಂಚಿಕೊಂಡು, ಶೈಕ್ಷಣಿಕ, ಸಹಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿದರು.
ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಹಾರ್ದಿಕ್ ಪಿ. ಚೌಹಾಣ್ ಅವರು ಶುಭಾಶಯ ಸಂದೇಶ ನೀಡಿ, ವಿದ್ಯಾರ್ಥಿಗಳು ಬದ್ಧತೆ, ಶಿಸ್ತು ಮತ್ತು ಶೈಕ್ಷಣಿಕ ಶ್ರೇಷ್ಠತೆಯನ್ನು ಅಳವಡಿಸಿಕೊಳ್ಳುವಂತೆ ತಿಳಿಸಿದರು.
ಇಂಗ್ಲಿಷ್ ವಿಭಾಗದ ಮುಖ್ಯಸ್ಥೆ ಹಾಗೂ ವಿದ್ಯಾರ್ಥಿ ಕಲ್ಯಾಣ ಮಾರ್ಗದರ್ಶಕಿ ಶ್ರೀಮತಿ ಪ್ರೊ.ಮಧುಮತಿ ಜೆ. ರಾಜ್ ಅವರು ಸ್ವಾಗತಿಸಿದರು. ವ್ಯವಹಾರ ನಿರ್ವಹಣಾ ವಿಭಾಗದ ಮುಖ್ಯಸ್ಥರು ಹಾಗೂ ವಿದ್ಯಾರ್ಥಿ ಕಲ್ಯಾಣ ಮಾರ್ಗದರ್ಶಕರಾದ ಶ್ರೀ ತಿಲಕ್ ಗೌಡ ಅವರು ವಂದನಾರ್ಪಣೆ ಸಲ್ಲಿಸಿದರು.ಇಂಟೀರಿಯರ್ ಡಿಸೈನ್ ವಿಭಾಗದ ಉಪನ್ಯಾಸಕಿ ಫಾತಿಮತುಲ್ ಅಝ್ಮಿಯಾ ಕಾರ್ಯಕ್ರಮ ನಿರೂಪಿಸಿದರು.

