ಬಡವರ ಸೇವೆ ದೇವರ ಸೇವೆಗೆ ಸಮಾನ : ಡಾ. ಹಾಜಿ ಯು.ಕೆ. ಮೋನು

0
11

ಮಂಗಳೂರು : “ವೈದ್ಯರು ಮತ್ತು ವೈದ್ಯಕೀಯ ಸ್ನಾತಕೋತ್ತರ ವಿದ್ಯಾರ್ಥಿಗಳು ವಿವಿಧ ವೈದ್ಯಕೀಯ ಮತ್ತು ಶೈಕ್ಷಣಿಕ ಕಾರ್ಯಾಗಾರಗಳಲ್ಲಿ ಸಕ್ರೀಯವಾಗಿ ಭಾಗವಹಿಸಿ ನೂತನ ಆವಿಷ್ಕಾರ ಮತ್ತು ನೂತನ ಬೆಳವಣಿಗಳಿಗೆ ಸ್ಪಂದಿಸಿ ತಮ್ಮ ಜ್ಞಾನವನ್ನು ವೃದ್ಧಿಸಿ ರೋಗಿಗಳ ನಿರೀಕ್ಷಿತ ಮಟ್ಟಕ್ಕೆ ಸ್ಪಂದಿಸಿ, ವೃತ್ತಿಯಲ್ಲಿ ಯಶಸ್ಸು ಸಾಧಿಸಿ ಜನಮನ್ನಣೆಗೆ ಪಾತ್ರರಾಗಬೇಕು” ಎಂದು ಕಣಚೂರು ವೈದ್ಯಕೀಯ ಶಿಕ್ಷಣ ಮಹಾವಿದ್ಯಾಲಯದ ಅಧ್ಯಕ್ಷರಾದ ಡಾ. ಹಾಜಿ ಯು. ಕೆ. ಮೋನುರವರು ಸಲಹೆ ನೀಡಿದ್ದಾರೆ.

ಅವರು ತಮ್ಮ ಸಂಸ್ಥೆಯ ಮಕ್ಕಳ ಶಾಸ್ತ್ರ ವಿಭಾಗ ಹಾಗೂ ಚರ್ಮರೋಗ ಶಾಸ್ತ್ರ ವಿಭಾಗದ ಜಂಟಿ ಆಶ್ರಯದಲ್ಲಿ ಸಂಸ್ಥೆಯ ನಿರಂತರ ವೈದ್ಯಕೀಯ ಶಿಕ್ಷಣದ ಅಂಗವಾಗಿ ತಾ: 13.06.2026 ರಂದು ತಮ್ಮ ಕಾಲೇಜಿನ ಡೋಮ್ ಸಭಾಂಗಣದಲ್ಲಿ ಜರಗಿದ ಒಂದು ದಿನ ಅವಧಿಯ ಮಕ್ಕಳಲ್ಲಿ ಕಾಣಿಸುವ ಚರ್ಮರೋಗಗಳು ಮತ್ತು ಚಿಕಿತ್ಸೆಗಳ ಬಗ್ಗೆ ಶೈಕ್ಷಣಿಕ ಕಾರ್ಯಾಗಾರವನ್ನು ಉದ್ಘಾಟಿಸಿ ವೈದ್ಯಕೀಯ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದರು. ವೈದ್ಯರು ರೋಗಿಗಳಿಗೆ ನಗುಮುಖದ ಸೇವೆಯನ್ನು ನೀಡಿ ಅವರ ಪ್ರೀತಿ, ವಿಶ್ವಾಸಕ್ಕೆ ಸ್ಪಂದಿಸಬೇಕೆಂದು ಕರೆ ನೀಡಿ ಬಡವರ ಸೇವೆ. ದೇವರ ಸೇವೆಗೆ ಸಮಾನ ಎಂದು ನುಡಿದು ಕಾರ್ಯಾಗಾರಕ್ಕೆ ಯಶಸ್ಸು ಕೋರಿದರು.

ಕಣಚೂರು ಆರೋಗ್ಯ ವಿಜ್ಞಾನ ಸಲಹಾ ಸಮಿತಿಯ ಸದಸ್ಯರಾದ ಡಾ. ಎಂ. ವಿ. ಪ್ರಭು ಅವರು ಈ ಕಾರ್ಯಾಗಾರದಲ್ಲಿ ರಾಜ್ಯ ಮಟ್ಟದ ವಿವಿಧ ಪ್ರತಿಷ್ಠಿತ ವೈದ್ಯಕೀಯ ಸಂಸ್ಥೆಗಳ ತಜ್ಞರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಕ್ಕಳಲ್ಲಿ ಕಂಡು ಬರುವ ಚರ್ಮರೋಗದ ಕಾರಣಗಳು, ಲಕ್ಷಣಗಳು ಮತ್ತು ಚಿಕಿತ್ಸಾ ವಿಧಾನಗಳ ಬಗ್ಗೆ ಹಾಗೂ ಇತ್ತೀಚಿಗಿನ ಪ್ರಗತಿ, ಬೆಳವಣಿಗೆಗಳು ಮತ್ತು ಆಧುನಿಕ ತಂತ್ರಜ್ಞಾನಗಳ ಬಗ್ಗೆ ಅತಿಥಿ ಉಪನ್ಯಾಸ ನೀಡುವರೆಂದು ಮಾಹಿತಿ ನೀಡಿದರು. ಮಕ್ಕಳ ಶಾಸ್ತ್ರ ವಿಭಾಗದ ‘ಹಿರಿಯ ಪ್ರಾದ್ಯಾಪಕರಾದ ಡಾ. ಶಂಶಾದ್ ಖಾನ್‌ ರವರು ಕಾರ್ಯಾಗಾರದ ಉದ್ದೇಶ ಮತ್ತು ಮಹತ್ವವನ್ನು ವಿವರಿಸಿದರು.

ಈ ವೈದ್ಯಕೀಯ ಶೈಕ್ಷಣಿಕ ಕಾರ್ಯಾಗಾರದಲ್ಲಿ ಡಾ. ಸ್ಪಂದನಾ ಹೆಗ್ಡೆ, ಡಾ. ಸಹನಾ ಶ್ರೀನಿವಾಸ್, ಡಾ. ನಿಖಿತಾ ಸೋನ್ಸ್, ಡಾ. ಸ್ಮಿತಾ ಪ್ರಭು, ಡಾ. ಸಹನಾ ಶ್ರೀಹರಿ, ಡಾ. ನೂರುಲ್ಲಾ ರವರು ಮಕ್ಕಳ ಚರ್ಮ ಆರೋಗ್ಯ ರಕ್ಷಣೆ ಬಗ್ಗೆ ಉಪನ್ಯಾಸ ನೀಡಿದರು.

ಸಂಘಟನಾ ಸಮಿತಿಯ ಅಧ್ಯಕ್ಷರಾದ ಡಾ. ಒನೀಲ್ ಫೆರ್ನಾಡಿಸ್‌ರವರು ಸ್ವಾಗತಿಸಿದರು. ವೇದಿಕೆಯಲ್ಲಿ ಚರ್ಮರೋಗ ಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಶ್ರುತಕೀರ್ತಿ ಶೆಣೈ ಉಪಸ್ಥಿತರಿದ್ದರು. ಸಂಘಟನಾ ಕಾರ್ಯದರ್ಶಿ ಡಾ. ಚೇತನ್ ತಾಂಡೆಲ್ ವಂದಿಸಿದರು. ಡಾ. ಪ್ರೀತಿ ಕಾರ್ಯಕ್ರಮ ನಿರೂಪಿಸಿದರು. ಸುಮಾರು 150 ವೈದ್ಯಕೀಯ ಪ್ರತಿನಿಧಿಗಳು ಈ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

ವರದಿ : ಎಂ.ವಿ. ಮಲ್ಯ

LEAVE A REPLY

Please enter your comment!
Please enter your name here