ಉಡುಪಿ : ರೋಟರಿ ಅಂಬಲಪಾಡಿ ಸಂಸ್ಥೆಯ 25ನೇ ವರ್ಷದ ರಜತ ಮಹೋತ್ಸವ ಸಮಾರೋಪ ಹಾಗೂ 2026-27ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉಡುಪಿಯ ಪುರಭವನದಲ್ಲಿ ಅದ್ಧೂರಿಯಾಗಿ ನಡೆಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಾಜಿ ಜಿಲ್ಲಾ ಗವರ್ನರ್ ರೋ. ಪಿ.ಡಿ.ಜಿ. ಆರ್. ಕೃಷ್ಣ ದೀಪ ಬೆಳಗಿಸಿ ಸಮಾರಂಭವನ್ನು ಉದ್ಘಾಟಿಸಿ, ನೂತನ ಪದಾಧಿಕಾರಿಗಳಿಗೆ ಪದಪ್ರದಾನ ನೆರವೇರಿಸಿದರು. ರೋಟರಿ ಅಂಬಲಪಾಡಿ ಸಂಸ್ಥೆಯು ಕಳೆದ 25 ವರ್ಷಗಳಿಂದ ವಿವಿಧ ಸಮಾಜಮುಖಿ ಸೇವಾ ಕಾರ್ಯಗಳ ಮೂಲಕ ಜನಮನ ಗೆದ್ದಿರುವುದನ್ನು ಶ್ಲಾಘಿಸಿದ ಅವರು, ಸಂಸ್ಥೆಯು ತನ್ನದೇ ಆದ ಕಟ್ಟಡ ನಿರ್ಮಾಣಕ್ಕಾಗಿ ಜಾಗ ಖರೀದಿಸಲು 25 ಲಕ್ಷ ರೂ.ಗಳ ಚೆಕ್ ವಿತರಿಸಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿವಿಧ ಸಮಾಜಸೇವಾ ಯೋಜನೆಗಳಿಗೆ ಆರ್ಥಿಕ ನೆರವು, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ರೋಟರಿ ಅಂಬಲಪಾಡಿಯಲ್ಲಿ ಸೇವೆ ಸಲ್ಲಿಸಿದ ಎಲ್ಲ ಮಾಜಿ ಅಧ್ಯಕ್ಷರನ್ನು ಸನ್ಮಾನಿಸಲಾಯಿತು. ಮುಂದೆಯೂ ಸಂಸ್ಥೆ ಇದೇ ರೀತಿಯ ಜನಸೇವಾ ಕಾರ್ಯಗಳನ್ನು ನಿರಂತರವಾಗಿ ನಡೆಸಲಿ ಎಂದು ಶುಭ ಹಾರೈಸಿದರು.
ವೇದಿಕೆಯಲ್ಲಿ ಮಾಜಿ ಜಿಲ್ಲಾ ಗವರ್ನರ್ ಹಾಗೂ ಮೇಜರ್ ಡೋನರ್ ರೋ. ಬಿ. ರಾಜಾರಾಮ್ ಭಟ್, ಸಹಾಯಕ ಗವರ್ನರ್ ರೋ. ಆನಂದ್ ಶೆಟ್ಟಿ, ನೂತನ ಸಹಾಯಕ ಗವರ್ನರ್ ರೋ. ವಿಜಯ್ ಕುಮಾರ್ ಶೆಟ್ಟಿ, ವಲಯ ಸೇನಾನಿ ರೋ. ರವಿರಾಜ್ ಕಿದಿಯೂರು, ನೂತನ ವಲಯ ಸೇನಾನಿ ರೋ. ದೀಪಕ್ ಕಿರಣ್, ರಜತ ಮಹೋತ್ಸವ ಸಮಿತಿ ಅಧ್ಯಕ್ಷ ರೋ. ಜಯಪ್ರಕಾಶ್ ಕೆದ್ಲಾಯ, ಕಾರ್ಯದರ್ಶಿ ಅಶೋಕ್ ಶೆಟ್ಟಿ, 2025-26ನೇ ಸಾಲಿನ ಅಧ್ಯಕ್ಷ ನವೀನ ಚಂದ್ರ ಸಾಲಿಯನ್, ಕಾರ್ಯದರ್ಶಿ ರಾಜೇಶ್ ಕರ್ಕೇರ, 2026-27ನೇ ಸಾಲಿನ ನೂತನ ಅಧ್ಯಕ್ಷ ಪ್ರಮೋದ್ ರೈ, ಕಾರ್ಯದರ್ಶಿ ಸಂತೋಷ್ ಕುಮಾರ್ ಶೆಟ್ಟಿ ಹಾಗೂ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.
2025-26ನೇ ಸಾಲಿನ ಅಧ್ಯಕ್ಷ ನವೀನ ಚಂದ್ರ ಸಾಲಿಯನ್ ಅತಿಥಿಗಳನ್ನು ಸ್ವಾಗತಿಸಿದರು. ಕಾರ್ಯಕ್ರಮವನ್ನು ಮೋಹನ್ ದಾಸ್ ಪೈ ಮತ್ತು ಶ್ರೀಶ್ ಆಚಾರ್ಯ ನಿರೂಪಿಸಿದರು. ಅಶೋಕ್ ಶೆಟ್ಟಿ ವಂದಿಸಿದರು. ಬಳಿಕ ರೋಟರಿ ಸದಸ್ಯರಿಂದ ಸಾಂಸ್ಕೃತಿಕ ಹಾಗೂ ಮನರಂಜನಾ ಕಾರ್ಯಕ್ರಮಗಳು ನಡೆಯುವ ಮೂಲಕ ಸಮಾರಂಭಕ್ಕೆ ಮೆರುಗು ತಂದವು.
