ಎಸ್.ಡಿ.ಎಂ. ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನಗಳ ಕಾಲೇಜು : ವಾರ್ಷಿಕೋತ್ಸವ ಸಮಾರಂಭ

0
4

ಉಜಿರೆ : ಕಾಲೇಜಿನ ಪ್ರಗತಿ-ಸಾಧನೆ ಬಗ್ಯೆ ಅವಲೋಕನದೊಂದಿಗೆ ಮುಂದಿನ ವರ್ಷದ ಚಟುವಟಿಕೆಗಳಿಗೆ ಸಿದ್ಧತೆ ನಡೆಸುವುದೇ ಕಾಲೇಜು ವಾರ್ಷಿಕೋತ್ಸವದ ಉದ್ದೇಶ ಎಂದು ಜಾಮ್ನಗರ್‌ನಲ್ಲಿರುವ ಆಯುಷ್ ಇಲಾಖೆಯ ಆಯುರ್ವೇದ ಸಂಶೋಧನಾ ಸಂಸ್ಥೆಯ ಯೋಗ ವಿಭಾಗದ ನಿವೃತ್ತ ಪ್ರೊಫೆಸರ್ ಡಾ. ಅರ್ಪಣ್ ಎ. ಭಟ್ ಹೇಳಿದರು.

ಅವರು ಬುಧವಾರ ಧರ್ಮಸ್ಥಳದಲ್ಲಿ ಅಮೃತವರ್ಷಿಣಿ ಸಭಾಭವನದಲ್ಲಿ ಉಜಿರೆಯಲ್ಲಿರುವ ಎಸ್.ಡಿ.ಎಂ. ಪ್ರಕೃತಿಚಿಕಿತ್ಸಾ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಶುಭಾಶಂಸನೆ ಮಾಡಿದರು.

ನಮ್ಮ ಬದುಕಿನಲ್ಲಿ ಆರೋಗ್ಯ ಮತ್ತು ವೈದ್ಯಕೀಯ ಕ್ಷೇತ್ರ ನಿರ್ವಹಣೆಗೆ ಹೆಚ್ಚಿನ ಮಹತ್ವ ಹಾಗೂ ಆದ್ಯತೆ ಇದೆ. ಪ್ರಾಚೀನ ಕಾಲದಲ್ಲಿ ಜನರು ತಮ್ಮದೇ ಆದ ತತ್ವ-ಸಿದ್ದಾಂತಗಳು, ಧಾರ್ಮಿಕ ನಂಬಿಕೆ-ನಡವಳಿಕೆಗಳು, ಆಧ್ಯಾತ್ಮಿಕ ಚಿಂತನ-ಮಂಥನದೊಂದಿಗೆ, ಸತ್ಯ, ಧರ್ಮ, ನ್ಯಾಯ-ನೀತಿಯ ಮಾರ್ಗದಲ್ಲಿ ನಡೆದು ಸುಖ-ಶಾಂತಿ, ನೆಮ್ಮದಿಯ ಜೀವನ ನಡೆಸುತ್ತಿದ್ದರು. ಧರ್ಮ ಮತ್ತು ಆಧ್ಯಾತ್ಮ ಭಾರತೀಯರ ಆತ್ಮದಷ್ಟೇ ಮುಖ್ಯವಾಗಿದೆ.

ಆದರೆ ಆಧುನಿಕ ವೈಜ್ಞಾನಿಕ ಸಂಶೋಧನೆ ಮತ್ತು ತಂತ್ರಜ್ಞಾನದ ಪ್ರಗತಿಯಿಂದಾಗಿ ಇಂದು ನಾವು ಬದುಕಿನಲ್ಲಿ ಅನೇಕ ಸಮಸ್ಯೆಗಳನ್ನು, ಸವಾಲುಗಳನ್ನು ಎದುರಿಸುತ್ತಿದ್ದೇವೆ. ಸುಖ-ಶಾಂತಿ, ನೆಮ್ಮದಿ ಮರೀಚಿಕೆಯಾಗಿದೆ. ನಮ್ಮ ಪ್ರಾಚೀನ ತತ್ವ-ಸಿದ್ದಾಂತಗಳು, ಪಾರಂಪರಿಕ ವಿಧಾನಗಳನ್ನು ಮರೆತಿದ್ದೇವೆ. ಪ್ರಕೃತಿ-ಪರಿಸರವನ್ನು ಕಡೆಗಣಿಸುತ್ತಿದ್ದು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಿದೆ ಎಂದು ಅವರು ಹೇಳಿದರು.

ಧರ್ಮಸ್ಥಳ ಎಂಬ ಹೆಸರಿಗೆ ಅನ್ವರ್ಥವಾಗಿ ಇಲ್ಲಿ ಸತ್ಯ, ಧರ್ಮ, ನ್ಯಾಯ, ನೀತಿ ಇದೆ. ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹಾಗೂ ಮಂಗಳೂರಿನ ಖ್ಯಾತ ಹೃದ್ರೋಗ ತಜ್ಞ ಡಾ. ಬಿ.ಎಂ. ಹೆಗ್ಡೆಯವರ ಸಹೃದಯ ಬಹುಮುಖಿ ಸಮಾಜಸೇವೆ ಹಾಗೂ ಉತ್ತಮ ವಾಕ್‌ಪಟುತ್ವವನ್ನು ಅವರು ಶ್ಲಾಘಿಸಿ ಅಭಿನಂದಿಸಿದರು.
ಆಯುರ್ವೇದ, ಪ್ರಕೃತಿಚಿಕಿತ್ಸೆ ಹಾಗೂ ಯೋಗಾಭ್ಯಾಸಕ್ಕೆ ಧರ್ಮಸ್ಥಳದ ಹೆಗ್ಗಡೆಯವರ ಕೊಡುಗೆಯನ್ನು ಅವರು ಧನ್ಯತೆಯಿಂದ ಸ್ಮರಿಸಿದರು.

ಕಾಲೇಜಿನ ಪ್ರತಿಭಾವಂತ ಸಾಧಕರನ್ನು ಗೌರವಿಸಲಾಯಿತು. ಅಧ್ಯಕ್ಷತೆ ವಹಿಸಿದ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ. ಹರ್ಷೇಂದ್ರ ಕುಮಾರ್ ಮಾತನಾಡಿ ಪ್ರಕೃತಿಚಿಕಿತ್ಸಾ ಆಸ್ಪತ್ರೆ ಮತ್ತು ಕಾಲೇಜಿನ ಆರಂಭ ಹಾಗೂ ಪ್ರಗತಿಯ ಹಿನ್ನೆಲೆಯನ್ನು ವಿವರಿಸಿ ಕಾಲೇಜಿನ ಪ್ರಗತಿ-ಸಾಧನೆಯಲ್ಲಿ ಪ್ರಾಂಶುಪಾಲ ಡಾ. ಪ್ರಶಾಂತ ಶೆಟ್ಟಿ ಮತ್ತು ಉಪನ್ಯಾಸಕರು ಹಾಗೂ ಸಿಬ್ಬಂದಿಯ ಸೇವೆಯನ್ನು ಸ್ಮರಿಸಿದರು.

ಪ್ರಕೃತಿಚಿಕಿತ್ಸಾ ಪದ್ಧತಿ ಬಗ್ಯೆ ಹೆಚ್ಚಿನ ಅರಿವು ಮತ್ತು ಜಾಗೃತಿ ಮೂಡಿಸಲು ಸಂಶೋಧನಾ ಕಾರ್ಯ ನಡೆಸಬೇಕು ಎಂದು ಅವರು ಸಲಹೆ ನೀಡಿದರು.
ಡಾ. ರಿಶಿಕಾ ರೈ ವರದಿ ಸಾದರಪಡಿಸಿದರು.

ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಎಸ್. ಸತೀಶ್ಚಂದ್ರ, ಡಾ. ಶಿವಪ್ರಸಾದ ಶೆಟ್ಟಿ, ಡಾ. ಗೀತಾ ಬಿ. ಶೆಟ್ಟಿ ಉಪಸ್ಥಿತರಿದ್ದರು. ಎಸ್.ಡಿ.ಎಂ. ಪ್ರಕೃತಿಚಿಕಿತ್ಸಾ ಕಾಲೇಜಿನ ಪ್ರಾಂಶುಪಾಲ ಡಾ. ಪ್ರಶಾಂತ ಶೆಟ್ಟಿ ಸ್ವಾಗತಿಸಿದರು. ಉಪಪ್ರಾಂಶುಪಾಲರಾದ ಡಾ. ಸುಜಾತ ಧನ್ಯವಾದವಿತ್ತರು. ಡಾ. ರಿಶಿಕಾ ರೈ ಮತ್ತು ಕುಮಾರಿ ಅನನ್ಯಾ ಕಾರ್ಯಕ್ರಮ ನಿರ್ವಹಿಸಿದರು.